'ಮಾವೀರನ್ ಪಿಳ್ಳೈ' ಮೂಲಕ ದಂತಚೋರ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ಚಿತ್ರರಂಗಕ್ಕೆ ಎಂಟ್ರಿ!

'ದಂತಚೋರ' ವೀರಪ್ಪನ್ ಅವರ ಮಗಳು ಹಾಗೂ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, 'ಮಾವೀರನ್ ಪಿಳ್ಳೈ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 
ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ
ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ

ಚೆನ್ನೈ: 'ದಂತಚೋರ' ವೀರಪ್ಪನ್ ಅವರ ಮಗಳು ಹಾಗೂ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, 'ಮಾವೀರನ್ ಪಿಳ್ಳೈ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

ಈಗಾಗಲೇ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇತ್ತೀಚೆಗೆ ಹಾಡುಗಳು ಮತ್ತು ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ವೀರಪ್ಪನ್ ಅವರ ಪುತ್ರಿ ವಿಜಯಲಕ್ಷ್ಮಿ ವೀರಪ್ಪನ್ ತಮಿಳಿನಲ್ಲಿ ತಯಾರಾದ ಮಾವೀರನ್ ಪಿಳ್ಳೈ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ವಿಶೇಷವೆಂದರೆ ಈ ಚಿತ್ರ ಕನ್ನಡಕ್ಕೆ ಕೂಡ ಡಬ್ ಆಗಲಿದೆ.

ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಇತ್ತೀಚೆಗೆ ವೀರಪ್ಪನ್ ಅವರ ಪತ್ನಿ ಮುತ್ತುಲಕ್ಷ್ಮಿ ಮತ್ತು ಚಿತ್ರರಂಗದ ಇತರ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಆಡಿಯೊ ಬಿಡುಗಡೆ ಮಾಡಲಾಯಿತು. ಚೆನ್ನೈನ ಪ್ರಸಾದ್ ಲ್ಯಾಬ್ ನಲ್ಲಿ ನಡೆದ ಸಮಾರಂಭದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್ ಸುರೇಶ್, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.ಆರ್. ರಾಜ ಮುಂತಾದವರು ಹಾಜರಿದ್ದರು.

ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್ ಸಂಕಲನಕಾರರಾಗಿ ದುಡಿದಿದ್ದಾರೆ. 

ನಿರ್ದೇಶಕ ಮತ್ತು ನಿರ್ಮಾಪಕ ಕೆಎನ್‌ಆರ್ ರಾಜಾ ಅವರ ಪ್ರಕಾರ, ವಿಜಯಲಕ್ಷ್ಮಿ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಮಾವೀರನ್ ಪಿಳ್ಳೈ ಮೂಲಕ ಅವರ ಕನಸು ನನಸಾಯಿತು. ಮದ್ಯಪಾನದ ದುಷ್ಪರಿಣಾಮಗಳು ಮತ್ತು ಕುಟುಂಬಗಳ ಮೇಲೆ ಬೀರುವ ಪರಿಣಾಮಗಳ ಮೇಲೆ ಚಿತ್ರವು ಬೆಳಕು ಚೆಲ್ಲುತ್ತದೆ. ಚಿತ್ರವನ್ನು ಎರಡು ಭಾಷೆಗಳಲ್ಲಿ ಅಂದರೆ ತಮಿಳು ಮತ್ತು ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಜಾ ಹೇಳಿದರು.

ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂಬುದು ಮುಖ್ಯವಲ್ಲ, ಚಿತ್ರದ ಕಥಾವಸ್ತು ಮುಖ್ಯ ಎಂದು ನಿರ್ದೇಶಕ ಪೇರರಸು  ಹೇಳಿದರು. "ನಮ್ಮ ಚಿತ್ರರಂಗದಲ್ಲಿ ಮುಖ್ಯಮಂತ್ರಿಗಳ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ವೀರಪ್ಪನ್ ಮಗಳು ಸಹ ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ" ಎಂದು ಹೇಳಿದರು.

'ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ಅಥವಾ ಮಧ್ಯಪಾನ ಮಾಡುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ 'ಸಾರಾಯಂ ಅಭಯಂ' ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತನಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರೋದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್ಲೈನ್ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆನ್ಲೈನ್ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್ ಬೇಕಿಲ್ಲ. ನೀಟ್ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ' ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com