ಬೆಂಗಳೂರು: ಹಿನ್ನೆಲೆ ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಶನಿವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಆದಿತ್ಯ ಕಳೆದ 4 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 35 ವರ್ಷ ವಯಸ್ಸಿನ ಆದಿತ್ಯ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆದಿತ್ಯ ಪೌಡ್ವಾಲ್, ತಮ್ಮ ತಾಯಿ ಹಾಡಿರುವ ಆರತಿ ಹಾಗೂ ಮಂತ್ರಗಳನ್ನು ಜನತೆ ಅಚ್ಚುಮೆಚ್ಚಿನಿಂದ ಕೇಳುತ್ತಿದ್ದದ್ದನ್ನು ಸ್ಮರಿಸಿದ್ದರು, ಅಷ್ಟೇ ಅಲ್ಲದೇ ತಮ್ಮ ತಾಯಿಗಾಗಿ ಸಂಗೀತ ಸಂಯೋಜನೆಯನ್ನು ಮಾಡಬೇಕೆಂಬ ಬಯಕೆಯನ್ನು ಹೊಂದಿರುವುದಾಗಿಯೂ ತಿಳಿಸಿದ್ದರು.
ಶಿವಸೇನೆಯ ಮುಖ್ಯಸ್ಥ ಬಾಳ ಸಾಹೇಬ್ ಠಾಕ್ರೆ ಅವರ ಜೀವನದ ಕುರಿತಾದ ಸಿನಿಮಾಗೆ ಆದಿತ್ಯ ಪೌಡ್ವಾಲ್ ಕೆಲಸ ಮಾಡಿದ್ದರು. ಸಾಹೇಬ್ ತು ಸಿನಿಮಾಗೆ ಸಾಂಗ್ ಅರೇಂಜರ್ ಹಾಗೂ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು.
Advertisement