ದರ್ಶನ್ ನಾಯಕ ನಟನಾಗಿರುವ ಮುಂಬರುವ ಬಹು ನಿರೀಕ್ಷಿತ ರಾಜಾ ವೀರ ಮದಕರಿ ನಾಯಕ ಶೂಟಿಂಗ್ ಫೆಬ್ರವರಿ 10ರಂದು ಆರಂಭವಾಗಿತ್ತು. ಮೊದಲ ಭಾಗದ ಶೆಡ್ಯೂಲ್ ಕೇರಳದಲ್ಲಿ ಮುಗಿಸಿ ಮುಂದಿನ ಭಾಗದ ಚಿತ್ರೀಕರಣಕ್ಕೆ ಹೈದರಾಬಾದ್ ಗೆ ತೆರಳಲಿದೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಚಿತ್ರತಂಡ ಮುಂದಿನ ದಿನಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಗೆ ತೆರಳಲಿದ್ದು ಅಲ್ಲಿ ಆಕ್ಷನ್ ಭಾಗದ ಚಿತ್ರೀಕರಣ ನಡೆಯಲಿದೆ. ನಂತರ ಚಿತ್ರದ ಪ್ರಮುಖ ಚಿತ್ರೀಕರಣ ರಾಜಸ್ತಾನದಲ್ಲಿ ಕೂಡ ನಡೆಯಲಿದ್ದು ಸ್ಥಳಗಳನ್ನು ಅಂತಿಮಗೊಳಿಸಬೇಕಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಮುಂದೂಡಲಾಗಿದ್ದು ಏಪ್ರಿಲ್ ಕೊನೆಯ ಹೊತ್ತಿಗೆ ಮುಂದಿನ ಭಾಗದ ಚಿತ್ರೀಕರಣ ನಡೆಯಲಿದೆ. ರಾಕ್ ಲೈನ್ ಎಂಟರ್ಟೈನರ್ಸ್ ಬ್ಯಾನರ್ ನಡಿ ತಯಾರಾಗಿದ್ದು ಇದನ್ನು ಬಹುಭಾಷೆಗಳಲ್ಲಿ ತಯಾರಿಸಲು ಯೋಚಿಸುತ್ತಿದ್ದಾರೆ. ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ.
ನಟಿ, ರಾಜಕಾರಣಿ ರಮ್ಯ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮರಳುತ್ತಾರೆ ಎಂಬ ವದಂತಿ ಒಂದೆಡೆಯಿದ್ದರೆ, ಇನ್ನೊಂದೆಡೆ ಖ್ಯಾತ ತಾರೆ ನಯಂತಾರಾ ನಾಯಕಿ ಪಾತ್ರ ಮಾಡುತ್ತಾರೆ ಎಂಬ ಸುದ್ದಿಯಿದೆ. ಇನ್ನು ಈ ಚಿತ್ರದಲ್ಲಿ ಸುಮಲತಾ ಅಂಬರೀಷ್ ಕೂಡ ನಟಿಸುತ್ತಿದ್ದಾರೆ.
ಇನ್ನೊಂದೆಡೆ ನಿನ್ನೆ ದರ್ಶನ್ ಮತ್ತು ನಿರ್ದೇಶಕ ತರುಣ್ ಕಿಶೋರ್ ಸುದೀರ್ ಕಚ್ ಗೆ ತೆರಳಿ ರಾಬರ್ಟ್ ಹಾಡಿನ ಉಳಿಕೆ ಭಾಗದ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಚಿತ್ರದ ಟ್ರ್ಯಾಕ್ ಹಾಡನ್ನು ಸ್ಪೈನ್ ನಲ್ಲಿ ಚಿತ್ರೀಕರಣ ಮಾಡುವ ಯೋಜನೆಯಲ್ಲಿತ್ತು ಚಿತ್ರತಂಡ. ಆದರೆ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಅದನ್ನು ರದ್ದುಪಡಿಸಲಾಯಿತು.
Advertisement