

ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕ, ಗೀತರಚನೆಕಾರ ಹಾಗೂ ಸಾಹಿತಿ, ನಾದಬ್ರಹ್ಮ ಹಂಸಲೇಖ ಅವರಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಇತ್ತೀಚಿಗೆ ಕೇಳಿಬಂದಿತ್ತು.
ಈ ನಿಟ್ಟಿನಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಅವರು ಅಭಿಯಾನ ಆರಂಭಿಸಿದ್ದು, ಇದಕ್ಕೆ ಸಂಗೀತ ದಿಗ್ಗಜ ಹಂಸಲೇಖ ಅವರು ಒಪ್ಪಿಗೆ ನೀಡಿಲ್ಲ ಮತ್ತು ಖುದ್ದು ಅವರೇ ಸಾಕು ಈ ಅಭಿಯಾನ ನಿಲ್ಲಿಸಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ.
ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಮತ್ತು ಸಾಹಿತ್ಯ ನೀಡಿರುವ ಅಪರೂಪದ ಸಾಧನೆಯನ್ನು ಮಾಡಿದ ಕನ್ನಡಿಗ ಎಂಬ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.
ಪ್ರೇಮ್ ಅಭಿಯಾನಕ್ಕೆ ಸಾಮಾಜಿಕ ಇನ್ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿರುವ ಹಂಸಲೇಖ ಅವರು, ‘ಕನ್ನಡದಾಣೆ, ಇದಕ್ಕೆ (ಅಭಿಯಾನ) ನನ್ನ ಒಪ್ಪಿಗೆ ಇಲ್ಲ. ಇದೊಂದು ಅನಗತ್ಯವಾದ ಅಭಿಮಾನದ ದುಡುಕು ಮತ್ತು ಪ್ರೀತಿಯ ತೊಂದರೆ. ಸೀನ್ಗೂ, ಟ್ಯೂನ್ಗೂ, ಲಿರಿಕ್ಸ್ಗೂ ಹೊಂದಾಣಿಕೆಯೇ ಇಲ್ಲ. ಫ್ಲಾಫ್ ಸಾಂಗಿದು, ದಯವಿಟ್ಟು ನಿಲ್ಲಿಸಿ, ನೆನಪಿರಲಿ, ಪ್ರೀತಿಯ ಪ್ರೇಮ್’ ಎಂದು ಹಂಸಲೇಖ ಹೇಳಿದ್ದಾರೆ.
‘ಕನ್ನಡ ನಮ್ಮ ಹಕ್ಕಿನ ಭಾಷೆ, ಈ ಸತ್ಯವನ್ನು ಪ್ರತಿದಿನವೂ ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ. ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು’ ಎಂದು ಹಂಸಲೇಖ ಹೇಳಿದ್ದಾರೆ. ಆ ಮೂಲಕ ತಮಗೆ ಪ್ರಶಸ್ತಿ, ಗೌರವಗಳ ಅಗತ್ಯವಿಲ್ಲ ಎಂದಿದ್ದಾರೆ. ಜೊತೆಗೆ ಕೂಡಲೇ ಈ ಅಭಿಯಾನವನ್ನು ನಿಲ್ಲಿಸಿ ಎಂದು ಮನವಿಯನ್ನು ಸಹ ಹಂಸಲೇಖ ಮಾಡಿದ್ದಾರೆ.