ನಟ ನಿರೂಪ್ ಭಂಡಾರಿ ಅವರು ತಮ್ಮ ಸಹೋದರ ಮತ್ತು ನಿರ್ದೇಶಕ ಅನುಪ್ ಭಂಡಾರಿ ಅವರೊಂದಿಗೆ ರಂಗಿತರಂಗ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಆರಂಭಿಸಿದರು. ನಂತರ ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್ನಂತಹ ಚಿತ್ರಗಳಲ್ಲಿ ನಟಿಸಿದರು. ಇದೀಗ ನಟ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಸಚಿನ್ ವಾಲಿ ಅವರ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.
ಚಿತ್ರತಂಡ ಇತ್ತೀಚೆಗಷ್ಟೇ ಸ್ಕ್ರಿಪ್ಟ್ ಪೂಜೆಯೊಂದಿಗೆ ಯೋಜನೆಯನ್ನು ಪ್ರಾರಂಭಿಸಿದೆ. ಚಿತ್ರದ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುವ ಸಚಿನ್, 'ನಾವು ಕುಟುಂಬ ಆಧಾರಿತ ಕಮರ್ಷಿಯಲ್ ಎಂಟರ್ಟೈನರ್ ಅನ್ನು ತರುತ್ತಿದ್ದೇವೆ. ಚಿತ್ರವು ಸತ್ಯ ಮತ್ತು ಸುಳ್ಳಿನ ಸಂಕೀರ್ಣತೆಗಳನ್ನು ಪರಿಶೀಲಿಸುತ್ತದೆ. ಇದೊಂದು ಸಾಮಾಜಿಕ ಸಮಸ್ಯೆಯ ಸುತ್ತ ಸುತ್ತುವ ಕಾಮಿಡಿ ಮತ್ತು ಆ್ಯಕ್ಷನ್ ಮಿಶ್ರಣದ ಚಿತ್ರವಾಗಿದೆ. ನಾವು 2024ರ ಜನವರಿಯಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದೇವೆ' ಎನ್ನುತ್ತಾರೆ.
ನಾಯಕನಾಗಿ ನಿರೂಪ್ ಅವರನ್ನು ಅಂತಿಮಗೊಳಿಸಲಾಗಿದ್ದು, ಸದ್ಯಕ್ಕೆ ಚಿತ್ರತಂಡ ಉಳಿದ ತಾರಾಗಣವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದೆ. ಅಂಕೆಟ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಶಾಂತ್ ಮುಳಗೆ ಸಹ ನಿರ್ಮಾಪಕರಾಗಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಸಂಗೀತ, ಉಲ್ಲಾಸ್ ಹೈದೂರ್ ಅವರ ಕಲಾ ನಿರ್ದೇಶನ ಮತ್ತು ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿದೆ.
Advertisement