
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಿರುವುದು ಕನ್ನಡ ಚಿತ್ರರಂಗದ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚರಂಡಿಯಲ್ಲಿ 33 ವರ್ಷದ ರೇಣುಕಾ ಸ್ವಾಮಿ ಎಂಬುವವರ ಶವ ಪತ್ತೆಯಾದ ಬಳಿಕ ದರ್ಶನ್ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ನಟ ದರ್ಶನ್ ಬಂಧನದ ಬಗ್ಗೆ ವಿಡಿಯೋ ಹಂಚಿಕೊಂಡು ಪ್ರತಿಕ್ರಿಯಿಸಿದ ನಟಿ ಸಂಜನಾ ಗಲ್ರಾನಿ, ಇದು ಕನ್ನಡ ಚಿತ್ರರಂಗಕ್ಕೆ 'ಪ್ರಳಯ' ಇದ್ದಂತೆ ಎಂದು ಹೇಳಿದ್ದಾರೆ.
'ಈ ಸುದ್ದಿ ನೋಡಿ ಶಾಕ್ ಆಗಿದೆ. ಚಿಂತೆ ಕಾಡುತ್ತಿದೆ. ದರ್ಶನ್ ಅವರು ಸುರಕ್ಷಿತವಾಗಿ ಹಿಂತಿರುಗಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತೇನೆ. ಅವರು ಅರೆಸ್ಟ್ ಆಗಬಾರದು. ಇದು ಶಾಕಿಂಗ್ ನ್ಯೂಸ್. ಅವರು ಆದಷ್ಟು ಬೇಗ ಬಿಡುಗಡೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಹೆಸರು ಎಫ್ಐಆರ್ನಲ್ಲಿರಬಾರದು ಎಂದು ಕೇಳಿಕೊಳ್ಳುತ್ತೇನೆ. ನನಗೆ ಮಾತೇ ಬರುತ್ತಿಲ್ಲ’ ಎಂದು ಸಂಜನಾ ಹೇಳಿದ್ದಾರೆ.
ಇದು ನಮ್ಮ ಪಾಲಿಗೆ ಕರಾಳ ದಿನವಾಗಿದೆ ಮತ್ತು ಇದು ಕನ್ನಡ ಇಂಡಸ್ಟ್ರಿಗೆ ಪ್ರಳಯದಂತೆ ಆಗಿದೆ. ದರ್ಶನ್ ಗೌರವಾನ್ವಿತ ಮತ್ತು ಸೌಮ್ಯ ಸ್ವಭಾವವನ್ನು ಹೊಂದಿದ್ದವರು. ಶೂಟಿಂಗ್ ಮಾಡುವಾಗ ಅವರು ನನ್ನನ್ನು ನನ್ನ ಹೆಸರಿನಿಂದಲೂ ಕರೆಯುತ್ತಿರಲಿಲ್ಲ. ಅವರು ನನ್ನನ್ನು 'ಜಿ ಸುನಿಯೆ' ಮತ್ತು 'ಅಮ್ಮಾ' ಎಂದು ಕರೆಯುತ್ತಿದ್ದರು. ಇದು ಅವರು ಮಹಿಳೆಯರನ್ನು ಗೌರವಿಸುವ ರೀತಿಯನ್ನು ತೋರಿಸುತ್ತದೆ ಎಂದು ಎನ್ಡಿಟಿವಿಗೆ ತಿಳಿಸಿದ್ದಾರೆ.
ಅವರು ಪ್ರತಿ ಮಹಿಳೆಯೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ. ಸಿನಿಮಾವೊಂದರಲ್ಲಿ ನನ್ನನ್ನು ಎತ್ತುವ ದೃಶ್ಯವಿತ್ತು. ಆಗ ಅವರು ನನ್ನೊಂದಿಗೆ ಮಾತನಾಡಿದರು. ಅವರು ಮಹಿಳೆಯರಿಗೆ ಗೌರವ ನೀಡುತ್ತಾರೆ. ಆದರೆ, ಅವರ ವಿರುದ್ಧದ ಆರೋಪಗಳನ್ನು ಕೇಳಿದ ನಂತರ ಶಾಕ್ ಆಗಿದೆ. ಇದು ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಯ ಧೈರ್ಯವನ್ನು ಸಂಪೂರ್ಣವಾಗಿ ಆಘಾತಗೊಳಿಸಿದೆ ಎಂದು ಅವರು ಹೇಳಿದರು.
ಈಗ ಸುದ್ದಿಯಲ್ಲಿರುವ ವ್ಯಕ್ತಿ ಮತ್ತು ನನಗೆ ತಿಳಿದಿರುವ ವ್ಯಕ್ತಿಯಾಗಿ ದರ್ಶನ್ ಅವರು ಎರಡು ವಿಭಿನ್ನ ವ್ಯಕ್ತಿತ್ವಗಳಂತೆ ಭಾಸವಾಗುತ್ತಿದೆ. ತನಿಖೆಗೂ ಮುನ್ನವೇ ಏನನ್ನೂ ಹೇಳಲಾಗುವುದಿಲ್ಲ. ಸೆಲೆಬ್ರಿಟಿಗಳ ಮೇಲೆ ಈ ರೀತಿಯದ್ದು ಏನಾದರೂ ಸಂಭವಿಸಿದಾಗ, ಶೇ 5 ರಷ್ಟು ಆರೋಪವಿದ್ದರೆ, ಅದು ಶೇ 500 ರಷ್ಟು ಆರೋಪವಾಗುತ್ತದೆ. ನಾವು ಕಾನೂನು ಪ್ರಕ್ರಿಯೆಯನ್ನು ಗೌರವಿಸಬೇಕು ಮತ್ತು ತನಿಖೆಗೆ ಮುನ್ನವೇ ಯಾವುದೇ ತೀರ್ಮಾನಗಳಿಗೆ ಬರಬಾರದು ಎಂದರು.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹಾಗೂ ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ದರ್ಶನ್ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಮತ್ತು ಕರ್ನಾಟಕದಲ್ಲಿ ಅವರ ಚಿತ್ರಗಳ ಬಿಡುಗಡೆಯನ್ನು ಸ್ಥಗಿತಗೊಳಿಸಬೇಕು ಎಂದು ಸಂತ್ರಸ್ತೆಯ ತಾಯಿ ಒತ್ತಾಯಿಸಿದ್ದಾರೆ.
Advertisement