ಬನಾರಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಝೈದ್ ಖಾನ್ ಇದೀಗ ಉಪಾಧ್ಯಕ್ಷ ಸಿನಿಮಾ ನಿರ್ದೇಶಕರಾದ ಅನಿಲ್ ಕುಮಾರ್ ಅವರೊಂದಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರತಂಡ ಶೀರ್ಷಿಕೆಯನ್ನು ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಕಲ್ಟ್ ಎಂದು ಹೆಡರಿಡಲಾಗಿದೆ. ಪೋಸ್ಟರ್ನಲ್ಲಿ ನಾಯಕ ಝೈದ್ ಆಕರ್ಷಕ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೀಗ ವ್ಯಾಪಕ ಕುತೂಹಲ ಹುಟ್ಟುಹಾಕಿದೆ.
ಕಲ್ಟ್ ಬನಾರಸ್ನಷ್ಟು ಪ್ರಯೋಗಾತ್ಮಕವಾಗಿರುವುದಿಲ್ಲ ಮತ್ತು ಇಂದಿನ ಯುವಕರಿಗೆ ಸಮಕಾಲೀನ ಕಥೆಯಾಗಲಿದೆ ಎಂದು ಝೈದ್ ಅವರು ನಮ್ಮ ಹಿಂದಿನ ಸಂದರ್ಶನದಲ್ಲಿ ಉಲ್ಲೇಖಿಸಿದ್ದರು. ಆಶ್ರಿತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಲ್ಟ್ ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಜೆಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಕೆಎಂ ಪ್ರಕಾಶ್ ಸಂಕಲನ ಮತ್ತು ರವಿವರ್ಮ ಸಾಹಸ ದೃಶ್ಯಗಳನ್ನು ನಿರ್ವಹಿಸಲಿದ್ದಾರೆ.
'ಬನಾರಸ್ ಚಿತ್ರ ನನಗೆ ಕನ್ನಡ ಚಿತ್ರರಂಗಕ್ಕೆ ಉತ್ತಮ ಎಂಟ್ರಿಯನ್ನು ದೊರಕಿಸಿಕೊಟ್ಟಿದೆ. ಅಂದಿನಿಂದ, ನಾನು ಹಲವು ನಿರ್ದೇಶಕರ ವಿಭಿನ್ನ ಕಥೆಗಳನ್ನು ಕೇಳುತ್ತಿದ್ದೇನೆ ಮತ್ತು ಹಲವಾರು ಸ್ಕ್ರಿಪ್ಟ್ಗಳನ್ನು ಓದುತ್ತಿದ್ದೇನೆ. ಇದೀಗ ನಾನು ಅನಿಲ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದೇನೆ' ಎಂದು ನಟ ಈ ಹಿಂದೆ ಹೇಳಿದ್ದರು.
ಅನಿಲ್ ಕುಮಾರ್ ಅವರು ಸುದೀಪ್ ನಟನೆಯ ಕೆಂಪೇಗೌಡ ಚಿತ್ರದ ಸಂಭಾಷಣೆ ಬರೆದಿದ್ದರು. ಶಕ್ತಿ ಚಿತ್ರದಲ್ಲಿ ಮಾಲಾಶ್ರೀ, ದಿಲ್ವಾಲ ಚಿತ್ರದಲ್ಲಿ ಸುಮಂತ್ ಮತ್ತು ರಾಧಿಕಾ ಪಂಡಿತ್ ಮತ್ತು ರ್ಯಾಂಬೋ 2 ನಲ್ಲಿ ಶರಣ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಮೂಲಕ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದು, ಇದೀಗ ಝೈದ್ ಖಾನ್ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.
Advertisement