ಆದಿಪುರುಷ್ ವಿವಾದದ ನಡುವೆಯೇ ಮತ್ತೆ ಟಿವಿಯಲ್ಲಿ ರಮಾನಂದ್ ಸಾಗರ್ ಅವರ 'ರಾಮಾಯಣ' ಮರು ಪ್ರಸಾರ
ಮುಂಬೈ: ಪ್ರಭಾಸ್ ನಟನೆಯ ನಿರ್ದೇಶಕ ಓಂ ರಾವತ್ ನಿರ್ದೇಶನ ಆದಿಪುರುಷ್ ಚಿತ್ರ ವಿವಾದಕ್ಕೀಡಾಗಿರುವಂತೆಯೇ ಇತ್ತ ಟಿವಿಯಲ್ಲಿ ರಮಾನಂದ್ ಸಾಗರ್ ಅವರ 'ರಾಮಾಯಣ' ಮರು ಪ್ರಸಾರವಾಗಲಿದೆ.
ಹೌದು.. ಮೂಲ ರಾಮಾಯಣವನ್ನು ತಿರುಚಲಾಗಿದೆ ಎಂಬ ಆರೋಪದಡಿ ಇತ್ತೀಚೆಗೆ ತೆರೆಕಂಡ ಆದಿಪುರುಷ ಚಿತ್ರದ ವಿರುದ್ಧ ದೇಶ, ವಿದೇಶಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ 80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರದರ್ಶನಗೊಂಡಿದ್ದ ಖ್ಯಾತ ನಿರ್ದೇಶಕ ರಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿ ಒಟಿಟಿ ಹಾಗೂ ಚಾನೆಲ್ ಮೂಲಕ ಪ್ರಸಾರ ಮಾಡಲು ಶೆಮಾರೂ ಸಂಸ್ಥೆ ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ ಇದೇ ಜುಲೈ 3ರಿಂದ ರಾಮಾಯಣ ಧಾರಾವಾಹಿ ಪ್ರಸಾರವಾಗಲಿದೆ ಎಂದು ಹೇಳಲಾಗಿದೆ. ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಲಿಯಾ ಹಾಗೂ ಲಕ್ಷ್ಮಣನಾಗಿ ಸುನೀಲ್ ಲಹ್ರಿ ಅವರು ಅಭಿನಯಿಸಿದ ರಾಮಾಯಣದ ಮರು ಪ್ರಸಾರ ಜುಲೈ 3ರಿಂದ ಆರಂಭವಾಗಲಿದೆ. ನಿತ್ಯ ಸಂಜೆ 7.30ಕ್ಕೆ ಇದು ಪ್ರಸಾರವಾಗಲಿದೆ ಎಂದು ಶೆಮಾರೂ ಹೇಳಿದೆ.
ದೂರದರ್ಶನದಲ್ಲಿ ಪ್ರಥಮ ಬಾರಿಗೆ ಧಾರಾವಾಹಿ ರೂಪದಲ್ಲಿ ಪ್ರಸಾರವಾದ ರಾಮಾಯಣವನ್ನು ಮರು ಪ್ರಸಾರ ಮಾಡುತ್ತಿರುವ ವಿಷಯವನ್ನು ಶೆಮಾರೂ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.