

ಬೀದಿ ನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆದ ನಂತರ ಅವರ ವಿರುದ್ಧ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ತಮ್ಮ ವೈಯಕ್ತಿಕ ಜೀವನ, ಮಾಜಿ ಪತಿ ಮತ್ತು ಮಕ್ಕಳನ್ನು ಚರ್ಚೆಗೆ ಎಳೆದು ತಂದ ಟ್ರೋಲ್ಗಳನ್ನು ಖಂಡಿಸಿ ರೇಣು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಮಂಗಳವಾರ, ಆನ್ಲೈನ್ ನಕಾರಾತ್ಮಕತೆ ಕುರಿತು ಮಾತನಾಡಿರುವ ಮತ್ತೊಂದು ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
'ನನ್ನನ್ನು ರಕ್ಷಿಸಲು ನನಗೆ ತಂದೆ, ತಾಯಿ, ಅಣ್ಣ ಅಥವಾ ಗಂಡ ಇಲ್ಲ. ನನ್ನದಲ್ಲದ ತಪ್ಪಿಗೆ ನೀವು ನನ್ನ ಮೇಲೆ ತೋರಿಸಿದ ಎಲ್ಲ ರೀತಿಯ ದ್ವೇಷವನ್ನು ನಾನು ದೇವಿ ಮತ್ತು ಮಹಾದೇವ ಅವರೊಂದಿಗೆ ಶಾಂತವಾಗಿ ಹಂಚಿಕೊಳ್ಳುತ್ತೇನೆ. ಅವರು ನನ್ನ ನೋವನ್ನು ಕೇಳುತ್ತಾರೆ ಮತ್ತು ನನ್ನ ಕಣ್ಣೀರನ್ನು ನೋಡುತ್ತಾರೆ ಎಂಬುದು ನನಗೆ ತಿಳಿದಿದೆ' ಎಂದು ವಾರಣಾಸಿ ಘಾಟ್ನಲ್ಲಿರುವ ರೇಣು ಹೇಳಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
'ನಾನು ನನ್ನ ವೈಯಕ್ತಿಕ ಹಕ್ಕುಗಳಿಗಾಗಿ ಎಂದಿಗೂ ಸಾರ್ವಜನಿಕವಾಗಿ ಹೋರಾಡಿಲ್ಲ. ಆದರೆ, ಕೆಲವು ಆಕ್ರಮಣಕಾರಿ ನಾಯಿಗಳ ತಪ್ಪುಗಳಿಗಾಗಿ ಎಲ್ಲ ಮುಗ್ಧ ನಾಯಿಗಳನ್ನು ಕೊಲ್ಲುವುದು ತಪ್ಪು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳುವವರೆಗೂ ನಾನು ಕಿರುಚುತ್ತೇನೆ ಮತ್ತು ಕೂಗುತ್ತೇನೆ. ನೀವು ನನ್ನ ಬಗ್ಗೆ ಎಷ್ಟು ಬೇಕಾದರೂ ನಕಾರಾತ್ಮಕ, ದ್ವೇಷಪೂರಿತ ಮತ್ತು ಅಸಂಬದ್ಧವಾಗಿ ಮಾತನಾಡಬಹುದು. ಆದರೆ, ನಾನು ಯಾರೊಂದಿಗೆ ನನ್ನ ನೋವು ಮತ್ತು ಕಣ್ಣೀರನ್ನು ಹಂಚಿಕೊಳ್ಳುತ್ತೇನೆ ಎಂಬುದನ್ನು ನೆನಪಿಡಿ' ಎಂದು ರೇಣು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಸೋಮವಾರ, ರೇಣು 55 ವರ್ಷದ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆ ವ್ಯಕ್ತಿ ಅವರನ್ನು ಹೊಡೆಯಲು ಯತ್ನಿಸಿದ್ದ ಎನ್ನಲಾಗಿದೆ.
ಟ್ರೋಲ್ಗಳನ್ನು ಉದ್ದೇಶಿಸಿ ವಿಡಿಯೋ ಪೋಸ್ಟ್ ಮಾಡಿರುವ ಅವರು, 'ನಾನು ಮನೆಗೆ ಹೋಗುವಾಗ ಕೆಲವು ಕಾಮೆಂಟ್ಗಳನ್ನು ನೋಡಿದ್ದೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದು ಎಷ್ಟು ಸರಿ? ನಾನು ಈ ರೀತಿಯಲ್ಲಿರುವುದೇ ಪವನ್ ಕಲ್ಯಾಣ್ ನನ್ನನ್ನು ಬಿಟ್ಟು ಹೋಗಲು ಕಾರಣ ಎಂದು ನೀವು ಹೇಳುತ್ತಿದ್ದೀರಿ. ಬೀದಿ ನಾಯಿಗಳ ಪರವಾಗಿ ಹೋರಾಡಿದರೆ ನನಗೆ ಹಣ ಸಿಗುತ್ತದೆಯೇ? ನಾನು ಅವುಗಳಿಗಾಗಿ ಮಾತ್ರ ಹೋರಾಡುತ್ತಿಲ್ಲ; ನಾನು ಮಾನವ ಜೀವಕ್ಕಾಗಿ ಹೋರಾಡುತ್ತಿದ್ದೇನೆ. ಮತ್ತು ನೀವು ಅಂತಹ ಅಸಹ್ಯಕರ ಕಾಮೆಂಟ್ಗಳನ್ನು ಮಾಡುತ್ತಿದ್ದೀರಿ. ನನ್ನ ಮಕ್ಕಳು ನಾಯಿ ಕಡಿತದಿಂದ ಸತ್ತರೆ ನಾನು ಪಾಠ ಕಲಿಯುತ್ತೇನೆ ಎಂದು ನೀವು ಹೇಳಿದ್ದೀರಿ. ನೀವು ಹಾಗೆ ಏಕೆ ಹೇಳುತ್ತೀರಿ? ನಾನು ಜೀವನದ ಮೌಲ್ಯವನ್ನು ತಿಳಿದಿರುವ ತಾಯಿ' ಎಂದಿದ್ದಾರೆ.
ಅಲ್ಲದೆ, ತಾವು ಮಾಧ್ಯಮದವರ ಮೇಲೆ ಕೂಗಾಡಿಲ್ಲ ಎಂದು ರೇಣು ಸ್ಪಷ್ಟಪಡಿಸಿದ್ದಾರೆ.
2008 ರಲ್ಲಿ ತಮ್ಮ ಮೊದಲ ಪತ್ನಿ ನಂದಿನಿಯಿಂದ ವಿಚ್ಛೇದನ ಪಡೆದ ನಂತರ, ನಟ-ರಾಜಕಾರಣಿ ಪವನ್ ಕಲ್ಯಾಣ್ 2009ರಲ್ಲಿ ರೇಣು ದೇಸಾಯಿ ಅವರನ್ನು ವಿವಾಹವಾದರು. ಈ ದಂಪತಿಗೆ 2010 ರಲ್ಲಿ ಅಕಿರಾ ಎಂಬ ಮಗ ಮತ್ತು 2012 ರಲ್ಲಿ ಪೊಲೆನಾ ಎಂಬ ಮಗಳು ಜನಿಸಿದರು. ಸ್ವಲ್ಪ ಸಮಯದ ನಂತರ ಅವರಿಬ್ಬರು ಬೇರ್ಪಟ್ಟರು. ನಂತರ ಪವನ್ 2013ರಲ್ಲಿ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು.
Advertisement