

ಮುಂಬೈ: ಬಹು ದಿನಗಳ ನಂತರ ಬಾಲಿವುಡ್ನಲ್ಲಿ ಭಾರತೀಯ ಪುರಾಣವನ್ನು ಆಧರಿಸಿದ ಸಿನಿಮಾವೊಂದು ತೆರೆಕಾಣಲು ಸಿದ್ಧವಾಗಿದೆ. ಭಾರತೀಯ ಪರಂಪರೆಯಲ್ಲಿ ಮಹಾಗ್ರಂಥವೆಂದೇ ಕರೆಯಲ್ಪಡುವ ರಾಮಾಯಣವನ್ನು ಆಧರಿಸಿಕೊಂಡು ನಿರ್ದೇಶಕ ನಿತೇಶ್ ತಿವಾರಿ ಎರಡು ಭಾಗಗಳಲ್ಲಿ 'ರಾಮಾಯಣ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾದ ಮೊದಲ ಭಾಗವು 2026 ರ ಅಕ್ಟೋಬರ್ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಸಿನಿಮಾಗೆ ಪಾತ್ರಕ್ಕಾಗಿ ಆಯ್ದುಕೊಂಡ ಕಲಾವಿದರ ಬಗ್ಗೆ ಬಾಲಿವುಡ್ನ ಹಿರಿಯ ನಟ ಅನ್ನು ಕಪೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೀತಾ ಮಾತೆ ಪಾತ್ರ ಹಾಗೂ ನಿರ್ದೇಶಕರ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಿದ ಅನ್ನು ಕಪೂರ್, ಈಗೆ ತೆರೆಕಾಣಲಿರುವ ರಾಮಾಯಣ ಎಂಬ ಸಿನಿಮಾ, ದಯಾನಂದ್ ಸಾಗರ್ ಅವರು ನಿರ್ಮಿಸಿದ್ದ ರಾಮಾಯಣವನ್ನು ದೃಶ್ಯ ಸಂಯೋಜನೆ ಹಾಗೂ ತಂತ್ರಜ್ಞಾನದಲ್ಲಿ ಹಿಂದೂಡಬಹುದು, ಆದರೆ ನೈತಿಕ ಮೌಲ್ಯಗಳನ್ನು ನಿಮ್ಮ ಸಿನಿಮಾ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತೀಯರು, ಅದರಲ್ಲೂ ಹಿಂದೂಗಳು ಶ್ರೀರಾಮನನ್ನು ಭಗವಾನ್ ನಾರಾಯಣನ ಅವತಾರ ಎಂದು ಪೂಜಿಸುತ್ತಾರೆ, ಸೀತಾ ದೇವಿ ಭಾರತೀಯರಿಗೆ ತಾಯಿಯ ಸ್ಥಾನದಲ್ಲಿದ್ದಾರೆ, ಆದರೆ ನಿಮ್ಮ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಜನ ಅವರ ಪಾತ್ರವನ್ನು, ಅವರನ್ನು ಒಪ್ಪುತ್ತಾರೆಯೇ? ಎಂದು ಸಾಯಿ ಪಲ್ಲವಿಗೆ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.
ಇನ್ನೂ ಈ ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಯಾರೆಂದೇ ನನಗೆ ಗೊತ್ತಿಲ್ಲ. ಅವನು ಈ ಮೊದಲು ಯಾವ ಸಿನಿಮಾ ಮಾಡಿದ್ದಾನೆ ಎಂದೂ ನನಗೆ ತಿಳಿದಿಲ್ಲ. ಈ ರಾಮಾಯಣ ದಾಂ ದುಂ ಆಗಿ ತೆರೆಕಂಡರೂ ಜನರ ಮನಸ್ಸನ್ನು ಮುಟ್ಟುತ್ತದೆ ಎಂದು ನಾನು ಹೇಳಲಾರೆ. ಈ ಸಿನಿಮಾದಲ್ಲಿ ನಮ್ಮ ಪೌರಾಣಿಕ ಕನೆಕ್ಷನ್ ಇಲ್ಲ ಎಂದು ಅನ್ನು ಕಪೂರ್ ಹೇಳಿದ್ದಾರೆ.