

ನಟ ಆರ್. ಮಾಧವನ್ ಅವರ ಮುಂದಿನ ತಮಿಳು ಸಿನಿಮಾ 'GDN'ಬಿಡುಗಡೆಗೆ ಸಜ್ಜಾಗಿದೆ. ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಆರ್. ಮಾಧವನ್ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೃಷ್ಣಕುಮಾರ್ ರಾಮ್ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ, ಮಾಧವನ್ ಅವರು ಖ್ಯಾತ ಎಂಜಿನಿಯರ್ ಜಿ.ಡಿ. ನಾಯ್ಡು ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.
'ಬಿಹೈಂಡ್ವುಡ್ಸ್ ಟಿವಿ' (Behindwoods TV) ಜೊತೆಗೆ ಇತ್ತೀಚಿಗೆ ಮಾತನಾಡಿದ ಆರ್. ಮಾಧವನ್, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಟನಿಂದ ರಾಜಕಾರಣಿಯಾಗಿ ಬದಲಾದ ದಳಪತಿ ವಿಜಯ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ಗಾರೆ.
ರಾಜ್ಯದ ಪ್ರಸ್ತುತ ರಾಜಕೀಯ ವಾತಾವರಣದ ಬಗ್ಗೆ ಕೇಳಿದಾಗ, "ಅನೇಕ ಒಳ್ಳೆಯ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದ ಆರ್. ಮಾಧವನ್, ವಿಜಯ್ ಅವರ ರಾಜಕೀಯ ಏಳಿಗೆಯನ್ನು ಉಲ್ಲೇಖಿಸುತ್ತಾ, ದಿಢೀರ್ ಬದಲಾವಣೆ ನಮ್ಮಲ್ಲಿಯೂ ಆತ್ಮವಿಶ್ವಾಸವನ್ನು ಮೂಡಿಸಿದೆ. ವಿಜಯ್ ನನಗೆ ಚೆನ್ನಾಗಿ ಗೊತ್ತು. ವಾಸ್ತವವಾಗಿ, ಈಗ ಅವರನ್ನು 'ಸಿಎಂ ವಿಜಯ್' (ಮುಖ್ಯಮಂತ್ರಿ ವಿಜಯ್) ಎಂದೇ ಕರೆಯಬೇಕು ಎಂದು ಅವರು ನುಡಿದರು.
ತಮಿಳುನಾಡಿನಲ್ಲಿ ವಿಜಯ್ ತಮ್ಮ ರಾಜಕೀಯ ಅಸ್ತಿತ್ವವನ್ನು ಬಲಪಡಿಸುತ್ತಿರುವ ಈ ಸಂದರ್ಭದಲ್ಲಿ ಮಾಧವನ್ ಅವರ ಈ ಹೇಳಿಕೆಗಳು ಗಮನ ಸೆಳೆದಿವೆ. ವಿಜಯ್ ಅವರ ರಾಜಕೀಯ ಪಯಣವನ್ನು ಶ್ಲಾಘಿಸಿದರೂ, ತಾನು ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ ಎಂದು ಮಾಧವನ್ ಸ್ಪಷ್ಟಪಡಿಸಿದರು.
ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಟ, "ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ. ರಾಜಕೀಯಕ್ಕೆ ಪ್ರವೇಶಿಸಲು ಜನರಿಗೆ ಸೇವೆ ಸಲ್ಲಿಸುವ ನಿಜವಾದ ಉತ್ಸಾಹವಿರಬೇಕು, ಮತ್ತು ಆ ಭಾವನೆ ನನ್ನಲ್ಲಿದೆ ಎಂದು ನನಗೆ ಅನ್ನಿಸುವುದಿಲ್ಲ. ಸಮಾಜಕ್ಕೆ ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ನಾನು ಬಯಸುತ್ತೇನೆ. ರಾಜಕೀಯ ಎರಡು ಹಲಗೆಯ ಕತ್ತಿ ಇದ್ದಂತೆ. ಅದರ ಬಗ್ಗೆ ನನಗೆ ಸಾಕಷ್ಟು ತಿಳುವಳಿಕೆಯಿಲ್ಲ ಎಂದು ಹೇಳಿದರು.
ವೃತ್ತಿಜೀವನದ ವಿಷಯಕ್ಕೆ ಬಂದರೆ, ಮಾಧವನ್ ಕೊನೆಯದಾಗಿ ರಣವೀರ್ ಸಿಂಗ್ ಅವರ 'ಧುರಂಧರ್: ದಿ ರಿವೆಂಜ್' (Dhurandhar: The Revenge) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಅವರು ಯೋಗಿ ಬಾಬು, ಸತ್ಯರಾಜ್ ಮತ್ತು ಪ್ರಿಯಾಮಣಿ ಅವರೊಂದಿಗೆ 'GDN' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವು ಆಗಸ್ಟ್ 7 ರಂದು ತಮಿಳು, ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 'GDN' ಹೊರತಾಗಿ, ಮಾಧವನ್ ಅವರ ಕೈಯಲ್ಲಿ 'ಅಧಿರಾಷ್ಟ್ರಶಾಲಿ' (Adhirashtasali) ಮತ್ತು 'ಸರ್ಕಲ್' (Circle) ಚಿತ್ರಗಳೂ ಇವೆ; ಇವೆರಡೂ ಚಿತ್ರಗಳಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.