ಬೆಂಗಳೂರು: ಗಾಡ್ ಫಾದರ್ ಇಲ್ಲದೇ ಕಿರುತೆರೆ ಮೂಲಕ ಸ್ಯಾಂಡಲ್ವುಡ್ನಲ್ಲಿ ಎಂಟ್ರಿ ಕೊಟ್ಟು ಕೆಜಿಎಫ್ನಂತಹ ಹಿಟ್ ಸಿನಿಮಾ ಕೊಟ್ಟ ರಾಕಿಂಗ್ ಸ್ಟಾರ್ ಯಶ್ಗೆ ದೇಶ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ.
ಆದರೆ, ರಾಕಿಂಗ್ ಸ್ಟಾರ್ ನಡೆದು ಬಂದ ಹಾದಿ ಈಗ ನೋಡುತ್ತಿರುವಷ್ಟು ಸುಲಭವಾಗಿರಲಿಲ್ಲ. ಯಶ್ ಸೂಪರ್ಸ್ಟಾರ್ ಆಗುವುದಕ್ಕೆ ಮುಳ್ಳಿನ ಹಾದಿಯನ್ನೇ ಸವೆದಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಸಿನಿಮಾದಲ್ಲಿ ನಟಿಸಲೇ ಬೇಕು ಅಂತ ಯಶ್ ಪಣತೊಟ್ಟಿದ್ದರು. ಚಿಕ್ಕದೊಂದು ಅವಕಾಶಕ್ಕೂ ಯಶ್ ಪರದಾಡಿದ ದಿನಗಳಿದ್ದವು.
ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರೋ ನಟರೊಬ್ಬರು ಯಶ್ ಬಗ್ಗೆ ಗೊತ್ತಿಲ್ಲದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ಯಶ್ ತನ್ನ ಬಳಿ ಬಂದು ಕಣ್ಣೀರಿಟ್ಟಿದ್ದರು ಎಂದು ಆ ನಟ ಹೇಳಿದ್ದ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಶ್ ಒಂದು ಕಾಲದಲ್ಲಿ ಅವಕಾಶಕ್ಕಾಗಿ ನನ್ನ ಮುಂದೆ ಕಣ್ಣೀರು ಸುರಿಸಿದ್ದರು ಎಂದು ತಮಿಳು ನಟ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಆ ತಮಿಳು ನಟ ಬೇರೆ ಯಾರೂ ಅಲ್ಲ ಬಹುಭಾಷಾ ನಟ ಜೈ ಆಕಾಶ್.
ನಟ ಯಶ್ ಆರಂಭದಲ್ಲಿ ಕಿರುತೆರೆಯಲ್ಲಿ ಗುರುತಿಸಿಕೊಂಡರು. ಅದು ನಿಜ. ಆದರೆ, ಅವರಿಗೆ ಸಿನಿಮಾ ಅವಕಾಶಗಳು ಮಾತ್ರ ಸಿಕ್ಕಿರಲಿಲ್ಲ. ಈ ವೇಳೆ ನನ್ನ ಬಳಿ ಬಂದು ಕಣ್ಣೀರು ಹಾಕಿದ್ದರು. ನಿಮಗೆಲ್ಲರಿಗೂ ಈಗ ಕೆಜಿಎಫ್ ಸಿನಿಮಾದ ಯಶ್ ಗೊತ್ತು. ಯಶ್ ಮೊದಲಿಗೆ ಇಂಟ್ರಡ್ಯೂಸ್ ಆಗಿದ್ದು, ನಾನು ಹೀರೊ ಆಗಿ ನಟಿಸಿದ್ದ ಸಿನಿಮಾದಲ್ಲಿ. ನನ್ನ ತಮ್ಮನಾಗಿ ಯಶ್ ನಟಿಸಿದ್ದಾರೆ. ಆತನನ್ನು ನಾನೇ ಸೆಲೆಕ್ಟ್ ಮಾಡಿದ್ದೆ ಎಂದಿದ್ದಾರೆ.
ನನ್ನ ಬಳಿ ಯಶ್ ಬಂದು, ಸದ್ಯಕ್ಕೆ ಸೀರಿಯಲ್ ಬೇಡ. ಸಿನಿಮಾಗಳಲ್ಲಿ ನಟಿಸಬೇಕು. ಅವಕಾಶಗಳು ಸಿಗುತ್ತಿಲ್ಲ ಎಂದು ಕಣ್ಣೀರು ಸುರಿಸಿದ್ದರು. ಆಗ ನಾನು ಬಾ ಎಂದು ಕರೆದು ನಾನೇ ಸಮಾಧಾನ ಪಡಿಸಿ, ಊಟವನ್ನೂ ಮಾಡಿಸಿದ್ದೆ. ಅಷ್ಟೇ ಅಲ್ಲ ನನ್ನ ಸಿನಿಮಾದಲ್ಲಿ ಚಾನ್ಸ್ ಕೊಡಿಸಿದ್ದೆ.
ಸಿನಿಮಾ ಶೂಟಿಂಗ್ ಆರಂಭವಾದ ಬಳಿಕ ಅವನನ್ನು ನಾನೇ ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದೆ. ಆವತ್ತು ಆ ಸಿನಿಮಾ ಹಿಟ್ ಆಯ್ತು. ಅದಾದ ಬಳಿಕ ನಾನು ತೆಲುಗು, ತಮಿಳು ಕಡೆ ಗಮನ ಹರಿಸಿದೆ. ಯಶ್ ಕನ್ನಡದಲ್ಲಿ ನಾಯಕನಾಗಿ ಗುರುತಿಸಿಕೊಂಡರು. ಇದೀಗ ಯಶ್ ಸ್ಟಾರ್ ಆಗಿ ಬೆಳೆದಿದ್ದಾರೆ ಎಂದು ಜೈ ಆಕಾಶ್ ಹೇಳಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಿಂತ ಮೊದಲು ಕಿರುತೆರೆಯಲ್ಲಿ ನಟಿಸುತ್ತಿದ್ದರು. ಇದೇ ವೇಳೆ ಸಿನಿಮಾಗಳಲ್ಲಿ ಅವಕಾಶ ಹುಡುಕುತ್ತಿದ್ದರು. ಚಿಕ್ಕದೊಂದು ಅವಕಾಶ ಸಿಕ್ಕರೂ ತನ್ನ ಪ್ರತಿಭೆಯನ್ನು ತೋರಿಸಲು ತವಕವಿತ್ತು. ಆಗಲೇ ಯಶ್ಗೆ ಸಿನಿಮಾವೊಂದು ಸಿಕ್ಕಿತ್ತು. ಪ್ರಿಯಾ ಹಾಸನ್ ನಿರ್ದೇಶಿಸಿ, ನಟಿಸಿದ್ದ 'ಜಂಬದ ಹುಡುಗಿ' ಅನ್ನೋ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಸಿಕ್ಕಿತ್ತು. ಇಲ್ಲಿಂದ ಯಶ್ ಸಿನಿಮಾ ಜರ್ನಿ ಆರಂಭ ಆಗಿತ್ತು. ಹಾಗಂತ ಮೊದಲ ಸಿನಿಮಾದಿಂದ ಯಶ್ ನಡೆದಿದ್ದೆಲ್ಲ ರಾಜ ಮಾರ್ಗವಾಗಿರಲಿಲ್ಲ.
Advertisement