

ಸತತ ನಾಲ್ಕೂವರೆ ವರ್ಷಗಳ ಗ್ಯಾಪ್ ನಂತರ ಟಾಕ್ಸಿಕ್ ಮೂಲಕ ರಾಕಿಂಗ್ ಸ್ಟಾರ್ ಯಶ್ ಚಿತ್ರಪ್ರೇಮಿಗಳನ್ನು ತೆರೆ ಮೇಲೆ ರಂಜಿಸಲು ಬರುತ್ತಿದ್ದಾರೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದ ನಟ ಯಶ್, ಇದೀಗ ಮತ್ತೊಂದು ಅಪರೂಪದ ಹಾಗೂ ಐತಿಹಾಸಿಕ ಮೈಲಿಗಲ್ಲನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಹಾಗೂ ದೀರ್ಘಾವಧಿಯ ಟಿವಿ ಟಾಕ್ ಶೋ ಎಂದೇ ಪ್ರಖ್ಯಾತಿ ಪಡೆದಿರುವ 'ಆಪ್ ಕಿ ಅದಾಲತ್' (Aap Ki Adalat) ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಾಟ್ಸೀಟ್ನಲ್ಲಿ ಕೂತ ಮೊಟ್ಟಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿ ಕೊಡುವ 'ಆಪ್ ಕಿ ಅದಾಲತ್' ಕಳೆದ ಮೂರು ದಶಕಗಳಿಂದಲೂ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮಾತ್ರವೇ ಈ ಹಾಟ್ ಸೀಟನಲ್ಲಿ ನಿಂತು ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತಹ ಖ್ಯಾತ ರಾಜಕಾರಣಿಗಳು, ಬಾಲಿವುಡ್ ಬಾದ್ಶಾ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಅವರಂತಹ ಸೂಪರ್ಸ್ಟಾರ್ಗಳು ಕುಳಿತ ಅದೇ ಈ ಚೇರ್ನಲ್ಲಿ, ಇದೀಗ ಕನ್ನಡದ ಯಶ್ ಗಂಭೀರವಾಗಿ, ಕಟ್ಟುಮಸ್ತಾಗಿ ಕುಳಿತು ಉತ್ತರ ನೀಡಿದ್ದಾರೆ.
ಸ್ವತಃ ರಜತ್ ಶರ್ಮಾ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಯಶ್ ಜೊತೆಗಿನ ಹಾಟ್ ಸೀಟ್ ಫೋಟೋ ಶೇರ್ ಮಾಡಿ ಈ ವ್ಯಕ್ತಿ ಯಾರು? ಒಂದು ಕಾಲದಲ್ಲಿ ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಈತ, ಈಗ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಕಟಕಟೆಯಲ್ಲಿ ಕುಳಿತಿರುವವರು ಯಾರು? ಆತ ತೆರೆ ಮೇಲೆ ಬರುವುದಿಲ್ಲ, ಬದಲಿಗೆ ಪರದೆಯನ್ನೇ ಹರಿದು ಹಾಕುತ್ತಾರೆ. ಯಾರೆಂದು ಗುರುತಿಸುತ್ತೀರಾ? ಎಂದು ರಜತ್ ಶರ್ಮಾ ಬರೆದುಕೊಂಡಿದ್ದಾರೆ.