'ಮಾತನಾಡುವವರ ವ್ಯಕ್ತಿತ್ವ ತೋರಿಸುತ್ತದೆ': ಪಾರ್ಥಿಬನ್ ಆಕ್ಷೇಪಾರ್ಹ ಹೇಳಿಕೆಗೆ ತ್ರಿಷಾ ಕೃಷ್ಣನ್ ತಿರುಗೇಟು; ಕ್ಷಮೆಯಾಚಿಸಿದ ನಟ-ನಿರ್ದೇಶಕ
ನಟಿ ತ್ರಿಷಾ ಕೃಷ್ಣನ್ ಅವರ ಬಗ್ಗೆ ಇತ್ತೀಚೆಗೆ ಉಂಟಾದ ವಿವಾದಕ್ಕೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ನಿರ್ದೇಶಕ-ನಟ ಆರ್ ಪಾರ್ಥಿಬನ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗಳ ನಂತರ ಈ ವಿವಾದ ಉಂಟಾಗಿತ್ತು. ಪಾರ್ಥಿಬನ್ ಅವರನ್ನು ನೇರವಾಗಿ ಹೆಸರಿಸದೆ ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, “ಮೂರ್ಖತನ” ಎಂದು ಹೇಳಿ ಸಮಾರಂಭದಲ್ಲಿ ತನ್ನ ಬಗ್ಗೆ ಮಾಡಿದ ಟೀಕೆಗಳನ್ನು ಖಂಡಿಸಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡ ನಂತರ ಇಬ್ಬರ ಮಧ್ಯೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ವಿಜಯ್ ಅವರ ಪತ್ನಿ ಸಂಗೀತ ಸೋರ್ಣಲಿಂಗಂ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೆಂಬ ವರದಿಗಳು ಬಂದ ಕೆಲವೇ ದಿನಗಳ ನಂತರ ಈ ಕಾರ್ಯಕ್ರಮ ನಡೆದಿತ್ತು. ರಿಸೆಪ್ಷನ್ಗೆ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಬಂದಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇಬ್ಬರ ಬಗ್ಗೆ ಕೂಡ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ.
ಈ ಮಧ್ಯೆ, Galatta Awards ಕಾರ್ಯಕ್ರಮದಲ್ಲಿ ಮಾತನಾಡಿದ ಪಾರ್ಥಿಬನ್, ತ್ರಿಷಾ ಬಗ್ಗೆ ವ್ಯಂಗ್ಯ ಮಾಡಿರುವಂತೆ ಕಂಡುಬಂದರು. ಅವರು ಹಿಂದೆ ಕೆಲಸ ಮಾಡಿದ ನಟರ ಬಗ್ಗೆ ಕೇಳಿದಾಗ, ಪರದೆಯ ಮೇಲೆ ತ್ರಿಷಾ ಅವರ ಚಿತ್ರ ಕಾಣಿಸಿಕೊಂಡಿತು. ಆಗ ಅವರು ಪೊನ್ನಿಯನ್ ಸೆಲ್ವಂ ಚಿತ್ರದಲ್ಲಿನ ಅವರ ಪಾತ್ರವನ್ನು ಉಲ್ಲೇಖಿಸಿ, “ಕೆಲ ದಿನಗಳವರೆಗೆ ಕುಂದವೈಯನ್ನು ಮನೆಯಲ್ಲೇ ಇರಿಸಬೇಕು” ಎಂದು ಹೇಳಿದರು. ಈ ಹೇಳಿಕೆಯನ್ನು ಅನೇಕರು ಅಸಭ್ಯ ಮತ್ತು ಅನಗತ್ಯ ಎಂದು ಟೀಕಿಸಿದರು.
ವಿವಾದದ ನಂತರ, ಪಾರ್ಥಿಬನ್ ನಿನ್ನೆ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದರು. ತಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿರುವುದನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದರು.
ಆದರೆ ನಟಿ ತ್ರಿಷಾ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಯಾರ ಹೆಸರನ್ನೂ ಹೇಳದೇ, ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೆಸರು ಮತ್ತು ಚಿತ್ರವನ್ನು ಕಾರ್ಯಕ್ರಮದ ಪ್ರಸ್ತುತಿಯಲ್ಲಿ ಕೊನೆಯ ಕ್ಷಣದಲ್ಲಿ ಒಬ್ಬ ವ್ಯಕ್ತಿಯ ವಿನಂತಿಯ ಮೇರೆಗೆ ಸೇರಿಸಲಾಗಿತ್ತು ಎಂದು ಕಾರ್ಯಕ್ರಮದ ಆಯೋಜಕರಿಂದಲೇ ತಮಗೆ ಗೊತ್ತಾಯಿತು ಎಂದಿದ್ದಾರೆ.
ತ್ರಿಷಾ ತಮ್ಮ ಪೋಸ್ಟ್ನಲ್ಲಿ, ಮೈಕ್ರೋಫೋನ್ ಇದ್ದ ತಕ್ಷಣ ಯಾವ ಮಾತೂ ಬುದ್ಧಿವಂತಿಕೆಯಾಗುವುದಿಲ್ಲ ಅಥವಾ ಹಾಸ್ಯಕರವಾಗುವುದಿಲ್ಲ. ಸರಿಯಾದ ಮಾಹಿತಿ ಇಲ್ಲದೆ ಅಸಭ್ಯವಾಗಿ ಮಾಡಿದ ಹೇಳಿಕೆಗಳು ಗುರಿಯಾಗಿರುವ ವ್ಯಕ್ತಿಗಿಂತ ಮಾತನಾಡುವವರ ಬಗ್ಗೆ ಹೆಚ್ಚು ಹೇಳುತ್ತವೆ, ಇದು ಮೂರ್ಖತನದ್ದು ಎಂದಿದ್ದಾರೆ.

