ರಾಜ್ಯದಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದು, ಈ ನಡುವಲ್ಲೇ ಸಾಕಷ್ಟು ಚಿತ್ರಗಳು ತೆರೆ ಮೇಲೆ ಅಬ್ಬರಿಸಲು ಸಾಲಿನಲ್ಲಿ ನಿಂತಿವೆ. ಇದರಂತೆ ನಟ ಯೋಗಿ ಅಭಿನಯದ ಲಂಕೆ ಚಿತ್ರ ಕೂಡ ಸೆಪ್ಟೆಂಬರ್ 10 ರಂದು ಬಿಡುಗಡೆಗೊಳ್ಳಲು ಸಜ್ಜುಗೊಂಡಿದೆ.
ಚಿತ್ರದ ಕುರಿತು ಸಿನಿಮಾ ಎಕ್ಸ್'ಪ್ರೆಸ್ ಜೊತೆಗೆ ಮಾತನಾಡಿಲುವ ನಟ ಯೋಗಿ ಅವರು, ಚಿತ್ರ ತಡವಾಗಿ ಬಿಡುಗಡೆಯಾಗುತ್ತಿದ್ದರೂ, ಸಾಕಷ್ಟು ಉತ್ಸಾಹ ಹಾಗೂ ಆಸಕ್ತಿ ಇದೆ. 3 ವರ್ಷಗಳಿಂದ ಲಂಕೆ ಚಿತ್ರ ನಮ್ಮ ಬಳಿಯಿತ್ತು. ಚಿತ್ರ ಬಿಡುಗಡೆ ಕುರಿತು ಸಾಕಷ್ಟು ಉತ್ಸುಕತೆ ಇದೆ. ಆದರೆ, ಇದೇ ಸಂದರ್ಭದಲ್ಲಿ ಜನರು ಚಿತ್ರಮಂದಿರಕ್ಕೆ ಮರಳುವ ಕುರಿತು ಭಯವೂ ಇದೆ. ಇಂತಹ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವಂತಹ ದೊಡ್ಡ ನಿರ್ಧಾರವನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ತೆಗೆದುಕೊಂಡಿದ್ದಾರೆ. ನಮ್ಮ ಚಿತ್ರವು ಉದಾಹರಣೆಯೆಂಬಂತೆ ಮುನ್ನಡೆಯುತ್ತಿರುವುದಕ್ಕೆ ಬಹಳ ಸಂತೋಷವೂ ಇದೆ. ಇತರರು ಕೂಡ ನಮ್ಮನ್ನು ಅನುಸರಿಸುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
'ಲಂಕೆ' ಹೆಸರಿನಂತೆಯೇ ಬಹಳ ಮಹತ್ವವನ್ನು ಹೊಂದಿದೆ ಮತ್ತು ನಮ್ಮ ಪುರಾಣಕ್ಕೆ ಬಲವಾದ ಪ್ರಸ್ತುತತೆಯನ್ನು ಹೊಂದಿದೆ, ಯೋಗಿಯ ಪ್ರಕಾರ, ಈ ಲಂಕೆಯು ನಮಗೆ ರಾಮಾಯಣವನ್ನು ನೆನಪಿಸುತ್ತದೆಯಂತೆ. ಆ ಯುಗದ ಕೆಲವು ತತ್ವಗಳು ಇಂದಿಗೂ ಸಮಾಜದಲ್ಲಿ ಅಸ್ತಿತ್ವದಲ್ಲಿವೆ ಎಂಬ ಭಾವನೆಯನ್ನು ಮೂಡಿಸುತ್ತದೆಯಂತೆ.
ಲಂಕೆ ಎಂಬ ಶೀರ್ಷಿಕೆಯು ಕಥೆಗೆ ಸೂಕ್ತವಾಗಿದೆ. ಇದು ರಾಮ ಮತ್ತು ರಾವಣನ ಗುಣಲಕ್ಷಣಗಳ ಬಗ್ಗೆ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಚರ್ಚಿಸುತ್ತದೆ ಎಂದು ಯೋಗಿ ತಿಳಿಸಿದ್ದಾರೆ.
ಇದೇ ವೇಳೆ ದುನಿಯಾ ಹಾಗೂ ಸಿದ್ಲಿಂಗು ಚಿತ್ರದ ತಮ್ಮ ಪಾತ್ರಗಳ ನೆನಪಿಸಿಕೊಂಡಿರುವ ಅವರು, ಈ ಪಾತ್ರಗಳು ತಮ್ಮ ಅಭಿಮಾನಿಗಳಿಗೆ ಹೇಗೆ ಇಷ್ಟವಾಯಿತೋ, ಹಾಗೆಯೇ ಲಂಕೆ ಚಿತ್ರದ ಪಾತ್ರ ಕೂಡ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: 'ಲಂಕೆ' ನನ್ನ ಮೊದಲ ಚಿತ್ರವೆಂಬಂತಹ ಭಾವನೆ: ಕೃಷಿ ತಾಪಂಡ
ಚಿತ್ರರಂಗದಲ್ಲಿ ಮೊದಲಿಗೆ ವಿಲನ್ ಪಾತ್ರದ ಮೂಲಕ ಸಿನಿಮಾ ಜೀವನ ಆರಂಭವಾಗಿತ್ತು. ನಂತರ ನಾಯಕ ನಟನಾದೆ. ಲವರ್ ಬಾಯ್ ಆಘಿಯೂ ನಟಿಸಿದ್ದೇನೆ. ಹಾಸ್ಯ ಪಾತ್ರದಲ್ಲಿ ಜನರ ಮೆಚ್ಚುಗೆ ಪಡೆದುಕೊಂಡಿದ್ದೇನೆ. ಸಾಕಷ್ಟು ಆಸಕ್ತಿದಾಯಕ ಪಾತ್ರಗಳನ್ನು ನಿಭಾಯಿಸಿದ್ದೇನೆ. ಈ ಮೂಲಕ ಬಹುಮುಖ ನಟನಾಗಿ ಮಾರ್ಪಟ್ಟಿದ್ದೇನೆ. ನಾನು ನಿರ್ವಹಿಸುವ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲು ನಾನು ಪ್ರಯತ್ನಿಸುತ್ತೇನೆ. ನನ್ನ ಪಾತ್ರ ಜನರನ್ನು ಯಾವ ರೀತಿ ಸಂಪರ್ಕಿಸುತ್ತದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳುತ್ತೇನೆ ನಂತರ ನಾನು ಆ ಪಾತ್ರಕ್ಕೆ ಜೀವ ತುಂಬಲು ಯತ್ನಿಸುತ್ತೇನೆಂದು ಹೇಳಿದ್ದಾರೆ.
ಲಂಕೆ ಚಿತ್ರವನ್ನು ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ನಿರ್ಮಾಣ ಮಾಡಿದ್ದು, ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಯೋಗೇಶ್, ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಸಂಚಾರಿ ವಿಜಯ್, ಶರತ್ ಲೋಹಿತಾಶ್ವ, ಶೋಭ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್ ಸೇರಿದಂತೆ ಅನೇಕರು ನಟಿಸಿದ್ದಾರೆ.
Advertisement