ಬೆಂಗಳೂರು: ಅಶೋಕ್ ಕಡಬ ನಿರ್ದೇಶನದ ಸಂಹಿತ ವಿನ್ಯಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕವನ ಪಿಕ್ಚರ್ಸ್ ಲಾಂಛನದಲ್ಲಿ ಬಿ. ಹನುಮಂತರಾಜು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಅರುಣ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಅರುಣ್ ಅವರ ಸಂಕಲನವಿದೆ. ನಂದೀಶ್ ಕುಮಾರ್, ಸಂಹಿತ ವಿನ್ಯಾ, ವಿನ್ನಿ ಫರ್ನಾಂಡಿಸ್ ಮುಂತಾದವರ ತಾರಾಬಳಗವಿದೆ.
ಕಮರ್ಷಿಯಲ್ ಚಿತ್ರಗಳ ನಡುವೆ ಮಹಿಳಾ ಪ್ರಧಾನ ಕಥಾ ಹಂದರದ ಸೀತಮ್ಮ ಬಂದಳು ಸಿರಿ ಮಲ್ಲಿಗೆ ತೊಟ್ಟು ಕಲಾತ್ಮಕ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಗಂಡ ಸತ್ತ ವಿಧೆಯೊಬ್ಬಳು ನಿಜ ಜೀವನದಲ್ಲಿ ಹೇಗೆ ಹೋರಾಟ ಮಾಡುತ್ತಾಳೆ ಎಂಬುದರ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರ ತಂಡ ಹೇಳುತ್ತದೆ.
ಹಾಲು ತುಪ್ಪ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಸಂಹಿತಾ ವಿನ್ಯಾ, ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದ ನಂದೀಶ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಹಾಶಿವರಾತ್ರಿ ಹಬ್ಬವಾದ ನಾಳೆ ಚಿತ್ರ ತೆರೆಗೆ ಬರುತ್ತಿದ್ದು, ಪ್ರೇಕ್ಷಕರು ಯಾವ ರೀತಿ ಸಿನಿಮಾ ಸ್ವೀಕರಿಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement