Video: 'ಒಬ್ಬ ವ್ಯಕ್ತಿಯ ಅಹಂಕಾರದಿಂದ ಇಡೀ ಚಿತ್ರರಂಗ ತಲೆತಗ್ಗಿಸುವಂತಾಯಿತು'; Allu Arjun ವಿರುದ್ಧ ನಿರ್ಮಾಪಕ Tammareddy Bharadwaj ಆಕ್ರೋಶ
ಹೈದರಾಬಾದ್: ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಅಲ್ಲು ಅರ್ಜುನ್ ವಿಚಾರವಾಗಿ ತೆಲುಗು ನಿರ್ಮಾಪಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, 'ಒಬ್ಬ ವ್ಯಕ್ತಿಯ ಅಹಂಕಾರದಿಂದ ಇಡೀ ಚಿತ್ರರಂಗ ತಲೆತಗ್ಗಿಸುವಂತಾಯಿತು' ಎಂದು ಕಿಡಿಕಾರಿದ್ದಾರೆ.
ಹೌದು.. ಪುಷ್ಪ2 ಚಿತ್ರ ಪ್ರದರ್ಶನ ವೇಳೆ ‘ಐಕಾನ್ ಸ್ಟಾರ್ ಅಲ್ಲು ಅರ್ಜನ್ ಮಾಡಿದ ತಪ್ಪಿನಿಂದಾಗಿ ಇಂದು ಇಡೀ ತೆಲುಗು ಚಿತ್ರರಂಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಂದೆ ಕೈಮುಗಿದು ನಿಲ್ಲುವಂತಾಗಿದೆ’ ಎಂದು ತೆಲುಗು ನಿರ್ಮಾಪಕ, ನಿರ್ದೇಶಕ ತಮ್ಮಾರೆಡ್ಡಿ ಭಾರದ್ವಾಜ್ ಕಿಡಿಕಾರಿದ್ದಾರೆ.
ಪುಷ್ಪ–2 ಶೋ ವೇಳೆ ಹೈದರಾಬಾದ್ ಸಂದ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಬಗ್ಗೆ ಹಾಗೂ ಅಲ್ಲು ಅರ್ಜುನ್ ಅವರ ಮೇಲೆ ಕೇಸ್ ಹಾಕಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿಗಳ ಜೊತೆ ಮಾತನಾಡಿರುವ ತಮ್ಮಾರೆಡ್ಡಿ, ‘ಒಬ್ಬ ನಟ, ಸ್ಟಾರ್ ಆದವನು ಸಾರ್ವಜನಿಕವಾಗಿ ಹೇಗೆ ಇರಬೇಕೊ ಹಾಗೆ ಅಲ್ಲು ಅರ್ಜುನ್ ಇರಲಿಲ್ಲ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆಯಾದ ದಿನ ತಾನೂ ಸಿನಿಮಾ ನೋಡಲು ಹೋದರೆ ಜನಸಾಮಾನ್ಯರು ಜಮಾಯಿಸಿ ಎಡವಟ್ಟಾಗುತ್ತವೆ ಎಂದು ಗೊತ್ತಿದ್ದರೂ ಅಲ್ಲು ಅರ್ಜನ್ ಅಲ್ಲಿ ಹೋಗಿ ತಪ್ಪು ಮಾಡಿದರು. ಅವರಿಂದಾಗಿಯೇ ಇಂದು ಟಾಲಿವುಡ್ ಸಿಎಂ ರೇವಂತ್ ರೆಡ್ಡಿ ಮುಂದೆ ಕೈ ಮುಗಿದು ನಿಲ್ಲುವಂತಾಗಿದೆ. ಇದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ‘ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಅನೇಕ ಹಿರಿಯ ಸ್ಟಾರ್ ನಟರು ಸಾರ್ವಜನಿಕವಾಗಿ ತಾವು ಹೇಗೆ ಇರಬೇಕು ಎಂಬುದು ಅವರಿಗೆ ಗೊತ್ತಿದೆ. ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾದಾಗ ಮಲ್ಟಿಫ್ಲೆಕ್ಸ್ಗಳಿಗೆ ಹೋಗಿ, ಔಪಚಾರಿಕವಾಗಿ ಅಭಿಮಾನಿಗಳನ್ನು ಭೇಟಿಯಾಗಿ ಬರುತ್ತಾರೆ. ಅಲ್ಲು ಅರ್ಜುನ್ ಕೂಡ ಹಾಗೇಯೇ ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ ಕುರಿತು ಮಾತನಾಡಿದ ಅವರು, 'ಆ ಘಟನೆ ನಡೆಯಬಾರದಿತ್ತು. ಅದು ದುರಾದೃಷ್ಟವಶಾತ್ ನಡೆದಿರುವುದು. ತಪ್ಪು ತಿಳಿದು ಮಾಡಿದರೂ, ತಿಳಿಯದೇ ಮಾಡಿದರೂ ಅದು ತಪ್ಪೇ.. ಮಾಡಿದ ತಪ್ಪನ್ನು ಮುಚ್ಚಿಹಾಕಲು ತಿಳಿದೂ ಸುಳ್ಳು ಹೇಳುವುದು ಸ್ವೀಕಾರಾರ್ಹವಲ್ಲ...
ಪ್ರತಿ ಬಾರಿಯೂ, ಉದ್ಯಮವು ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಕೈಜೋಡಿಸಿ ನಿಲ್ಲಬೇಕಾಗುತ್ತದೆ. ಅದು ಏಕೆ ನಡೆಯಿತು ಎಂಬುದನ್ನು ನಾವು ಚರ್ಚೆ ಮಾಡಬೇಕಿದೆ. ಇತ್ತೀಚಿನ ಘಟನೆಗಳನ್ನು ಗಮನಿಸುವುದರಿಂದ ಉದ್ಯಮದಲ್ಲಿರುವವರಿಗೆ ಮಾತ್ರವಲ್ಲದೆ ಹೊರಗಿನವರಿಗೂ ಸ್ಪಷ್ಟತೆ ಸಿಗುತ್ತದೆ' ಎಂದು ತಮ್ಮಾ ರೆಡ್ಡಿ ಹೇಳಿದ್ದಾರೆ.
ಯಾರು ಈ ತಮ್ಮಾರೆಡ್ಡಿ?
ಅಂದಹಾಗೆ ತಮ್ಮಾರೆಡ್ಡಿ ಭಾರದ್ವಾಜ್ ಅವರು 20 ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ, 15 ಕ್ಕೂ ಹೆಚ್ಚು ತೆಲುಗು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ತೆಲಗು ಚಲನಚಿತ್ರ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ.
ಇನ್ನು ಸಂಧ್ಯಾ ಥಿಯೇಟರ್ ಕಾಲ್ತುಳಿತ ದುರಂತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟು, ಅವರ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಈ ಘಟನೆ ತೆಲಂಗಾಣದಲ್ಲಿ ವ್ಯಾಪಕ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.


