ಬಹು ನಿರೀಕ್ಷಿತ ಬಹುಭಾಷಾ ಚಿತ್ರ 'ಕಿಚ್ಚ 46' ಚಿತ್ರೀಕರಣ ಪ್ರಾರಂಭಿಸಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಶನಿವಾರ ತಿರುಪತಿಯಲ್ಲಿ ದೇವರ ಆಶೀರ್ವಾದ ಪಡೆದ ನಂತರ ತಮ್ಮ ಮುಂದಿನ ಬಹುನಿರೀಕ್ಷಿತ 'ಕಿಚ್ಚ 46' ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮೂಲಕ ವಿಜಯ್ ಕಾರ್ತಿಕೇಯ ಇದೇ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕಲೈಪುಲಿ ಥಾನು ಚಿತ್ರವನ್ನು ನಿರ್ಮಿಸಿದ್ದಾರೆ.
ಚೆನ್ನೈ ಮತ್ತು ಸುತ್ತಮುತ್ತಲು ನಡೆಯುವ ಆಕ್ಷನ್ ಥ್ರಿಲ್ಲರ್ ಇದಾಗಿದ್ದು, ಕಿಚ್ಚ 46ರ ಮೊದಲ ಶೆಡ್ಯೂಲ್ನಲ್ಲಿ 65 ದಿನಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಯಲಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಟೀಸರ್ನಲ್ಲಿ, 'ಡೆಮನ್ ವಾರ್ ಬಿಗಿನ್ಸ್' ಎಂಬ ಅಡಿಬರಹದೊಂದಿಗೆ ಬಂದಿರುವ ಕಿಚ್ಚ 46 ತೀವ್ರ ನಿರೀಕ್ಷೆ ಹುಟ್ಟುಹಾಕಿದೆ.
ಬಹಳ ಅದ್ಧೂರಿಯಾಗಿ ಟೀಸರ್ ಮೂಡಿಬಂದಿದ್ದು, ‘ನಾನು ಯುದ್ಧಕ್ಕೆ ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದು ಯಾವುದೂ ಇರೋದಿಲ್ಲ. ನಾನು ಮನುಷ್ಯ ಅಲ್ಲ, ನಾನು ರಾಕ್ಷಸ’ ಎಂದು ಟೀಸರ್ನ ಕೊನೆಯಲ್ಲಿ ಸುದೀಪ್ ಹೇಳುವ ಡೈಲಾಗ್ ಸಕತ್ ಕ್ರೇಜ್ ಹುಟ್ಟುಹಾಕಿದೆ.
ಇದನ್ನೂ ಓದಿ: ‘ಕಿಚ್ಚ 46’ ಸಿನಿಮಾದ ಟೀಸರ್ ಬಿಡುಗಡೆ!
ವಿ ಕ್ರಿಯೇಷನ್ಸ್ ಮತ್ತು ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಕಲಾ ನಿರ್ದೇಶಕ ಶಿವಕುಮಾರ್ ಮತ್ತು ಸಂಗೀತ ಸಂಯೋಜಕ ಅಜನೀಶ್ ಬಿ ಲೋಕನಾಥ್ ಚಿತ್ರತಂಡ ಸೇರಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ನಂತರ ಅಜನೀಶ್ ಸುದೀಪ್ ಅವರೊಂದಿಗೆ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದ ತಾರಾಗಣ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ