ಪೇಜಾವರ ಶ್ರೀಗಳ ಕುರಿತ ಹೇಳಿಕೆ: ನಾದಬ್ರಹ್ಮ ಹಂಸಲೇಖ ವಿರುದ್ಧ ಎಫ್ ಐಆರ್ ದಾಖಲು
ಬೆಂಗಳೂರು: ಪೇಜಾವರ ಶ್ರೀಗಳ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬಸವನಗುಡಿ ಠಾಣೆಯಲ್ಲಿ ಸೆಕ್ಷನ್ 295 ಎ ಅಡಿಯಲ್ಲಿ ಹಂಸಲೇಖ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬುಧವಾರ ಸಂಜೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಪ್ರತ್ಯೇಕ ದೂರು ಸಲ್ಲಿಸಿರುವ ಪೇಜಾವರ ಶ್ರೀಗಳ ಭಕ್ತರು, ಗಂಗರಾಜ್ ಉರುಫ್ ಹಂಸಲೇಖ ಅವರು ವರ್ಗ ವರ್ಗಗಳ ಮಧ್ಯೆ ದುರುದ್ದೇಶದಿಂದ ಮತ್ತು ದ್ವೇಷ ಭಾವನೆಯಿಂದ ದ್ವೇಷವನ್ನುಂಟು ಮಾಡಿದ್ದಾರೆ. ಉದ್ದೇಶ ಪೂರ್ವಕ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿಗೆ ಭಂಗ ತಂದಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದರು.
ಈ ದೂರಿನ ಅನ್ವಯ ಎಫ್ ಐಆರ್ ದಾಖಲಿಸಿರುವ ಬಸವನಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಶೀಘ್ರವೇ ಹಂಸಲೇಖ ಅವರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯ ಹೇಳಿಕೆ ಕುರಿತಂತೆ ಹಂಸಲೇಖ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆ ಕುರಿತಂತೆ ಹಂಸಲೇಖ ಅವರು ಈಗಾಗಲೇ ಕ್ಷಮೆ ಕೋರಲಾಗಿದ್ದರೂ ವಿವಾದ ಮಾತ್ರ ತಣಗಾಗಿಲ್ಲ.
ವಿದ್ಯಾಪೀಠ ಸರ್ಕಲ್ ಬಳಿ ಇರುವ ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಹಂಸಲೇಖ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಳಲ್ಲಿ ಹೋರಾಟ ಮಾಡುವುದಾಗಿ ಬ್ರಾಹ್ಮಣ ಮಹಾಸಭಾ ಹೇಳಿದೆ.