ಮಹಾದೇವಿ, ಮತ್ತು ಗಟ್ಟಿಮೇಳದಂತಹ ಧಾರಾವಾಹಿ ಮೂಲಕ ಗಮನ ಸೆಳೆದಿರುವ ನಟಿ ಗಗನ ಕುಂಚಿ ಇದೀಗ ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಎರಡು ಚಿತ್ರಗಳಲ್ಲಿ ಗಗನ ಕುಂಚಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಎರಡೂ ಚಿತ್ರಗಳು ಶೀಘ್ರದಲ್ಲೇ ಸೆಟ್ಟೇರಲಿದೆ.
ಗಗನ ಕುಂಚಿ ನಾಯಕಿಯಾಗಿ ನಟಿಸುತ್ತಿರುವ ಎರಡು ಚಿತ್ರಗಳು ಸಹ ಸುಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ವಾಲ್ಟರ್ ವೀರಯ್ಯ ಮತ್ತು ವೆಂಕಿಮಾಮ ಚಿತ್ರಗಳನ್ನು ನಿರ್ದೇಶಿಸಿರುವ ಗುರುಕುಮಾರ್ ಪಿ ಅವರು ಒಂದು ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ಎರಡನೇ ಚಿತ್ರವನ್ನು ವಿಜಯ್ ಆರ್ ಅವರು ನಿರ್ದೇಶಿಸುತ್ತಿದ್ದಾರೆ.
ಎರಡೂ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: ನಟ ಪ್ರಭಾಸ್ ನಟನೆ 'ಸಲಾರ್' ರಿಲೀಸ್ ಡೇಟ್ ಫಿಕ್ಸ್!
ಈ ಕುರಿತು ಮಾತನಾಡಿರುವ ಗಗನ ಅವರು, ಈ ಹಿಂದೆ ಕೆಲವು ಅವಕಾಶಗಳು ಬಂದಿದ್ದವು. ಆದರೆ, ಕಥೆ ಮತ್ತು ಪಾತ್ರಗಳು ನನಗೆ ತೃಪ್ತಿ ತಂದಿರಲಿಲ್ಲ. ಹೀಗಾಗಿ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಈ ಎರಡೂ ಚಿತ್ರಗಳು ನನ್ನ ಪ್ರತಿಭೆಗೆ ಅವಕಾಶ ನೀಡುತ್ತಿದೆ. ನಟಿಯಾಗಿ ವೈವಿಧ್ಯಮಯ ಪಾತ್ರಗಳ ಮಾಡಲು ಇಷ್ಟ ಪಡುತ್ತೇನೆ. ನಾಯಕ ನಟಿಯಾಗುವ ನನ್ನ ಕನಸು ಇದೀಗ ನನಸಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕಿರುತೆರೆಯಲ್ಲಿ ಜನರು ನನ್ನ ಅಭಿನಯವನ್ನು ಮೆಚ್ಚಿದ್ದಾರೆ. ಅವರ ಮೆಚ್ಚುಗೆ ನನಗೆ ಸಂತಸ ತಂದಿದೆ. ಇದೀಗ ಬೆಳ್ಳಿತೆರೆಯಲ್ಲಿನ ನನ್ನ ಪ್ರಯಾಣಕ್ಕೂ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
Advertisement