
ಬಿಗ್ ಬಾಸ್ ಮಾಜಿ ಸ್ಪರ್ಧಿ ಸುನಾಮಿ ಕಿಟ್ಟಿ ನಾಯಕ ನಟನಾಗಿ ಅಭಿನಯಿಸಿರುವ ಕೋರಾ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
"ಕೋರ ಎಂದರೆ ಬುಡಕಟ್ಟು ಜನಾಂಗದ ಹೆಸರಾಗಿದ್ದು, ಚಿತ್ರದ ಕತೆ ಕೂಡ ಬುಡಕಟ್ಟು ಜನಾಂಗದ ಸುತ್ತಲೇ ಸುತ್ತುತ್ತದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಒರಟ ಶ್ರೀ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ರೇವಣ್ಣ ನಾಯಕ್ ಬರೆದು, ಹೇಮಂತ್ ಕುಮಾರ್ ಸಂಗೀತ ನೀಡಿರುವ "ಒಪ್ಪಿಕೊಂಡಳು" ಎಂಬ ಚಿತ್ರದ ಹಾಡು ಇತ್ತೀಚಿಗೆ ರಬಕವಿಯಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಈ ವೇಳೆ ತೆಲುಗು ವಿತರಕ ಬಾಲಾಜಿ ಮತ್ತು ಕನ್ನಡ ನಟ ಒರಟ ಪ್ರಶಾಂತ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ರತ್ನಮ್ಮ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿರುವ ಕೋರಾ ಚಿತ್ರದ ಚಿತ್ರೀಕರಣ ಹೊರನಾಡು, ಸಕಲೇಶಪುರ, ಚಿಕ್ಕಮಗಳೂರು ಸೇರಿ ಹಲವು ಅರಣ್ಯ ಪ್ರದೇಶದಲ್ಲಿ ನಡೆಸಲಾಗಿದೆ, ಸಿನಿಮಾದ ತೆಲುಗು ಹಾಗೂ ತಮಿಳಿನ ರೈಟ್ಸ್ ಕೂಡ ಈಗಾಗಲೆ ಮಾರಾಟವಾಗಿದೆ.
ಚಿತ್ರದ ಅನುಭವದ ಬಗ್ಗೆ ಮಾತನಾಡಿದ ಪಿ ಮೂರ್ತಿ ಅವರು, ದೂರದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆ ಸ್ಥಳಗಳಲ್ಲಿ ಅನುಕೂಲಗಳು ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ. ಚಿತ್ರ ತಂಡದ ಸಮರ್ಪಣೆ ಭಾವನೆ ಚಿತ್ರೀಕರಣವನ್ನು ಸುಗಮಗೊಳಿಸಿದೆ. ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ. ಜನವರಿಯಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದ್ದು, ರೋಮಾಂಚನಗೊಂಡಿದ್ದೇವೆ. ಸಿನಿಮಾದ ತೆಲುಗು ಹಾಗೂ ತಮಿಳಿನ ರೈಟ್ಸ್ ಕೂಡ ಈಗಾಗಲೆ ಮಾರಾಟವಾಗಿದೆ ಎಂದು ಹೇಳಿದರು.
ಸುನಾಮಿ ಕಿಟ್ಟಿ ಮಾತನಾಡಿ, ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ, ಅವಕಾಶ ನೀಡಿದ ನಿರ್ಮಾಪಕ ಹಾಗೂ ನನಗೆ ಮಾರ್ಗದರ್ಶನ ನೀಡಿದ ಒರಟ ಶ್ರೀ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಚಿತ್ರದ ಮೂಲಕ ನಾಯಕ ನಟನಾಗುವ ನನ್ನ ಕನಸು ನನಸಾಗಿದೆ. ನನ್ನ ಹುಟ್ಟುಹಬ್ಬದ ದಿನ ಚಿತ್ರದ ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದು ಹೇಳಿದರು.
ಚಿತ್ರದಲ್ಲಿ ಕಿಟ್ಟಿಗೆ ಚರಿಷ್ಮಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರತ್ನಮ್ಮ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ. ಮೂರ್ತಿ 'ಕೋರ' ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ಹೇಮಂತ್ ಕುಮಾರ್ ಸಂಗೀತ ನಿರ್ದೆಶನ, ಸೆಲ್ವಂ ಛಾಯಾಗ್ರಹಣ, ಕೆ.ಗಿರೀಶ್ ಕುಮಾರ್ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಎಂ. ಕೆ ಮಠ, ಮುನಿರಾಜು, ಸೌಜನ್ಯ ಒಳಗೊಂಡ ತಾರಾಗಣ ಚಿತ್ರದಲ್ಲಿದೆ.
Advertisement