ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕನಾಗಿ ಹೆಸರುಮಾಡಿದ್ದ ಚಂದನ್ ಶೆಟ್ಟಿ ನಟನೆಗೂ ಸೈ ಎಂದವರು. ಸುಜಯ್ ಶಾಸ್ತ್ರಿ ನಿರ್ದೇಶನದ ಮುಬರುವ ಹಾಸ್ಯ ಚಿತ್ರ 'ಎಲ್ರ ಕಾಲೆಳಿಯುತ್ತೆ ಕಾಲ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ನಟನಾಗಿ ಎಂಟ್ರಿ ಕೊಡಲಿರುವ ಚಂದನ್ ಶೆಟ್ಟಿ ಇದೀಗ ತಮ್ಮ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಸೂತ್ರಧಾರಿ ಎಂಬ ಶೀರ್ಷಿಕೆಯ ಈ ಚಿತ್ರವನ್ನು ಕಿರಣ್ ಕುಮಾರ್ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಅವರು ಕೂಡ ಚಿತ್ರದಲ್ಲಿ ತನಿಖಾಧಿಕಾರಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನವರಸನ್ ನಿರ್ಮಾಣದ ಸೂತ್ರಧಾರಿ ಚಿತ್ರದ ಶೂಟಿಂಗ್ ಇಂದಿನಿಂದ (ಅ. 10) ಪ್ರಾರಂಭವಾಗಲಿದೆ. ಅಪೂರ್ವ, ವಿಕ್ಟರಿ 2, ಕೃಷ್ಣ ಟಾಕೀಸ್, ಪುರುಶೋತ್ತಮ ಸಿನಿಮಾಗಳಲ್ಲಿ ನಟಿಸಿದ್ದ ಅಪೂರ್ವ ಸೂತ್ರಧಾರಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ತಬಲಾ ನಾಣಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಚಂದನ್, ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ ಇದು. ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ಎಲ್ಲರೂ ಗುನುಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ತಿಳಿಸಿದರು.
ಸೂತ್ರಧಾರಿ ಚಿತ್ರಕ್ಕೆ ಪಿಕೆಎಚ್ ದಾಸ್ ಛಾಯಾಗ್ರಹಣ ಮಾಡಲಿದ್ದಾರೆ.
Advertisement