

ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರು ಈಗ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ, ಕಷ್ಟಪಟ್ಟು ಸ್ಟಾರ್ ಆಗಿದ್ದೇನೆ. ಸ್ವಂತ ಶ್ರಮ ನಂಬಿದರೆ ಏನು ಬೇಕಾದ್ರೂ ಸಾಧಿಸಬಹುದು ಎಂದು ಯಶ್ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ.
`ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾ ಜರ್ನಿಯನ್ನ ಮೆಲುಕು ಹಾಕಿದ ರಾಕಿಂಗ್ ಸ್ಟಾರ್, ಸೀರಿಯಲ್ನಿಂದ ಬಣ್ಣದ ಪ್ರಯಾಣ ಪ್ರಾರಂಭಿಸಿದರು. ಬಳಿಕ ಪೋಷಕ ಪಾತ್ರಗಳಲ್ಲಿ ಕಾಣಿಸ್ಕೊಂಡು, ನಂತರ ಹೀರೋ ಆದವರು. ಮಾಸ್ ಹೀರೋ ಆಗಿ ಬದಲಾಗಲು ರಾಜಾಹುಲಿ ಚಿತ್ರ ಬರಬೇಕಾಯ್ತು. ಬಳಿಕ ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಯಿತು. ಇದೆಲ್ಲಾ ಆದ್ಮೇಲೆ ಬಂದಿದ್ದೇ ಕೆಜಿಎಫ್. ಆರಂಭದಲ್ಲಿ ಕೆಜಿಎಫ್ ಚಿಕ್ಕ ಚಿತ್ರವಾಗಿತ್ತು. ಆದರೆ ಯಶ್ ತಾವು ಕಂಡ ಕನಸನ್ನು ಈ ಮೂಲಕ ನನಸು ಮಾಡಿಕೊಂಡ್ರು. ಆ ಹೆಜ್ಜೆಯನ್ನು ಯಶ್ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಾರ್ಯಕ್ರಮದ ಆಡಿಯನ್ಸ್ ಗ್ಯಾಲರಿಯಿಂದ ನಂದಿನಿ ಹೆಸರಿನ ಪ್ರೇಕ್ಷಕಿಯೊಬ್ಬರು, ನೀವು ರಾತ್ರೋರಾತ್ರಿ ಸೂಪರ್ ಸ್ಟಾರ್ ಆದಾಗ ನಿಮ್ಮ ಕಾಲೇಜ್ ಫ್ರೆಂಡ್ಸ್, ಫ್ಯಾಮಿಲಿ ರಿಯಾಕ್ಷನ್ ಏನಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯಶ್, ನನಗೆ ರಾತ್ರೋರಾತ್ರಿ ಸಕ್ಸಸ್ ಸಿಕ್ತು ಅಂತ ಇಲ್ಲಿ ಜನ ಅಂದುಕೊಳ್ತಾರೆ. ನನ್ನ ಜೀವನದಲ್ಲಿ ಇದು ವಿಭಿನ್ನವಾಗಿದೆ. ಆದರೆ ಕರ್ನಾಟದಲ್ಲಿ ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ. ತುಂಬಾ ಕಷ್ಟ ಪಟ್ಟಿದ್ದೇನೆ ಎಂದರು.
ದೇಶದ ಜನರು ನನ್ನನ್ನು ಕೆಜಿಎಫ್ನಿಂದ ಗುರುತಿಸುತ್ತಾರೆ. ಆದರೆ ಕೆಜಿಎಫ್ ಚಿತ್ರಕ್ಕೂ ಮುನ್ನ ತುಂಬಾ ಹಿಟ್ ಸಿನಿಮಾಗಳನ್ನು ಕೊಡಬೇಕಾಯಿತು. ಆ ಸಿನಿಮಾಗಳೆಲ್ಲ ಸಕ್ಸಸ್ ಆಗಿದ್ದಕ್ಕೆ ನನ್ನ ಸಂಭಾವನೆ ಹೆಚ್ಚಾಯ್ತು. ನನಗೆ ರಾತ್ರೋರಾತ್ರಿ ಸಕ್ಸಸ್ ಸಿಗಲಿಲ್ಲ. ಒಂದೊಂದೇ ಹೆಜ್ಜೆ ಇಟ್ಟುಕೊಂಡು ಬರಬೇಕಾಯಿತು. ಬಳಿಕ ನಾನು ಅದನ್ನು ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋದೆ. ನಮಗೆ ಆ ಸಾಮರ್ಥ್ಯ ಇದ್ದಾಗ ತೋರಿಸೋದ್ರಲ್ಲಿ ತಪ್ಪೇನಿಲ್ಲ. ನಮ್ಮ ಕನ್ನಡ ಇಂಡಸ್ಟ್ರಿ ಚಿಕ್ಕದು ದೊಡ್ಡದು ಅಂತ ವ್ಯತ್ಯಾಸ ತೋರಿಸುತ್ತಿದ್ರಲ್ಲ ಅದಕ್ಕಾಗಿ ನಾವು ದೊಡ್ಡ ಹೆಜ್ಜೆ ಇಡಲು ಮುಂದಾಗಿ ಇಡೀ ಟೀಮ್ ಅನ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಒತ್ತಾಯಿಸಿದೆ. ಅಲ್ಲಿಯವರೆಗೆ ಯಾರಿಗೂ ಆ ವಿಶ್ವಾಸ ಇರಲಿಲ್ಲ. ಒಮ್ಮೆ ಕೆಜಿಎಫ್ ಬಂದಾಗ ಆಗ ಇಡೀ ಭಾರತ ನನ್ನನ್ನು ಒಪ್ಪಿಕೊಂಡಿತು ಎಂದಿದ್ದಾರೆ.