ಮಕ್ಕಳ ದಿನಾಚರಣೆ: ಅಪ್ಪು ಬಾಲ್ಯ ಸ್ಮರಿಸಿದ ನಟ ರಾಘವೇಂದ್ರ ರಾಜ್ಕುಮಾರ್
ಬೆಂಗಳೂರು: ನೀನಾಡೊ ಮಾತೆಲ್ಲ ಚೆಂದ.. ನಿನ್ನಿಂದ ಈ ಬಾಳೆ ಅಂದ...’ ಹೀಗೆ ಮಕ್ಕಳ ದಿನಾಚರಣೆಯಂದು ಪ್ರೀತಿಯ ಸಹೋದರ, ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ವಿಡಿಯೊವೊಂದನ್ನು ನಟ ರಾಘವೇಂದ್ರ ರಾಜ್ಕುಮಾರ್ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಘವೇಂದ್ರ ರಾಜ್ ಕುಮಾರ್ ಅವರು, ಪುಟ್ಟ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.
ಅಲ್ಲದೆ, 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ' ಹಿನ್ನೆಲೆ ಹಾಡಿನಲ್ಲಿ ವರ ನಟ ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರ ಜೊತೆಗೆ ಬಾಲ್ಯದಲ್ಲಿ ಅಪ್ಪು ಕಳೆದ ಅಪರೂಪದ ಕ್ಷಣಗಳ ಚಿತ್ರಗಳನ್ನು ಜೋಡಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಪುನೀತ್ ಅವರ ಅಗಲಿಕೆಯ ನೋವಿನಿಂದ ರಾಘವೇಂದ್ರ ರಾಜ್ಕುಮಾರ್ ಅವರು ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ದಿನವೂ ಅವರು ಭೇಟಿ ನೀಡುತ್ತಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತೀನಿತ್ಯ ಅಪ್ಪು ನೆನೆದು ಒಂದಲ್ಲ ಒಂದು ಪೋಸ್ಟ್ ಗಳನ್ನು ಹಾಕುತ್ತಲೇ ತಮ್ಮ ದುಃಖವನ್ನು ಹೊರಹಾಕುತ್ತಿದ್ದಾರೆ.