ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಿಸಲು ನನ್ನ ಪ್ರಭಾವವನ್ನು ಬಳಸಲೇಬೇಕಿತ್ತು: ನಟಿ ಸುಧಾರಾಣಿ

ಅಣ್ಣನ ಮಗಳು ಅತೀವ್ರ ನೋವಿನಿಂದ ಬಳಲುತ್ತಿದ್ದಳು. ಆದರೆ, ಆಸ್ಪತ್ರೆಯ ಸಿಬ್ಬಂದಿಗಳು ದಾಖಲು ಮಾಡಿಕೊಳ್ಳಲು ನಿರಾಕರಿಸುತ್ತಿದ್ದರು. ಹೀಗಾಗಿ ನನ್ನ ಪ್ರಭಾವವನ್ನು ಬಳಸಲೇಬೇಕಿತ್ತು ಎಂದು ನಟಿ ಸುಧಾರಾಣಿಯವರು ಹೇಳಿದ್ದಾರೆ. 
ಸುಧಾರಾಣಿ
ಸುಧಾರಾಣಿ
Updated on

ಬೆಂಗಳೂರು: ಅಣ್ಣನ ಮಗಳು ಅತೀವ್ರ ನೋವಿನಿಂದ ಬಳಲುತ್ತಿದ್ದಳು. ಆದರೆ, ಆಸ್ಪತ್ರೆಯ ಸಿಬ್ಬಂದಿಗಳು ದಾಖಲು ಮಾಡಿಕೊಳ್ಳಲು ನಿರಾಕರಿಸುತ್ತಿದ್ದರು. ಹೀಗಾಗಿ ನನ್ನ ಪ್ರಭಾವವನ್ನು ಬಳಸಲೇಬೇಕಿತ್ತು ಎಂದು ನಟಿ ಸುಧಾರಾಣಿಯವರು ಹೇಳಿದ್ದಾರೆ. 

ಕಿಡ್ನಿ ಸ್ಟೋನ್ ನಿಂದ ರಾತ್ರಿ 11.45ರ ಸುಮಾರಿಗೆ ನನ್ನ ಅಣ್ಣನ ಮಗಳಿಗೆ ಅತೀವ್ರ ನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಶೇಷಾದ್ರಿಪುರಂನಲ್ಲಿರುವ ಅಪೊಲೋ ಆಸ್ಪತ್ರೆಗೆ ಕರೆತರಲಾಗಿತ್ತು. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕೂಡ ಆಸ್ಪತ್ರೆಯವರು ದಾಖಲು ಮಾಡಿಕೊಳ್ಳಲಿಲ್ಲ. ಹಾಸಿಗೆಗಳು ಖಾಲಿಯಿಲ್ಲ ಎಂದು ಹೇಳಿದ್ದರು. ಗಂಟೆಗಟ್ಟಲೆ ಕಾದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 

ನೋವು ಹೆಚ್ಚಾಗಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಸ್ಪತ್ರೆ ಸಿಬ್ಬಂದಿಗಳು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ಆಸ್ಪತ್ರೆಯಲ್ಲಿ ತುರ್ತುನಿಗಾಘಟಕ ಖಾಲಿಯಿತ್ತು. ಅಲ್ಲಿಯೂ ರೋಗಿಗಳಿದಿದ್ದರೆ, ಪರಿಸ್ಥಿತಿಯನ್ನು ನಾನೇ ಅರ್ಥಮಾಡಿಕೊಂಡು ಸುಮ್ಮನಾಗುತ್ತಿದ್ದೆ. ಆದರೆ, ಖಾಲಿಯಿದ್ದರೂ ಚಿಕಿತ್ಸೆ ನೀಡಲು ಆಸ್ಪತ್ರೆಯವರು ಸಿದ್ಧರಿರಲಿಲ್ಲ. ಅನಿವಾರ್ಯವಾಗಿ ನಾನು ಪ್ರಭಾವ ಬಳಸಲೇಬೇಕಾಯಿತು. 

ಅಣ್ಣನ ಮಗಳ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ನಾನು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿ. ನಮ್ಮ ಕಷ್ಟ ಅರ್ಥಮಾಡಿಕೊಂಡ ಅವರು, ಕೂಡಲೇ ಆಸ್ಪತ್ರೆಯ ನಿರ್ವಾಹಕರೊಂದಿಗೆ ಮಾತುಕತೆ ನಡೆಸಿದರು. ಭಾಸ್ಕರ್ ರಾವ್ ಅವರಿಂದ ಬಹಳಷ್ಟು ಸಹಾಯವಾಯಿತು. ಕರೆ ಮಾಡಿದ ಕೂಡಲೇ ಆಸ್ಪತ್ರೆಯೊಳಗೆ ಹೋಗುವಂತೆ ತಿಳಿಸಿದರು. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಚಿಕಿತ್ಸೆ ನೀಡಿದರು ಎಂದು ಸುಧಾರಾಣಿಯವರು ಹೇಳಿದ್ದಾರೆ. 

ಆಸ್ಪತ್ರೆಯವರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ವೆಂಟಿಲೇಟರ್ ಅಗತ್ಯವಿದ್ದು, ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ತಿಳಿಸಿದರು. ವೆಂಟಿಲೇಟರ್ ಏಕೆ ಬೇಕೆಂದು ನಾವು ಪ್ರಶ್ನಿಸಿದಾಗ, ವೈದ್ಯರು ಯಾವೇದ ಪ್ರತಿಕ್ರಿಯೆ ನೀಡಲಿಲ್ಲ. ನಂತರ ನಾವು ರಾಮಯ್ಯ ಆಸ್ಪತ್ರೆಗೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ದಾಖಲು ಮಾಡಿದೆವು. 

ನಾನೋನೋ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದೆ, ಸಾಮಾನ್ಯ ಜನರ ಕಥೆಯೇನು? ಇಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. 

ಈ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸುಧಾಕರ್ ಅವರು, ನಟಿ ಸುಧಾರಾಣಿ ಅವರು ಆಸ್ಪತ್ರೆಗೆ ತೆರಳಿದ್ದ ವೇಳೆ ಅವರ ಅಸ್ವಸ್ಥ ಬಂಧುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿ, ಕಾಯಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಸುಧಾರಾಣಿ ಅವರು ಬಂಧುವಿನ ಆರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡ ಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಚಿಕಿತ್ಸೆ ತಡ ಮಾಡಿದೆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com