

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ತಮ್ಮ ಮಗನ ಟಾಕ್ಸಿಕ್ ಸಿನಿಮಾ ಮತ್ತು ಅವರ ವೃತ್ತಿಜೀವನದ ಕುರಿತ ನಕಾರಾತ್ಮಕ ಟೀಕೆಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಗ್ಗೆ ಕೆಲವರು ಬೇಕಂತಲೇ ನೆಗೆಟಿವ್ ಪ್ರಚಾರ ಮಾಡಿದ್ದಾರೆ.
ʻಟಾಕ್ಸಿಕ್ʼ ಸಿನಿಮಾ ಯಶಸ್ಸಿನ ಕುರಿತು ಖಾಸಗಿ ಟಿವಿ ವಾಹಿನಿಯೊಂದಿಗೆ ಮಾತನಾಡಿರುವ ಯಶ್ ತಾಯಿ, ಪುಷ್ಪಾ, ಯಶ್ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ, ಕುಟುಂಬದ ಬಾಂಧವ್ಯ ಮತ್ತು ತಾಯಿಯ ಸ್ಥಾನ ಎಂದಿಗೂ ಬದಲಾಗುವುದಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.
ಮಗನನ್ನು ಬಿಟ್ಟು ಸುಮ್ಮನಿರುವುದಲ್ಲ. ಹಗ್ಗ ನಮ್ಮತ್ರ ಇರಬೇಕು. ಹಾಗೇ ಯಶ್ನ ಹಗ್ಗ ನಮ್ಮತ್ರ ಇದೆ. ದೇಶ ಆಳೋಕೆ ಬಿಟ್ಟಿದ್ದೀವಿ ಅಂದರೆ ನಮ್ಮ ಪವರ್ ತಿಳಿದುಕೊಳ್ಳಬೇಕು. ಅಂತಹ ಮಗನನ್ನ ಹೆತ್ತು, ಯಾರ ಸಪೋರ್ಟ್ ಇಲ್ಲದೇ ಬೆಳೆಸಿದ್ದೀವಿ ಅಂದರೆ, ಅವನನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲೇ ಇದೆ. ಲಗಾಮು ನಾವೇ ಹಿಡಿದಿದ್ದೀವಿ. ಹತ್ತು ಭಾಷೆಯವರು ಬಂದರೂ ಯಶ್ನ ಬಗ್ಗಿಸಲು ಆಗಲ್ಲ, ತಪ್ಪು ಮಾಡಿಲ್ಲ ಅಂದ್ರೆ ಯಾರಿಗೆ ಏಕೆ ಬಗ್ಗಬೇಕು? ಎಂದು ಪ್ರಶ್ನಿಸಿದ್ದಾರೆ.
ಯಶ್ ಅವರಿಗೆ ಅಭಿಮಾನಿಗಳು ನೀಡಿರುವ ಸ್ಥಾನವೇ ಅವರ ದೊಡ್ಡ ಸಂಪಾದನೆ. ಈಗ ಅವನಿಗೆ 40 ವರ್ಷ. ಏನು ಕಳೆದುಕೊಳ್ಳುತ್ತಾನೆ? ಅಭಿಮಾನಿಗಳು ಸ್ಥಾನ ಕೊಟ್ಟಿದ್ದಾರೆ. ಸಂಪಾದನೆ ಮಾಡುತ್ತಾನೆ, ಆ ಖುಷಿ ಇನ್ನೂ ಸಾಕಾಗಲ್ಲ. ʻಹಗ್ಗ ಹದಿನಾರು ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆʼ. ಬೇಸ್ಮೆಂಟ್ ಹಾಕಿಕೊಟ್ಟಿದ್ದೇವೆ. ಅವನು ಬೆಳೆದಿದ್ದಾನೆ ಎಂದು ಯಶ್ ಅವರ ತಾಯಿ ಹೇಳಿದ್ದಾರೆ.
ಯಶ್ ಅವರ ಕುಟುಂಬ ಅಷ್ಟು ವೀಕ್ ಇಲ್ಲ ಎಂದು ಸ್ಪಷ್ಟಪಡಿಸಿದ ಪುಷ್ಪಾ, ‘ನೀವು ಅನ್ಕೊಂಡಿರಬಹುದು ಡ್ರೈವರ್ ಫ್ಯಾಮಿಲಿ ಅಂತ. ಆ ಫ್ಯಾಮಿಲಿಯಿಂದ ಇಷ್ಟು ಕೆಲಸ ಮಾಡೋಕೆ ಆಗಲ್ಲ ಎಂದುಕೊಂಡಿರಬಹುದು. ಆದರೆ, ಒಳ್ಳೆ ಬೇಸ್ಮೆಂಟ್ ಆ ಮನೆಯಲ್ಲಿ ಕೊಟ್ಟಿದ್ದೇವೆ. ಅವನು ಧೈರ್ಯವಾಗಿ ನಿಂತಿದ್ದಾನೆ, ಹೆದರಿ ಓಡಿಲ್ಲ’ ಎಂದು ಹೇಳಿದ್ದಾರೆ.
‘ನಮ್ಮಿಂದ ಕಲಿತುಕೊಂಡು ಹೋದರೆ ನಮಗೆ ಏನು ಪಾಠ ಕಲಿಸ್ತಾರೆ? ಯಶ್ ಅವರಿಂದ ಸಾಕಷ್ಟು ಜನ ಕಲಿತುಕೊಂಡು ಹೋಗಿದ್ದಾರೆ. ಅವನಿಗೆ ಸಿನಿಮಾ ಬಗ್ಗೆ ಯಾರು ಹೇಳಿಕೊಟ್ಟಿದ್ದು? ಯಾರೂ ಕಲಿಸಿಲ್ಲ. ಹುಟ್ಟುತ್ತಲೇ ಅವನಿಗೆ ಟ್ಯಾಲೆಂಟ್ ಬಂದಿದೆ. ಅದರಿಂದ ಇನ್ನೊಬ್ಬರು ಕಲಿತಿದ್ದಾರೆ’ ಎಂದು ಹೇಳಿದ್ದಾರೆ. ಕನ್ನಡ ಸಿನಿಮಾ ಬೇರೆ ಭಾಷೆಯವರು ಚೆನ್ನಾಗಿದೆ ಎನ್ನಲು ಯಶ್ ಅವರ ಪ್ರತಿಭೆಯೇ ಕಾರಣ ಎಂದು ಪುಷ್ಪಾ ಪ್ರತಿಪಾದಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಕುರಿತು ಮಾತನಾಡಿದ ಪುಷ್ಪಾ , ‘ಅವನೇನೋ ದಬಾಕಕ್ಕೆ ಹೋಗವನೆ ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು. ದಬಾಕಂಡೆ ಬಂದವನೆ. ಎಲ್ಲ ಜನ ಒಪ್ಪಿಕೊಂಡಿದ್ದಾರೆ’ ಎಂದು ಸಂತೋಷ ವ್ಯಕ್ತಪಡಿಸಿದರು.
ಇವನ ಕೈಯಲ್ಲಿ ಆಗಲ್ಲ, ವಾಪಸ್ ಬರ್ತಾನೆ ಎಂಬ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ತುಂಬಾ ಗ್ರೇಟ್ ಎಂದು ಭಾವಿಸುವುದಿಲ್ಲ. ಬದಲಾಗಿ ಏನೋ ಮಾಡ್ತಿದ್ದಾನೆ, ಮಾಡ್ಲಿ ಎಂದು ಪ್ರೋತ್ಸಾಹಿಸುತ್ತೇವೆ’ ಎಂದರು.