ನಾನಿನ್ನು ಒಂಟಿಯಲ್ಲ; ಪವಿತ್ರಾ ಮತ್ತು ನಾನು ಲಿವ್-ಇನ್ ಸಂಬಂಧದಲ್ಲಿದ್ದೇವೆ: ನಟ ನರೇಶ್ ಕೃಷ್ಣಾ
ಟಾಲಿವುಡ್ ನಟರಾದ ನರೇಶ್ ಕೃಷ್ಣ ಮತ್ತು ಪವಿತ್ರಾ ಲೋಕೇಶ್ ಅವರ ದ್ವಿಭಾಷಾ ಚಿತ್ರ ಮಳ್ಳಿಪೆಳ್ಳಿ ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯನ್ನು ಹೊಂದಿದೆ. ಎಂಎಸ್ ರಾಜು ಚಿತ್ರಕಥೆ ಮತ್ತು ನಿರ್ದೇಶಿಸಿರುವ ಈ ಚಿತ್ರ, ಮೇ 26 ರಂದು ತೆರೆಗೆ ಬರಲಿದೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಸಿನಿಮಾ ಮತ್ತು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲ ಮಾತುಗಳನ್ನು ಹಂಚಿಕೊಂಡರು.
ತಮ್ಮ ನಿಜ ಜೀವನದ ಕಥೆಯಾಧಾರಿತ ಚಿತ್ರವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಲೋಕೇಶ್, ಟೀಸರ್ ನೋಡಿದರೆ ಇಲ್ಲಿಯವರೆಗೆ ನಡೆದಿರುವ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ. ಟೀಸರ್ ಮತ್ತು ಟ್ರೈಲರ್ ನೋಡಿ ಯಾವುದೇ ತೀರ್ಮಾನಕ್ಕೆ ಬರಬೇಡಿ. ಚಲನಚಿತ್ರವನ್ನು ನೋಡಿ ಮತ್ತು ನಾವು ಹೇಳಲು ಪ್ರಯತ್ನಿಸುತ್ತಿರುವ ಸಂದೇಶವನ್ನು ನೀವು ಅರ್ಥಮಾಡಿಕೊಳ್ಳುವಿರಿ. ನಮ್ಮ ವೈಯಕ್ತಿಕ ಜೀವನಕ್ಕೂ ಸಿನಿಮಾಗು ಯಾವುದೇ ಸಂಬಂಧವಿಲ್ಲ, ಅವು ಪ್ರತ್ಯೇಕವಾಗಿರುತ್ತವೆ ಎಂದರು.
ತಮ್ಮ ವೃತ್ತಿಯನ್ನು ವೈಯಕ್ತಿಕ ವಿಷಯಗಳೊಂದಿಗೆ ಸಂಪರ್ಕಿಸದಿರಲು ಬಯಸುವ ಪವಿತ್ರಾ, ತನ್ನನ್ನು ಓರ್ವ ನಟಿಯನ್ನಾಗಿ ಮಾತ್ರ ನೋಡುವಂತೆ ಜನರಿಗೆ ಮನವಿ ಮಾಡಿದರು. ಅವರು 1994 ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದಾಗಿನಿಂದ ಮಾಧ್ಯಮಗಳ ಮುಂದೆ ವೈಯಕ್ತಿಕ ವಿಚಾರಗಳನ್ನು ಚರ್ಚಿಸುವುದನ್ನು ತಪ್ಪಿಸಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.
ಇದನ್ನೂ ಓದಿ: ಪವಿತ್ರಾ ಲೋಕೇಶ್-ನರೇಶ್ ಕಲ್ಯಾಣ: ಇಲ್ಲಿದೆ ವಿಡಿಯೊ
ಪವಿತ್ರಾ ಹೇಳಿಕೆಗೆ ಸಮರ್ಥನೆ ನೀಡಿದ ನರೇಶ್, ‘ಹಿಂದೆ ದೇವಾನುದೇವತೆಗಳು ಬಹುಪತ್ನಿತ್ವ ಹೊಂದಿದ್ದರು, ರಾಜರು ಬಹುವಿವಾಹ ಮಾಡಿಕೊಳ್ಳುತ್ತಿದ್ದರು. ಅದನ್ನೆಲ್ಲ ಒಪ್ಪಿಕೊಂಡು ಅಪ್ಪಿಕೊಂಡಿದ್ದೇವೆ. ಇದೀಗಲೂ ಸುಪ್ರೀಂ ಕೋರ್ಟ್ ಲಿವ್ ಇನ್ ರಿಲೇಶನ್ ಶಿಪ್ ತಪ್ಪಲ್ಲ ಎಂದು ತೀರ್ಪು ನೀಡಿದೆ. ಹಾಗಾದರೆ, ನಮ್ಮಿಂದೇನು ತಪ್ಪಾಗಿದೆ? ನಾನಿನ್ನೂ ಒಂಟಿಯಲ್ಲ; ಪವಿತ್ರಾ ಮತ್ತು ನಾನು ಲಿವ್-ಇನ್ ಸಂಬಂಧದಲ್ಲಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುತ್ತೇನೆ' ಎಂದರು. ಕನ್ನಡದಲ್ಲಿ ಮಾತನಾಡಿದ ನರೇಶ್, ನನಗೆ ಭಾಷೆ ಅರ್ಥವಾಗುತ್ತದೆ ಮತ್ತು ನಾನು ನಟ ಶಿವರಾಜ್ಕುಮಾರ್ ಅವರ ಸಹಪಾಠಿಯಾಗಿದ್ದಾಗಿ ತಿಳಿಸಿದರು.
ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ನರೇಶ್ ನಿರ್ಮಿಸಿರುವ ಈ ಚಿತ್ರವು ಫ್ಯಾಮಿಲಿ ಎಂಟರ್ಟೈನರ್ ಎಂದು ಬಿಂಬಿಸಲಾಗಿದೆ. ಇದರಲ್ಲಿ ಜಯಸುಧಾ ಮತ್ತು ಶರತ್ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಷನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮೂರಿ, ಮಧು ಮುಂತಾದವರಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಸುರೇಶ್ ಬೊಬ್ಬಿಲಿ ಮತ್ತು ಅರುಳ್ದೇವ್ ಸಂಯೋಜಿಸಿದ್ದಾರೆ.