ಪುನೀತ್ ಅವರನ್ನು ಸರಳ ವ್ಯಕ್ತಿ ಎಂದ ಅಮೋಘವರ್ಷ; ಗಂಧದಗುಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಇದ್ದಾರೆ!

ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಗಂಧದ ಗುಡಿಯಲ್ಲಿ ಪುನೀತ್ ಮತ್ತು ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಜೆಎಸ್ ಕರ್ನಾಟಕದ ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ.
ಅಮೋಘವರ್ಷ ಮತ್ತು ಪುನೀತ್ ರಾಜ್‌ಕುಮಾರ್
ಅಮೋಘವರ್ಷ ಮತ್ತು ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾದ ಗಂಧದ ಗುಡಿ ಬಿಡುಗಡೆಯ ಹತ್ತಿರದಲ್ಲಿದೆ. ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಗಂಧದ ಗುಡಿಯಲ್ಲಿ ಪುನೀತ್ ಮತ್ತು ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಜೆಎಸ್ ಕರ್ನಾಟಕದ ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ.

ಬಿಡುಗಡೆಗೆ ಮುನ್ನ ಮಾತನಾಡಿರುವ ಅಮೋಘವರ್ಷ ಅವರು, 'ನನ್ನ ನೈಸರ್ಗಿಕ ಇತಿಹಾಸದ ಸಾಕ್ಷ್ಯಚಿತ್ರ ವೈಲ್ಡ್ ಕರ್ನಾಟಕದಿಂದ ನಾವಿಬ್ಬರು ಮಾತನಾಡುವಂತಾಯಿತು. ಅವರು ನನ್ನ ಬಹಳಷ್ಟು ಕೆಲಸಗಳನ್ನು ನೋಡಿದ್ದಾರೆ ಮತ್ತು ಈ ಯೋಜನೆಯು ಅವರ ಆಸಕ್ತಿ ಎಂದು ನಾನು ಭಾವಿಸಿದೆ' ಎನ್ನುತ್ತಾರೆ.

ಪುನೀತ್ ಅವರನ್ನು ಸರಳ ವ್ಯಕ್ತಿ ಎಂದು ಕರೆಯುವ ಅಮೋಘವರ್ಷ, 'ಸಾಮಾನ್ಯವಾಗಿ ಸ್ಟಾರ್‌ಗಳು ಜನರಿಂದ ಸುತ್ತುವರಿದಿರುತ್ತಾರೆ ಮತ್ತು ದೊಡ್ಡ ಸೆಟ್‌ಗಳಲ್ಲಿ ಇರುತ್ತದೆ. ಆದರೆ ಗಂಧದ ಗುಡಿ ಅವರಿಗೆ ಸಂಪೂರ್ಣ ಹೊಸ ಅನುಭವವಾಗಿತ್ತು. ನಾವು ಹೆಚ್ಚು ಜನರನ್ನು ನೋಡದಂತಹ ದೂರದ ಸ್ಥಳದಲ್ಲಿದ್ದೆವು. ಮೊಬೈಲ್ ಫೋನ್ ಮತ್ತು ಇಂಟರ್ನೆಟ್‌ನ ಬೆಂಬಲವಿಲ್ಲದೆ ಜೀವನವನ್ನು ನ್ಯಾವಿಗೇಟ್ ಮಾಡುವುದು ಅವರಿಗೆ ಬಹಳ ಹೊಸತು' ಎಂದು ಹೇಳಿದರು.

'ವನ್ಯಜೀವಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕನಾಗಿ ನಾನು 2 ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ ಮತ್ತು ಪುನೀತ್ ಅವರಂತಹ ಪ್ರಸಿದ್ಧ ವ್ಯಕ್ತಿಯೊಂದಿಗೆ ನಾನು ಪ್ರಯಾಣಿಸುತ್ತಿರುವುದು ಇದೇ ಮೊದಲು. ಆದಾಗ್ಯೂ, ಅವರು ಸ್ಟಾರ್ ಎಂದು ಎಂದಿಗೂ ನಾನು ಭಾವಿಸಲಿಲ್ಲ. ಏಕೆಂದರೆ, ಅವರು ಕೂಡ ಆ ರೀತಿ ವರ್ತಿಸಲಿಲ್ಲ. ಅವರೊಂದಿಗೆ ಯಾರಾದರೂ ಕೂಡ ತುಂಬಾ ಕಂಫರ್ಟ್ ಆಗಿರಬಹುದು' ಎಂದು ಹೇಳುತ್ತಾರೆ.

'ಪುನೀತ್ ಮತ್ತು ನಾನು ಯಾವಾಗಲೂ ಒಂದು ಚಲನಚಿತ್ರವನ್ನು ಮಾಡಲು ಬಯಸಿದ್ದೆವು. ನಾವು ಅದನ್ನು ನೋಡಲು ಇಷ್ಟಪಡುತ್ತೇವೆ ಮತ್ತು ಅದರ ಬಗ್ಗೆ ಸಂತೋಷಪಡುತ್ತೇವೆ. ನಾವು ಈ ಚಿತ್ರವನ್ನು ವಾಣಿಜ್ಯ ಉದ್ದೇಶಕ್ಕಾಗಿ ಮಾಡಿಲ್ಲ ಮತ್ತು ಪುನೀತ್ ಅವರು ಯಾವುದೇ ರೀತಿಯ ಒತ್ತಡವನ್ನು ಹಾಕಿಲ್ಲ. ನಿಜವಾಗಿ ಹೇಳಬೇಕೆಂದರೆ, 10 ರಿಂದ 11 ಜನ ಈ ಸಿನಿಮಾ ನೋಡಿದರೂ ಸಾಕು ನನಗೆ ಖುಷಿಯಾಗುತ್ತದೆ ಎಂದು ಬೇರೊಬ್ಬರೊಂದಿಗೆ ಹೇಳಿದ್ದು ನನಗೆ ನೆನಪಿದೆ. ಆದರೆ, ಗಂಧದ ಗುಡಿಯ ಬಗೆಗಿನ ಅಬ್ಬರದ ಪ್ರಚಾರ ನೋಡಿದಾಗ ಮನಸ್ಸಿಗೆ ಮುದನೀಡುತ್ತದೆ. ಈ ಸಿನಿಮಾವನ್ನು ಜನರು ನೋಡುತ್ತಾರೆ ಮತ್ತು ಮೆಚ್ಚುತ್ತಾರೆ ಎಂಬ ನಂಬಿಕೆಯನ್ನು ಮಾತ್ರ ಇದು ಹುಟ್ಟುಹಾಕುತ್ತದೆ. ಪ್ರಾಮಾಣಿಕ ಸಿನಿಮಾ ಮತ್ತು ಶುದ್ಧ ಉದ್ದೇಶಕ್ಕೆ ಗೆಲುವಿದೆ’ ಎನ್ನುತ್ತಾರೆ ಅಮೋಘವರ್ಷ.

ಗಂಧದ ಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಧ್ವನಿ ನೀಡಿದ್ದಾರೆ ಎಂಬ ಸುದ್ದಿಯೂ ಇದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, 'ಅಶ್ವಿನಿ ಅವರ ಭಾಗವು ಆಶ್ಚರ್ಯಕರವಾಗಿದೆ. ಇದು ಬಿಡುಗಡೆಯ ದಿನಾಂಕದಂದು ಬಹಿರಂಗಗೊಳ್ಳುತ್ತದೆ. ಮೊದಲಿನಿಂದಲೂ ಅವರು ಪ್ರಯಾಣದ ಭಾಗವಾಗಿದ್ದಾರೆ. ನಾನು ಅಶ್ವಿನಿ ಮತ್ತು ಅಪ್ಪು ಅವರನ್ನು ಒಟ್ಟಿಗೆ ಭೇಟಿ ಮಾಡಿದ್ದೇನೆ. ಅವರು ಕೂಡ ಚಿತ್ರೀಕರಣಕ್ಕೆ ಬಂದಿದ್ದಾರೆ. ಅವರ ಕಾರಣದಿಂದಾಗಿಯೇ ನಾವು ಯೋಜನೆಗಳ ಪ್ರಕಾರ ಈ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿದೆ. ಅವರು ಮತ್ತು ರಾಜ್‌ಕುಮಾರ್ ಕುಟುಂಬ ಈ ಚಿತ್ರಕ್ಕಾಗಿ ಬೆನ್ನೆಲುಬಾಗಿ ನಿಂತಿದೆ ಎಂದು ಅವರು ಹೇಳುತ್ತಾರೆ.

ಪುನೀತ್ ಅವರ ಮೊದಲ ವರ್ಷದ ಪುಣ್ಯತಿಥಿಗೂ ಒಂದು ದಿನ ಮುಂಚಿತವಾಗಿ ಗಂಧದ ಗುಡಿ ಬಿಡುಗಡೆಯಾಗಲಿದೆ. 'ನಾನು ಪುನೀತ್ ಅವರನ್ನು ಯಾವಾಗಲೂ ನಗುತ್ತಿರುವ ವ್ಯಕ್ತಿ ಎಂದೇ ನಾನು ನೆನಪಿಟ್ಟುಕೊಳ್ಳುತ್ತೇನೆ. ಅವರು ನಮ್ಮ ಸುತ್ತ ಇದ್ದಾಗಲೆಲ್ಲ ನಾವು ಸಂತೋಷವಾಗಿರುತ್ತಿದ್ದೆವು. ದುಃಖ ಖಂಡಿತಾ ಇರುತ್ತದೆ. ಆದರೆ ನಾವು ದುಃಖಿತರಾಗಬೇಕೆಂದು ಅವರು ಬಯಸುತ್ತಿರಲಿಲ್ಲ. ಗಂಧದ ಗುಡಿಯನ್ನು ವೀಕ್ಷಿಸಲು ಧಾವಂತ ಪಡುವ ಜನರು ಅವರು ಮುಗುಳ್ನಗುವುದನ್ನು ಕಂಡು ಸಂತಸ ಪಡುತ್ತಾರೆ. ನನ್ನ ಮಟ್ಟಿಗೆ, ನಾವೆಲ್ಲರೂ ಸಂತೋಷದಿಂದ ಅವರನ್ನು ನೆನಪಿಸಿಕೊಳ್ಳುವುದು ಮತ್ತು ಅವರ ಕೆಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈ ಚಿತ್ರದ ಯಶಸ್ಸು ಎಂದು ನಾವು ಭಾವಿಸುತ್ತೇನೆ' ಎನ್ನುತ್ತಾರೆ ಅಮೋಷವರ್ಷ.

ಅಶ್ವಿನಿ ಪುನಿತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಗಂಧದ ಗುಡಿಗೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಪ್ರತೀಕ್ ಶೆಟ್ಟಿ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com