ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತಾವು ಒಪ್ಪಿಕೊಳ್ಳುವ ಪ್ರತಿಯೊಂದು ಪಾತ್ರಗಳ ವಿಷಯದಲ್ಲಿ ಯಾವಾಗಲೂ ಆಯ್ಕೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುತ್ತಾರೆ. ಯಾವುದೇ ಯೋಜನೆಗೆ ಕೈಹಾಕಲು ಅವರಿಗೆ ಒಂದು ಬಲವಾದ ಕಾರಣವಿರಬೇಕು. ನಿರ್ದೇಶಕ ಗುರುದತ್ತ ಗಾಣಿಗ ಅವರ ಕಾರಣದಿಂದಾಗಿ ಅವರು 'ಕರಾವಳಿ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
'ನನಗೆ ಗುರುದತ್ತ ಮತ್ತು ಅವರ ನಿರ್ದೇಶನದ ಮೇಲೆ ನಂಬಿಕೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಚಿತ್ರ ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ; ಏಕೆಂದರೆ 'ಕರಾವಳಿ' ಗೆದ್ದರೆ, ಚಿತ್ರರಂಗಕ್ಕೆ ಮತ್ತೊಬ್ಬ ಉತ್ತಮ ನಿರ್ದೇಶಕ ಸಿಕ್ಕಂತಾಗುತ್ತದೆ. ತಮ್ಮ ಪಾತ್ರ ಚಿಕ್ಕದಾಗಿದ್ದರೂ ಕಥೆಯ ಒಟ್ಟಾರೆ ನಿರೂಪಣೆಯಲ್ಲಿ ಅದು ಮಹತ್ವದ ಪಾತ್ರವನ್ನು ಹೊಂದಿದೆ' ಎಂದು ತಿಳಿಸುತ್ತಾರೆ.
'ಇದು ಅಲ್ಪಕಾಲದ ಪಾತ್ರವಾದರೂ (ಕ್ಯಾಮಿಯೋ), ಬಹಳ ಮುಖ್ಯವಾದುದು. ಈ ಪಾತ್ರವು ಸೂಪರ್ಹೀರೋವಿನಂತಹ ಗುಣಲಕ್ಷಣಗಳನ್ನು ಹೊಂದಿದ್ದರೂ, ವಾಸ್ತವದಲ್ಲಿ ಆತ ಒಬ್ಬ ಸಾಮಾನ್ಯ ಮನುಷ್ಯ. ಇದೇ ನನಗೆ ಆಸಕ್ತಿದಾಯಕವೆನಿಸಿತು. ಕಥೆಯನ್ನು ಹಾಗೂ ತಮ್ಮ ಸುತ್ತಮುತ್ತಲಿನ ಪಾತ್ರಗಳನ್ನು ಬಲಪಡಿಸುವುದೇ ಈ ಪಾತ್ರದ ಉದ್ದೇಶ ಎಂದು ವಿವರಿಸುತ್ತಾರೆ.
'ಕಥೆಯಲ್ಲಿ ನನ್ನ ಸುತ್ತಲಿನ ಪಾತ್ರಗಳಿಗೆ ಹೆಚ್ಚಿನ ಮಹತ್ವವಿದೆ ಮತ್ತು ಅವುಗಳ ಬೆಳವಣಿಗೆಯ ಹಾದಿ (character arc) ಕೂಡ ಸಮರ್ಪಕವಾಗಿದೆ. ಇದೇ ಈ ಪಾತ್ರವನ್ನು ವಿಶೇಷವಾಗಿಸುತ್ತದೆ. ಇದು ಕೇವಲ ಗಮನ ಸೆಳೆಯುವ ಪ್ರಯತ್ನವಲ್ಲ, ಬದಲಾಗಿ ಕಥೆಗೆ ಪೂರಕವಾಗಿ ನಿಲ್ಲುವ ಪಾತ್ರವಾಗಿದೆ' ಎಂದು ಹೇಳಿದರು.
ಇದು ನಟನೆ ಮತ್ತು ಚಲನಚಿತ್ರ ನಿರ್ಮಾಣದ ಕುರಿತಾದ ರಾಜ್ ಅವರ ದೃಷ್ಟಿಕೋನವನ್ನು ವಿವರಿಸುತ್ತದೆ. ಕಥೆಯ ನಿರೂಪಣೆಯಲ್ಲಿ ಪಾತ್ರದ ಅವಧಿ ಅಥವಾ ತೆರೆಯ ಮೇಲಿನ ಸಮಯ ಎಷ್ಟೇ ಇದ್ದರೂ, ಕಥೆಗೆ ಮೌಲ್ಯವನ್ನು ಒದಗಿಸುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 'ಕರಾವಳಿ' ಚಿತ್ರದ ಮೂಲಕ, ಪ್ರೇಕ್ಷಕರು ಈ ಚಿತ್ರದ ಜಗತ್ತು ಮತ್ತು ಕಥಾಹಂದರದೊಂದಿಗೆ ಭಾವನಾತ್ಮಕವಾಗಿ ಬೆರೆಯಲಿದ್ದಾರೆ ಎಂಬ ಭರವಸೆಯನ್ನು ರಾಜ್ ಹೊಂದಿದ್ದಾರೆ. 'ದೀರ್ಘಕಾಲದವರೆಗೆ ಉಳಿಯುವಂತಹ ಪ್ರಭಾವ ಬೀರುವ ಕಥೆಯ ಭಾಗವಾಗಿರುವುದಕ್ಕೆ ನನಗೆ ಸಂತೋಷವಿದೆ' ಎಂದು ಅವರು ಹೇಳುತ್ತಾರೆ.