ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ್ ಗೆ ವಿಚಾರಣೆಗೆ ಹಾಜರಾಗಲು ನೊಟೀಸ್, ರಕ್ತ ಪರೀಕ್ಷೆಯಲ್ಲಿ ನೆಗೆಟಿವ್

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಫಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. 
ನಟ ನಾಗಭೂಷಣ್, ಅಪಘಾತಕ್ಕೀಡಾದ ಕಾರು ಮತ್ತು ಡಿಸಿಪಿ ಶಿವಪಕ್ರಾಶ್ ದೇವರಾಜ್
ನಟ ನಾಗಭೂಷಣ್, ಅಪಘಾತಕ್ಕೀಡಾದ ಕಾರು ಮತ್ತು ಡಿಸಿಪಿ ಶಿವಪಕ್ರಾಶ್ ದೇವರಾಜ್
Updated on

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಫಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. 

ಇಕ್ಕಟ್‌, ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಖ್ಯಾತಿಯ ನಟ ನಾಗಭೂಷಣ್‌ ಕಾರು ಅಪಘಾತ ಮಾಡಿ ಮಹಿಳೆಯ ಸಾವಿಗೆ ಕಾರಣವಾಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊನ್ನೆ ಶನಿವಾರ ತಡರಾತ್ರಿ ಬೆಂಗಳೂರಿನ ಕನಕಪುರ ರಸ್ತೆಯ ಕುಮರಸ್ವಾಮಿ ಲೇಔಟ್‌ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಕೆ ಎಸ್ ಲೇ ಔಟ್ ನ ಅಪಾರ್ಟ್ ಮೆಂಟ್ ಬಳಿ ವೇಗವಾಗಿ ಕಾರಿನಲ್ಲಿ ಬಂದು ಕಾರು ಫುಟ್ ಪಾತ್ ಮೇಲೆ ಹರಿಸಿ ದಂಪತಿಗೆ ಗುದ್ದಿ ನಂತರ ವಿದ್ಯುತ್ ಕಂಬಕ್ಕೆ ಹೊಡೆದು ಕಾರು ಮುಂಭಾಗ ನುಜ್ಜುಗುಜ್ಜಾಗಿದೆ.

ಶನಿವಾರ ರಾತ್ರಿ 9.30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಯಲ್ಲಿ ಪತ್ನಿ 48 ವರ್ಷದ ಪ್ರೇಮಾ ತೀವ್ರ ಗಾಯಗೊಂಡು ರಕ್ತ ಸೋರಿಕೆಯಾಗಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರೆ, ಪತಿ 58 ವರ್ಷದ ಕೃಷ್ಣ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರ ದಕ್ಷಿಣ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ಹೇಳಿಕೆ ನೀಡಿದ್ದಾರೆ.

ಅಪಘಾತದ ನಂತರ ನಟ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಅವರು ಮದ್ಯಪಾನ ಮಾಡಿ ಕಾರು ಚಲಾಯಿಸಲಿಲ್ಲ ಎಂದು ಪತ್ತೆಯಾಗಿದ್ದು ವೇಗವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದೇ ಕಾರಣ ಎಂದು ಕಂಡುಬರುತ್ತಿದೆ ಎಂದರು.

ನಾಳೆ ವಿಚಾರಣೆಗೆ ಹಾಜರಾಗಲು ನೊಟೀಸ್: ಕಾರು ಚಾಲಕ ಚಿತ್ರನಟ ನಾಗಭೂಷಣ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಮುಂದಿನ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ. ನಾಗಭೂಷಣ್ ಅವರನ್ನು ಸ್ಟೇಷನ್ ಬೇಲ್ ನೀಡಿ ಕಳುಸಲಾಗಿದೆ. ಮುಂದಿನ ವಿಚಾರಣೆಗೆ ನಾಳೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗ ಅಪಘಾತಕ್ಕೆ ಕಾರಣವಾಗಿದೆ. ರಾತ್ರಿಯೇ ಆಲ್ಕೊಹಾಲ್ ಟೆಸ್ಟಿಂಗ್ ನಡೆಸಿದ್ದು, ಮೀಟರ್‌ನಲ್ಲಿ ಕುಡಿದಿಲ್ಲ ಎಂಬುದು ಪತ್ತೆಯಾಗಿದೆ.

ರಕ್ತ ಪರೀಕ್ಷೆ ಮೀಟರ್‌ನಲ್ಲಿಯೂ ಕುಡಿದಿರಲಿಲ್ಲ ಎಂಬುದು ಪತ್ತೆಯಾಗಿದೆ. ಆಕ್ಸಿಡೆಂಟ್ ಮಾಡಿದ ಬಳಿಕ ಸ್ಥಳೀಯರ ಜೊತೆ ಸೇರಿ ಚಾಲಕ ಅಂದರೆ ನಟ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರು ಚಲಾಯಿಸಿದ್ದೂ ತಾವೇ ಎಂದು ಹೇಳಿಕೊಂಡಿದ್ದಾರೆ ಎಂದು ಸಂಚಾರ ದಕ್ಷಿಣ ಡಿಸಿಪಿ ಶಿವಪಕ್ರಾಶ್ ದೇವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪೊಲೀಸರ ಮುಂದೆ ನಾಗಭೂಷಣ್ ಹೇಳಿದ್ದೇನು?: ನಿನ್ನೆ ರಾತ್ರಿ ಸ್ನೇಹಿತರನ್ನು ಭೇಟಿ ಮಾಡಲು ಆರ್.ಆರ್ ನಗರಕ್ಕೆ ಹೋಗಿರುವುದಾಗಿ, ಅಲ್ಲಿಂದ ಜೆಪಿ ನಗರದಲ್ಲಿರುವ ತಮ್ಮ ಮನೆಗೆ ವಾಪಸ್ಸಾಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ನಾಗಭೂಷಣ್ ತಿಳಿಸಿದ್ದಾರೆ. ತಾವೇ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಪಾರ್ಟಮೆಂಟ್ ಹತ್ತಿರ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಫುಟ್ ಪಾತ್ ಮೇಲಿಂದ ರಸ್ತೆಗೆ ಕೆಳಗೆ ಇಳಿದು ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ, ನಂತರ ಫುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದೆನು ಎಂದಿದ್ದಾರೆ.

ಈ ಘಟನೆಯಾದಾಗ ಮಹಿಳೆಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿತ್ತು. ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಗಂಡಸಿಗೆ ಕಾಲುಗಳಿಗೆ ಮತ್ತು ಹೊಟ್ಟೆ ಹಾಗೂ ತಲೆಗೆ ಗಾಯವಾಗಿತ್ತು. ನನ್ನ ಕಾರು ಸ್ಟಾರ್ಟ್ ಆಗದೇ ಇರುವ ಕಾರಣಕ್ಕಾಗಿ ಆಟೋದಲ್ಲಿ ಅವರನ್ನು ಸ್ವತಃ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆಸ್ಪತ್ರೆಯ ವೈದ್ಯರು ಮಾರ್ಗಮಧ್ಯದಲ್ಲೇ ಮಹಿಳೆ ಮೃತಪಟ್ಟರು. ಘಟನೆಯನ್ನು ತಿಳಿದು ಸಂಚಾರಿ ಪೊಲೀಸರು ಆಸ್ಪತ್ರೆಗೆ ಬಂದರು. ನಾನು ಕೂಡ ಅವರೊಂದಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com