

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಧನ್ವೀರ್ ನಡುವೆ ಮನಸ್ತಾಪದ ವದಂತಿಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇದೀಗ ಸ್ವತಃ ಧನ್ವೀರ್ ಈ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಧನ್ವೀರ್, ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಯಾರು ಹೇಳಿದ್ದು? ಅವರನ್ನೇ ಕರೆದುಕೊಂಡು ಬನ್ನಿ. ಮನಸ್ತಾಪ ಇದ್ದಿದ್ದರೆ ಅವರನ್ನು ಭೇಟಿ ಮಾಡಲು ನಾನು ಜೈಲಿಗೆ ಬರುತ್ತಿದ್ನಾ? ದರ್ಶನ್ ಆರಾಮವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಯಾರು ಈ ರೀತಿಯ ಮಾಹಿತಿ ನೀಡಿದ್ದಾರೆ ಎಂಬ ಪ್ರಶ್ನೆಗೆ, ಯಾರು ಹೇಳಿದ್ದು ಅವರನ್ನೇ ಕರೆದುಕೊಂಡು ಬನ್ನಿ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಧನ್ವೀರ್, ವದಂತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನಸ್ತಾಪ ಇದ್ದಿದ್ದರೆ ತಾನು ದರ್ಶನ್ ಭೇಟಿಯಾಗಲು ಜೈಲಿಗೆ ಏಕೆ ಬರುತ್ತಿದ್ದೆ ಎಂದು ಹೇಳಿದ್ದಾರೆ.ಈ ಮೂಲಕ ಇತ್ತೀಚೆಗೆ ಕೇಳಿಬಂದಿದ್ದ ಮನಸ್ತಾಪದ ಸುದ್ದಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ತಾಯಿ ಮೀನಾ ಕೂಡ ಜೈಲಿಗೆ ಭೇಟಿ ನೀಡಿದ್ದರು. ಇಬ್ಬರೂ ದರ್ಶನ್ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಕಾರುಗಳಲ್ಲಿ ಜೈಲಿನಿಂದ ಹೊರಟಿದ್ದಾರೆ. ವಿಜಯಲಕ್ಷ್ಮಿ ಮತ್ತು ಧನ್ವೀರ್ ಇಬ್ಬರೂ ಒಂದೇ ಸಮಯದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿರುವುದು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಇತ್ತೀಚೆಗೆ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವೆ ಮನಸ್ತಾಪವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಜೈಲಿನಲ್ಲಿ ನಡೆದ ಈ ಭೇಟಿಯ ಬಳಿಕ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಮನಸ್ತಾಪಕ್ಕೆ ತೆರೆ ಬಿತ್ತಾ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ.