ಇಂದಿನ ಸಮಾಜದಲ್ಲಿ ಕುಟುಂಬದೊಳಗಿನ ಪುರುಷ ಪ್ರಧಾನ ವ್ಯವಸ್ಥೆ ಕುರಿತು ಚರ್ಚೆ ಅತ್ಯಗತ್ಯ: ನಿರ್ದೇಶಕ ಶಶಾಂಕ್

ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಕುಟುಂಬದೊಳಗಿನ ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಕುರಿತಾಗಿ ಹೇಳಲಾಗಿದೆ ಮತ್ತು ಇಂದಿನ ಸಮಾಜದಲ್ಲಿ ಅದನ್ನು ಚರ್ಚಿಸುವುದು ಅತ್ಯಗತ್ಯ ಎಂದು ಶಶಾಂಕ್ ಹೇಳುತ್ತಾರೆ. 
ನಿರ್ದೇಶಕ ಶಶಾಂಕ್
ನಿರ್ದೇಶಕ ಶಶಾಂಕ್

ನಿರ್ದೇಶಕ ಶಶಾಂಕ್ ತಮ್ಮ ಎಲ್ಲಾ ಚಿತ್ರಗಳಲ್ಲಿ ಹೊಸ ವಿಷಯಗಳನ್ನು ಹೇಳುವಾಗಲೂ, ತಮ್ಮ ಸಿಗ್ನೇಚರ್ ಶೈಲಿಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಭಾವನಾತ್ಮಕವಾಗಿ ಕನೆಕ್ಟ್ ಆಗುವ ಕಥೆಗಳಿಗೆ ಅವರು ಅಷ್ಟೇ ಪ್ರಸಿದ್ಧರಾಗಿದ್ದಾರೆ.

ನಿರ್ದೇಶಕರು ಕಥೆಗಾರರಾಗಿಯೂ ವಿಕಸನಗೊಳ್ಳುತ್ತಿರುವಂತೆ, ಅವರ ಮುಂಬರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಒಂದು ಹೆಜ್ಜೆ ಎಂದು ಅವರು ನಂಬುತ್ತಾರೆ. 'ಇದುವರೆಗೆ ರೊಮ್ಯಾಂಟಿಕ್ ಡ್ರಾಮಾಗಳು, ಆ್ಯಕ್ಷನ್ ಮತ್ತು ಥ್ರಿಲ್ಲರ್‌ಗಳನ್ನು ನಿರ್ದೇಶಿಸಿರುವ ನಾನು ಕೌಸಲ್ಯ ಸುಪ್ರಜಾ ರಾಮ ಸಿನಿಮಾದೊಂದಿಗೆ ಪೂರ್ಣ ಪ್ರಮಾಣದ ಫ್ಯಾಮಿಲಿ ಎಂಟರ್‌ಟೈನರ್ ಅನ್ನು ನಿರ್ದೇಶಿಸಿದ್ದೇನೆ' ಎಂದು ಹೇಳುತ್ತಾರೆ.

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಮತ್ತು ಬೃಂದಾ ಆಚಾರ್ಯ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಬಿ.ಸಿ. ಪಾಟೀಲ್ ಅವರೊಂದಿಗೆ ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಕೌಸಲ್ಯ ಸುಪ್ರಜಾ ರಾಮ ಸಿನಿಮಾವು ಕುಟುಂಬ ಮತ್ತು ಕಾಲೇಜಿನ ಸಾರವನ್ನು ಸಂಯೋಜಿಸುವ ಭಾವನಾತ್ಮಕ ಪ್ರಯಾಣದ ಬಗ್ಗೆ ಹೇಳುತ್ತದೆ. ಚಿತ್ರ ಇದೇ ಜುಲೈ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

<strong>ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ</strong>
ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ

ಚಿತ್ರದಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು, ನಾಗಭೂಷಣ್ ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸುಜ್ಞಾನ್ ಅವರ ಛಾಯಾಗ್ರಹಣವಿದೆ. 

ಹೊಸ ಥೀಮ್‌ಗಳನ್ನು ಅನ್ವೇಷಿಸುವಾಗ ಅವರು ತಮ್ಮ ಸಿಗ್ನೇಚರ್ ಶೈಲಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತು ಮಾತನಾಡುವ ಶಶಾಂಕ್, 'ಪ್ರತಿ ಪ್ರಾಜೆಕ್ಟ್‌ನೊಂದಿಗೆ ನನಗೆ ನಾನೇ ಸವಾಲೊಡ್ಡಿಕೊಳ್ಳುವುದು ಅತ್ಯಗತ್ಯ. ನನ್ನ ಚೊಚ್ಚಲ ಸಿನಿಮಾ ಮೊಗ್ಗಿನ ಮನಸ್ಸು, ಬಚ್ಚನ್, ಕೃಷ್ಣ ಲೀಲಾ ಮತ್ತು ಲವ್ 360 ಆಗಿರಲಿ, ಸರಿಯಾದ ಭಾವನಾತ್ಮಕ ಅಂಶವನ್ನು ಕಾಪಾಡಿಕೊಳ್ಳುವುದು ನನಗೆ ಯಾವಾಗಲೂ ಆದ್ಯತೆಯಾಗಿದೆ. ಕೌಸಲ್ಯ ಸುಪ್ರಜಾ ರಾಮನ ವಿಷಯದಲ್ಲಿ, ಚಿತ್ರದ ತಳಹದಿಯೇ ಆಳವಾದ ಭಾವನೆಗಳು ಮತ್ತು ನನ್ನ ಹಿಂದಿನ ಸಿನಿಮಾಗಳನ್ನು ಮೀರಿ ಭಾವನಾತ್ಮಕವಾಗಿ ಕಥೆ ಹೇಳಲು ನಾನು ಬಯಸುತ್ತೇನೆ' ಎಂದರು.

ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಕುಟುಂಬದೊಳಗಿನ ಪುರುಷ ಪ್ರಧಾನ ವ್ಯವಸ್ಥೆಯ ಕುರಿತಾಗಿ ಹೇಳಲಾಗಿದೆ ಮತ್ತು ಇಂದಿನ ಸಮಾಜದಲ್ಲಿ ಅದನ್ನು ಚರ್ಚಿಸುವುದು ಅತ್ಯಗತ್ಯ ಎಂದು ಶಶಾಂಕ್ ಹೇಳುತ್ತಾರೆ. 

<strong>ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ</strong>
ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ

'ತಾಯಿ, ಸಹೋದರಿ ಮತ್ತು ಹೆಂಡತಿಯಂತಹ ಸಂಬಂಧಗಳ ಸುತ್ತ ಸುತ್ತುವ ಕುಟುಂಬದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯು ಸಾಮಾನ್ಯವಾಗಿ ಆಳವಾಗಿ ಬೇರೂರಿದೆ. ಹಾಗಾಗಿ ಕೌಟುಂಬಿಕ ಸಿನಿಮಾಗಳ ಸಂದರ್ಭದಲ್ಲಿ ಈ ಥೀಮ್ ಅನ್ನು ಅಳವಡಿಸಿಕೊಳ್ಳುವುದು ಹೆಚ್ಚು ಆಳವಾದ ಮತ್ತು ಪ್ರಭಾವಶಾಲಿ ಕಥೆ ಹೇಳುವ ಅನುಭವವನ್ನು ನೀಡುತ್ತದೆ ಎಂದು ನಾನು ಭಾವಿಸಿದೆ. ಕುಟುಂಬದ ಹೊರಗೆ ಅಥವಾ ಕೆಲಸದ ಸ್ಥಳದಲ್ಲಿ ಈ ವಿಚಾರವನ್ನು ತರುವುದು ಲಿಂಗ ಸಮಾನತೆಗೆ ಸಂಬಂಧಿಸಿದ್ದಾಗುತ್ತದೆ. ಹೀಗಾಗಿ, ಇದನ್ನು ಕೌಟುಂಬಿಕ ನೆಲೆಗಟ್ಟಿನಲ್ಲಿಯೇ ತೋರಿಸುವುದು ಮುಖ್ಯವಾಗಿತ್ತು. ಈ ಮನಸ್ಥಿತಿಯನ್ನು ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಪುರುಷನ ದೃಷ್ಟಿಕೋನದಿಂದಲೇ ತೋರಿಸಲಾಗಿದೆ ಎಂದರು.

'ಕೌಸಲ್ಯ ಸುಪ್ರಜಾ ರಾಮ ಕೇವಲ ಸಾಮಾಜಿಕ ವಿಚಾರಗಳ ಮೇಲೆ ನಿಂತಿಲ್ಲ. ಬದಲಿಗೆ, ನಿರೂಪಣೆಯು ಪ್ರೇಕ್ಷಕರಿಗೆ ಆಕರ್ಷಕವಾಗಿ ಮತ್ತು ಕನೆಕ್ಟ್ ಆಗುವಂತೆ ಮಾಡುತ್ತದೆ. 'ಪುರುಷನೇ ಪ್ರಧಾನ ಎನ್ನುವಂತ ವಿಚಾರವು ಪ್ರಮುಖ ಕಥಾವಸ್ತು ಆಗಿದೆ. ಚಿತ್ರದ ಆತ್ಮವು ಅದರ ಮಹಿಳಾ ಪಾತ್ರಗಳಲ್ಲಿದೆ. ವಿಶೇಷವಾಗಿ ತಾಯಿಯ ಪಾತ್ರದ ಮೂಲಕ ಹೈಲೈಟ್ ಮಾಡಲಾಗಿದೆ. ನಾವು ಸಾಮಾನ್ಯವಾಗಿ ಅವರನ್ನು ಲಘುವಾಗಿ ಪರಿಗಣಿಸುತ್ತೇವೆ. ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹೊಂದಿರುವ ವ್ಯಕ್ತಿಗಳಿಗಿಂತ ಹೆಚ್ಚಾಗಿ ಅವರನ್ನು ಪಾಲಕರಷ್ಟೇ ಎಂದು ನೋಡುತ್ತೇವೆ. ಸಿನಿಮಾದಲ್ಲಿ ಈ ಸನ್ನಿವೇಶಗಳನ್ನು ವಿವಿಧ ದೃಶ್ಯಗಳ ಮೂಲಕ ತೋರಿಸಲಾಗಿದೆ ಮತ್ತು ಕುಟುಂಬದಲ್ಲಿ ಲಘುವಾಗಿ ತೆಗೆದುಕೊಳ್ಳುವ ಮಹಿಳೆಯರನ್ನು ಪ್ರಾಮುಖ್ಯತೆಯನ್ನು ಚಿತ್ರಿಸುತ್ತದೆ' ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com