ನಟಿ ಸಂಯುಕ್ತಾ ಹೆಗಡೆ ಮತ್ತು ಗೆಳತಿಯರ ಬಳಿ ಕ್ಷಮೆ ಕೋರಿದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ
ಬೆಂಗಳೂರು: ಸರ್ಜಾಪುರ ರಸ್ತೆಯ ಅಗರ ಕೆರೆಯ ಉದ್ಯಾನದಲ್ಲಿ ನಟಿ ಸಂಯುಕ್ತಾ ಹೆಗಡೆ ಮತ್ತು ಅವರ ಗೆಳತಿಯರ ಜೊತೆ ಮಾತಿನ ಚಕಮಕಿ ನಡೆಸಿದ್ದ ಸ್ಥಳೀಯ ನಿವಾಸಿ ಹಾಗೂ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಕ್ಷಮೆ ಯಾಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನೈತಿಕ ಪೊಲೀಸ್ಗಿರಿಯನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಜವಾಬ್ದಾರಿಯತ ನಾಗರಿಕಳಾಗಿ ಮತ್ತು ಪ್ರಗತಿಪರ ಮಹಿಳೆಯಾಗಿ ಈ ವಿಷಯದಲ್ಲಿ ಸಂಯುಕ್ತಾ ಹೆಗಡೆ ಮತ್ತು ಅವರ ಗೆಳತಿಯರ ಬಳಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.
ಈ ಘಟನೆ ನಡೆಯಬಾರದಿತ್ತು. ನಾನು ಸಂಯುಕ್ತಾ ಅವರ ಗೆಳೆತಿಯರ ಮೇಲೆ ಹಲ್ಲೆ ಮಾಡಲಿಲ್ಲ. ನಾನು ನನ್ನ ಸಂಯಮ ಕಳೆದುಕೊಂಡು ವರ್ತಿಸಿದ್ದು ಸರಿಯಲ್ಲ. ನಾನು ಸದಾ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿದ್ದೇನೆ. ಅಂದು ಆಕ್ರಮಣಕಾರಿಯಾಗಿ ವರ್ತಿಸಿದ್ದು, ಅಲ್ಲಿ ನೆರೆದಿದ್ದ ಎಲ್ಲರ ಬಳಿಯೂ ಕ್ಷಮೆ ಯಾಚಿಸುತ್ತಿದ್ದೇನೆ ಎಂದಿದ್ದಾರೆ ಕವಿತಾ ರೆಡ್ಡಿ.
ಸಂಯುಕ್ತಾ ಹೆಗಡೆ ಮತ್ತು ಅವರ ಗೆಳತಿಯರು ಉದ್ಯಾನದಲ್ಲಿ ಶುಕ್ರವಾರ ಸಂಜೆ ಹಾಡು ಹಾಡುತ್ತಿದ್ದ ವೇಳೆ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕವಿತಾ ರೆಡ್ಡಿ ವಾಗ್ವಾದ ನಡೆಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಕವಿತಾ ಸಕ್ರಿಯವಾಗಿದ್ದಾರೆ. ಕವಿತಾ ಅವರ ನಡೆಯನ್ನು ಬಿಜೆಪಿ ವಿರೋಧಿಸಿದ್ದರಿಂದ, ಈ ಘಟನೆ ಸ್ಥಳೀಯವಾಗಿ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿತ್ತು.
ಈ ಘಟನೆ ನಡೆಯುತ್ತಿದ್ದಂತೆಯೇ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಅಲ್ಲಿ ಅವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಕುರಿತಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಕಾಂಗ್ರೆಸ್ ಪಕ್ಷದ ವಕ್ತಾರೆಯಾಗಿರುವ ಕವಿತಾ ರೆಡ್ಡಿ ಅವರ ವರ್ತನೆಗೆ ವಿರೋಧ ವ್ಯಕ್ತವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ