ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಎರಡನೇ ಹಾಡು ಶನಿವಾರ ಸಂಜೆ ಬಿಡುಗಡೆಯಾಗಿದೆ. ಅಪ್ಪ–ಮಗಳ ನಡುವಿನ ದಟ್ಟ ಬಾಂಧವ್ಯವನ್ನು ಮೈತುಂಬಿಕೊಂಡಿರುವ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ನಿರ್ದೇಶಕ ಅನೂಪ್ ಬಂಡಾರಿ ಬರೆದಿರುವ ಸಾಹಿತ್ಯಕ್ಕೆ, ಅಜನೀಶ್ ಲೋಕನಾಥ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ದೂರಿ ಸೇಟ್ಗಳ ನಡುವೆ ಕಣ್ಮನ ಸೆಳೆಯುವ ಕಿಚ್ಚ ಸುದೀಪ್ ಹಾಗೂ ಪುಟ್ಟ ಮಗುವಿನ ಭಾವನಾತ್ಮಕ ಮಿಡಿತಗಳು ಪ್ರೇಕ್ಷಕರನ್ನು ಗಾಢವಾಗಿ ಸೆಳೆಯುತ್ತವೆ.
ತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿ. ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ, ತೂಗೋ ಉಯ್ಯಾಲೆ’ ಎಂದು ಶುರುವಾಗುವ ಗೀತೆಯು, ‘ಕಣ್ಣಿನ ರೆಪ್ಪೆ ಮುಚ್ಚಿ, ನಿದ್ದೆಗೆ ಬೇಗ ಜಾರಿ, ಮಲಗೆ ಮಲಗೆ ನನ್ನ ಮುದ್ದು ಬಂಗಾರಿ, ಮುದ್ದು ಬಂಗಾರಿ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ.
ಇದು ತಂದೆಯ ಪ್ರಾಮಾಣಿಕ ಮತ್ತು ಬೇಷರತ್ತಾದ ಪ್ರೀತಿ. ತೆರೆಯ ಮೇಲೆ ಮಗಳ ಜೊತೆಗಿನ ನನ್ನ ಸಂಬಂಧ, ಈ ಹಾಡನ್ನು ಮಾಡಬೇಕೆಂಬ ನನ್ನ ಮನಃಸ್ಥಿತಿ, ಸೆಟ್, ವಾತಾವರಣ ಮತ್ತು ಸ್ಕ್ರಿಪ್ಟ್... ಎಲ್ಲವೂ ಈ ಹಾಡಿಗೆ ಒಗ್ಗೂಡಿವೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಗೆ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ವಿಕ್ರಾಂತ್ ರೋಣ ಆಕ್ಷನ್-ಪ್ಯಾಕ್ಡ್ ಫ್ಯಾಂಟಸಿ ಎಂಟರ್ಟೈನರ್ ಎಂದು ಬಿಂಬಿಸಲಾಗಿದ್ದರೂ, ಇದು ತಂದೆ-ಮಗಳ ನಡುವಿನ ಸಂಬಂಧದ ಬಾಂಧವ್ಯದ ಬಗ್ಗೆ ಒಂದು ಭಾಗ ಭಾವನಾತ್ಮಕ ಚಿತ್ರ ಎಂದು ಹೇಳಲಾಗಿದೆ.
ಮಂಜುನಾಥ ಗೌಡ ಅವರ ಶಾಲಿನಿ ಆರ್ಟ್ಸ್ ಬ್ಯಾನರ್ ಮತ್ತು ಅಲಂಕಾರ್ ಪಾಂಡಿಯನ್ ಅವರ ವಿಕ್ರಾಂತ್ ರೋಣ ಜುಲೈ 28 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಕೂಡ ನಟಿಸಿದ್ದಾರೆ.
Advertisement