ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಿನಿಮಾ ರಂಗದಿಂದ ದೂರಉಳಿದಿದ್ದ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ಬಾರಿ ನಿರ್ಮಾಪಕಿಯಾಗಿ ರಮ್ಯಾ ಪದಾರ್ಪಣೆ ಮಾಡುತ್ತಿದ್ದಾರೆ.
ರಮ್ಯಾ ನಿರ್ಮಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಘೋಷಣೆಯಾಗಿದೆ. ʻಸ್ವಾತಿ ಮುತ್ತಿನ ಮಳೆ ಹನಿಯೇʼ ಎಂದು ಹೆಸರಿಡಲಾದೆ. ರಾಜ್ ಬಿ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ವಿಜಯದಶಮಿಯ ದಿನದಂದು ರಮ್ಯಾ ತಮ್ಮ ನಿರ್ಮಾಣದ ಮೊದಲ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರಿನ ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ
ನಟನೆ ಮತ್ತು ನಿರ್ದೇಶನದ ಮೂಲಕ ರಾಜ್ ಬಿ. ಶೆಟ್ಟಿ ಅವರು ತಮ್ಮ ಪ್ರತಿಭೆ ಏನೆಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳು ಜನಮನ ಗೆದ್ದವು. ಈಗ ಅವರು ರಮ್ಯಾ ಜೊತೆಗಿನ ಸಿನಿಮಾದಲ್ಲಿ ಯಾವ ಕಥೆ ಹೇಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮನೆ ಮಾಡಿದೆ.
ರಮ್ಯಾ ಒಡೆತನದ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಮೂಲಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ಮಾಣ ಆಗಲಿದೆ. ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ಕೂಡ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದೆ. ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಶೂಟಿಂಗ್ ಆರಂಭ ಆಗಲಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೆಲಸ ಮಾಡಿದ ಹಲವು ತಂತ್ರಜ್ಞರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಮುಂದುವರಿಯಲಿದ್ದಾರೆ. ವಿಧುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಮಾಡಲಿದ್ದಾರೆ.
Advertisement