ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವ ಒಂದು ಪ್ರಸಿದ್ಧ ಮಾತಿದೆ. ಆದರೆ ಬದುಕು ಆ ಅರ್ಥವನ್ನು ಮೀರಿ ಬೆಳೆದುಬಿಟ್ಟಿದೆ. ಹೊಟ್ಟೆ, ಬಟ್ಟೆ ಮೀರಿದ ಅಸೆ ಆಕಾಂಕ್ಷೆ ಇಂದು ಜನರನ್ನ ತಮ್ಮ ಹುಟ್ಟೂರು, ಹೆತ್ತವರು, ಬಂಧು ಮಿತ್ರರ ಬಿಟ್ಟು ಬೇರೆಲ್ಲೋ ಬದುಕು ಕಂಡುಕೊಳ್ಳುವ ಧಾವಂತಕ್ಕೆ ದೂಡಿದೆ. ಮೊದಮೊದಲು ಉತ್ತಮ ಮಟ್ಟದ ಬದುಕಿಗಾಗಿ ಶುರುವಾದದ್ದು ಇದೀಗ ಅನಿವಾರ್ಯವಾಗಿದೆ. ಬೇಕಿರಲಿ ಬೇಡವಿರಲಿ ಅದೇ ಬದುಕಾಗಿದೆ. ಭಾರತ ದೇಶದಲ್ಲಿ ಒಂದು ನಗರದಿಂದ ಇನ್ನೊಂದು ನಗರದಲ್ಲಿ ಬದುಕುವ ಜನರ ಬದುಕು ಒಂದು ರೀತಿಯದ್ದು, ಅಷ್ಟೇ ಹಣಕ್ಕೆ ಅಥವಾ ಅದಕ್ಕಿಂತ ಕಡಿಮೆ ಹಣಕ್ಕೆ ವಿದೇಶ ಸೇರುವ ಜನರ ಬಾಳು ಇನ್ನೂ ನಿಕೃಷ್ಟವಾಗಿ ಹೋಗಿದೆ. ಕೇರಳ ಮತ್ತು ಪಂಜಾಬ್ ರಾಜ್ಯಗಳಿಂದ ಹೆಚ್ಚಿನ ಜನ ಬದುಕು ಅರಸಿ ಹೊರ ದೇಶಕ್ಕೆ ಹೋಗುತ್ತಾರೆ. ಕೇರಳ ರಾಜ್ಯದ ಮುಕ್ಕಾಲು ಪಾಲು ಹೀಗೆ ಹೋದ ಜನ ಸೇರುವುದು ಗಲ್ಫ್ ದೇಶವನ್ನ.