ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ನಿರ್ದೇಶಕ ನಾಗಶೇಖರ್ ಅವರು, ನಟ ಶ್ರೀನಗರ ಕಿಟ್ಟಿ-ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದೀಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ಚಿತ್ರದ ಕುರಿತು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು. ಚಿತ್ರಕ್ಕೆ ಭೀಮಾ ಕೋರೆಗಾಂವ್ ಎಂಬ ಶೀರ್ಷಿಕೆಯನ್ನು ನೀಡಲಾಗಿದ್ದು, ಚಿತ್ರವನ್ನು ಛಲವಾದಿ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದ ಕಥಾಹಂದರವು 1818 ರಲ್ಲಿ ಪುಣೆಯ ಭೀಮಾ ಕೋರೆಗಾಂವ್ನಲ್ಲಿ ನಡೆದ ನೈಜ ಕಥೆಯನ್ನಾಧಾರಿಸಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಜನವರಿ 1, 1818ರಲ್ಲಿ ಐತಿಹಾಸಿಕ ಯುದ್ದ ನಡೆದಿತ್ತು. ಈ ವೇಳೆ ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನ ಅದು. ಪೇಶ್ವೆಗಳ ಇಪ್ಪತ್ತೆಂಟು ಸಾವಿರ ಸೈನ್ಯ ಬಲವನ್ನು ಸೋಲಿಸಿದ್ದರು. ಈ ಕಥೆಯನ್ನಾಧರಿಸಿ ಚಿತ್ರ ನಿರ್ಮಿಸಲಾಗುತ್ತಿದೆ.
ಭೀಮಾ ಕೋರೆಗಾಂವ್ ಚಿತ್ರ ಕಥೆಯನ್ನು ಡಿಜೆ ಚಕ್ರವರ್ತಿ ಜೊತೆಗೆ ಸಂಜು ಕಾಟ್ಕರ್ ಬರೆದಿದ್ದು, ಚಿತ್ರವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನು ನಿರ್ಮಾಪಕರು ಹೊಂದಿದ್ದಾರೆ.
ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಾಗಶೇಖರ್ ಅವರು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಸ್ಯಾಂಡಲ್ ವುಡ್'ಗೆ ಕರೆತರುವುದಾಗಿ ಹಾಗೂ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ತಿಳಿಸಿದರು.
Advertisement