
ಸುಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಗಾಡ್ ಪ್ರಾಮಿಸ್' ಚಿತ್ರದ ಸರಳ ಮುಹೂರ್ತ ಕಾರ್ಯಕ್ರಮ ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ನಟ ಪ್ರಮೋದ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದ್ದು, ಸಂಗೀತ ನಿರ್ದೇಶಕ ರವಿ ಬಸ್ರೂರ್ ಕ್ಲಾಪ್ ಮಾಡಿ ಚಿತ್ರಕ್ಕೆ ಬೆಂಬಲ ಸೂಚಿಸಿದರು.
2015 ರಿಂದ ರವಿ ಬಸ್ರೂರ್ ಅವರೊಂದಿಗಿನ ಸಹಯೋಗಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ ಸುಚನ್, 'ರವಿ ಸರ್ ನನ್ನ ಗುರು. ಅವರ ನಿರ್ದೇಶನದ ಕಟಕ, ಗಿರ್ಮಿಟ್ ಮತ್ತು ಅವರ ಇತ್ತೀಚಿನ ಕಡಲ್ಗಳಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ ಆ ಅನುಭವದ ಆಧಾರದ ಮೇಲೆ ಈ ಚಿತ್ರದ ಮೂಲಕ ನಿರ್ದೇಶಕನಾಗಿ ನನ್ನ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಕಳೆದ ಆರು ತಿಂಗಳಿನಿಂದ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆಡಿಷನ್ಗಳನ್ನು ನಡೆಸಲಾಗಿದ್ದು, ಶೀಘ್ರದಲ್ಲೇ ತಾರಾಗಣವನ್ನು ಅನಾವರಣಗೊಳಿಸಲಾಗುವುದು' ಎಂದರು.
ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ಒಂದು ಸಿನಿಮಾ ಮಾಡುವುದರಿಂದ ಎಷ್ಟೋ ಜನ ಕಲಾವಿದರ ಬದುಕು ಬದಲಾಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆ ವೇದಿಕೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಜೊತೆ ಬಂದವರಿಗೆ ಎಲ್ಲ ರೀತಿಯ ಕೆಲಸ ಕಲಿಯಿರಿ ಎಂದು ಹೇಳುತ್ತಿರುತ್ತೇನೆ. ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇವರ ರೀತಿ ನಮ್ಮ ಭಾಗದಲ್ಲಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.
ನಟ ಪ್ರಮೋದ್ ಶೆಟ್ಟಿ ಅವರು ಸುಚನ್ ಅವರ ಕೆಲಸವನ್ನು ಶ್ಲಾಘಿಸಿದರು ಮತ್ತು ಸುಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ತಂಡವಾಗಿ ಕೆಲಸ ಮಾಡಲಿ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಒಳ್ಳೆ ಬಜೆಟ್ ಕೂಡ ಇದೆ. ಇಡೀ ತಂಡದ ಮೇಲೆ ನಮ್ಮ ಬೆಂಬಲ ಇರಲಿದೆ ಎಂದು ಹೇಳಿದರು.
ಗಾಡ್ ಪ್ರಾಮಿಸ್ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮೈತ್ರಿ ಮಂಜುನಾಥ್ ನಿರ್ಮಿಸಿದ್ದು, ಫ್ಯಾಮಿಲಿ ಡ್ರಾಮಾ ಮತ್ತು ಕಾಮಿಡಿ ಅಂಶಗಳ ಮಿಶ್ರಣವಾಗಿರುವ ಈ ಚಿತ್ರವು ನೈಜ ಘಟನೆಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಚಿತ್ರಕ್ಕೆ ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣ, ಭರತ್ ಮಧುಸೂದನ್ ಅವರ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನವಿದೆ.
Advertisement