ಬೆಂಗಳೂರು: 2018ರ ಅಪಹರಣ ಪ್ರಕರಣದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿ ನಟ ದುನಿಯಾ ವಿಜಯ್ ಮತ್ತು ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ವಿಜಯ್ ಕುಮಾರ್ ಬಿಆರ್ ಅಕಾ 'ದುನಿಯಾ' ವಿಜಯ್, ಪ್ರಸಾದ್ ಕೆಜೆ, ಮಣಿ ಬಿ ಮತ್ತು ಪ್ರಸಾದ್ ಕುಮಾರ್ ಆರ್ ಅವರು ಮಾರುತಿ ಗೌಡ ಅವರನ್ನು ಸೆಪ್ಟೆಂಬರ್ 23, 2018 ರಂದು ಕಾರಿನಲ್ಲಿ ಅಂಬೇಡ್ಕರ್ ಭವನದಿಂದ ಅಪಹರಿಸಿದ್ದಾರೆ ಎಂದು ಆರೋಪಿಗಳು ಎಂಟನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 504, 342, 365, 323, 506 ಮತ್ತು 201 ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಿಂದ ಬಿಡುಗಡೆಗೊಳಿಸುವಂತೆ ನ್ಯಾಯಾಲಯಕ್ಕೆ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು.
ಅಪಹಣಕ್ಕೊಳಗಾದ ವ್ಯಕ್ತಿಯೇ ದೂರುದಾರರಿಗೆ ದೂರವಾಣಿ ಮೂಲಕ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಪೊಲೀಸರು ಕರೆ ಮಾಡಿದ ಬಳಿಕ ಆರೋಪಿಗಳು ಮಾರುತಿ ಗೌಡನನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಹೀಗಾಗಿ ಅಪಹರಣವಾಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ದೂರುದಾರರ ಪರ ವಕೀಲರು ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು, ವ್ಯಕ್ತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ಹೇಳಿದ್ದು, ವಿಜಯ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಏನಿದು ಪ್ರಕರಣ?
ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಈ ಘಟನೆ ನಡೆದಿತ್ತು. ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಪಾನಿಪುರಿ ಕಿಟ್ಟಿ ಅವರ ಟೀಂ ಹಾಗೂ ದುನಿಯಾ ವಿಜಯ್ ಟೀಂಗೆ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡ ಅವರನ್ನು ವಿಜಯ್ ಅವರು ಕಾರಲ್ಲಿ ಕರೆದೊಯ್ದಿದ್ದರು. ಕಾರಿನಲ್ಲಿ ಮಾರುತಿಗೆ ಹಿಗ್ಗಮುಗ್ಗ ಥಳಿಸಿದ್ದ ವಿಜಯ್ ಅವರ ತಂಡ ಅವರ ಮೇಲೆ ಹಲ್ಲೆ ಮಾಡಿತ್ತು.
ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ಮಾರುತಿ ಗೌಡ ಅವರನ್ನು ವಾಪಸ್ ಕರೆತಂದು ಬಿಡಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಎರಡೂ ಕಡೆಯಿಂದಲೂ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು.
Advertisement