ನಾವು ಚಿಕ್ಕಂದಿನಿಂದ ಕೇಳುತ್ತಾ ಬಂದಿರುವ ಮಾತೇನು? ಭಾಷೆ ಯಾವುದೇ ಇರಲಿ ಬಾಲ್ಯದಲ್ಲಿ ಅದನ್ನ ಕಲಿಯುವುದು ಸುಲಭ ಎನ್ನುವ ಮಾತು ಅಲ್ಲವೇ? ಕೇವಲ ಭಾಷೆ ಒಂದೇ ಅಲ್ಲ ಯಾವುದೇ ಹೊಸ ವಿಷಯವಿರಲಿ ಬಾಲ್ಯದಲ್ಲಿ ಅದನ್ನ ಕಲಿಯುವುದು ಸುಲಭವಷ್ಟೇ ಅಲ್ಲ ಬಹಳ ವೇಗವಾಗಿ ಕೂಡ ಕಲಿಯುತ್ತಾರೆ. ಮಕ್ಕಳಲ್ಲಿ ಸೋಲುವ ಭಯ ಇಲ್ಲದೆ ಇರುವುದು ಮತ್ತು ಸಹಜವಾಗೇ ಜಗತ್ತಿನ ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದಕ್ಕೆ ಪ್ರಮುಖ ಕಾರಣ. ಮಕ್ಕಳು 12 ಅಥವಾ 13 ದಾಟುವ ಮೊದಲು ಅವರಿಗೆ ಮುಕ್ತ ವಾತಾವರಣ ಕಲ್ಪಿಸಿ ಅವರ ಮನಸ್ಸಿಗೆ ಬಂದದ್ದನ್ನು ಪ್ರಯತ್ನಿಸಲು ಬಿಡಬೇಕು ಆದರೆ ಪೋಷಕರಾಗಿ ಜಗತ್ತಿನ ಮುಕ್ಕಾಲು ಪಾಲು ಜನ ಮಾಡುವುದೇನು ಗೊತ್ತೇ? ಬೇಡ, ಇಲ್ಲ, ಸಾಕು, ಹುಷಾರು, ನಿನಗೆ ತಿಳಿಯೋಲ್ಲ ಎನ್ನುವಂತ ನಕಾರಾತ್ಮಕ ಪದಗಳನ್ನ ಬಳಸುವುದು.
90 ಕೆ.ಜಿ ತೂಗುವ ಅಪ್ಪ ಓಡಲಾರ ಅದೇ ಆತನ 6ವರ್ಷದ ಕೂಸು ಓಡಬಲ್ಲದು, ಹಿತ್ತಲ ಗೋಡೆ ಹಾರಬಲ್ಲದು, ಸಜ್ಜದಿಂದ ನೆಲಕ್ಕೆ ಧುಮುಕಬಲ್ಲದು. ಉಹೂ ಆದರೆ ಅದಕ್ಕೆ ಅಪ್ಪ ಬಿಡುವುದಿಲ್ಲ. ಹುಷಾರು ಬಿದ್ದೀಯ ಎನ್ನುವುದು ಅವನ ಬಾಯಿಂದ ತಕ್ಷಣ ಬರುವ ಪ್ರತಿಕ್ರಿಯೆ. ಮಗು ಸಜ್ಜದಿಂದ ಜಿಗಿಯುವಾಗಂತೂ ಆತನ ಅಥವಾ ಆಕೆಯ ಹೃದಯ ಬಾಯಿಗೆ ಬಂದಿರುತ್ತೆ. ಇವೆಲ್ಲ ಯಾಕಾಗುತ್ತೆ ಗೊತ್ತಾ? ಮಕ್ಕಳಂತೆ ಹಾರಲು ಕುಣಿಯಲು ವಯಸ್ಕರ ದೇಹ ಅಡ್ಡಿ ಮಾಡುತ್ತದೆ. ಅವರಲ್ಲಿರುವ 'ಸಾಧ್ಯವಿಲ್ಲ' ಎನ್ನುವ ಮನೋಭಾವವನ್ನ ತಮಗೆ ಅರಿವಿಲ್ಲದೆ ತಮ್ಮ ಮಕ್ಕಳ ಮೇಲೆ ಹೇರುತ್ತಾರೆ.
ಗಮನಿಸಿ ಮನುಷ್ಯನ ಚರಿತ್ರೆಯನ್ನ ಓದಿಕೊಂಡು ಬನ್ನಿ. ಆತ ಮಾತು, ಭಾಷೆ, ಆಹಾರ ಒಟ್ಟಿನಲ್ಲಿ ಪೂರ್ಣ ನಡವಳಿಕೆಯನ್ನ ಬೇರೆಯವರು ಮಾಡುವುದನ್ನ ನೋಡಿ ನಕಲು ಮಾಡಿ ಕಲಿತದ್ದು. ಇಂದಿಗೂ ಮಕ್ಕಳನ್ನು ಒಂದಷ್ಟು ಗಮನವಿಟ್ಟು ನೋಡಿ ತಮ್ಮ ಸುತ್ತ ಇರುವ ಡಾಮಿನೆಂಟ್ ವ್ಯಕ್ತಿಯನ್ನ ಆ ಮಗು ನಕಲು ಮಾಡುತ್ತಿರುತ್ತದೆ. ಮಾತಾಡುವ ಶೈಲಿಯಿಂದ ಹಿಡಿದು ಎಲ್ಲವೂ...
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಹಣಕಾಸು ವಿಷಯದಲ್ಲೂ ಅಷ್ಟೇ ಮಕ್ಕಳು ಅಪ್ಪ ಅಮ್ಮನನ್ನ ನಕಲು ಮಾಡುತ್ತವೆ. 5 ವರ್ಷ ತುಂಬುವ ಹೊತ್ತಿಗೆ ಮಕ್ಕಳಲ್ಲಿ ಹಣದ ಕುರಿತು ಒಂದು ವಿಚಿತ್ರ ಸೆಳೆತ ಉಂಟಾಗುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಇದು ಯಾಕಾಗ್ತಾ ಇತ್ತು ಅಂದರೆ ಹಿಂದೆಲ್ಲ ಎಲ್ಲಾ ವ್ಯವಹಾರವೂ ನಗದಿನ ಮೂಲಕ ನಡೆಯುತ್ತಿತ್ತು. ಅರರೆ ಇದೇನಿದು ಒಂದು ಪೇಪರ್ ತುಂಡು ಕೊಟ್ಟರೆ ಅಂಗಡಿಯವನು ಕೇಳಿದ್ದೆಲ್ಲಾ ಕೊಡುತ್ತಾನಲ್ಲ ಎನ್ನುವ ಸಹಜ ಕುತೂಹಲ. ಇಂದು ಭಾರತದಲ್ಲಿ ಇನ್ನೂ ನಗದು ನಡೆಯುತ್ತಿದೆ. ಆದರೆ ಬಹಳಷ್ಟು ಪಾಶ್ಚಾತ್ಯ ದೇಶಗಳಲ್ಲಿ ಎಲ್ಲವೂ ಡಿಜಿಟಲ್. ಹೀಗಾಗಿ ಮಗುವಿನ ಹಣದ ಕಲ್ಪನೆ ಬೇರೆ. ಅದೇನಿದ್ದರೂ ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದಕ್ಕಷ್ಟೇ ಸೀಮಿತ.
ಅಪ್ಪ ಅಮ್ಮನ ನೋಡಿಕೊಂಡು ಬೆಳೆಯುವ ಮಕ್ಕಳು ಅಪ್ಪ ಅಮ್ಮನ ಹಣಕಾಸು ಪರಿಪಾಠವನ್ನ ಕೂಡ ಅಳವಡಿಸಿಕೊಳ್ಳುತ್ತಾರೆ. ಕೆಲವರು ಉಳಿಕೆಗೆ ಮಹತ್ವ ಕೊಟ್ಟರೆ ಇನ್ನು ಕೆಲವರು ದುಡಿದದ್ದೆಲ್ಲ ಖರ್ಚು ಮಾಡುವುದರಲ್ಲಿ ಖುಷಿಯ ಕಾಣುತ್ತಾರೆ. ಮಕ್ಕಳಿಗೂ ಇದು ವರ್ಗಾವಣೆಯಾಗುತ್ತದೆ.
ಅಮೆರಿಕಾದ ಇಲಿನಾಯ್ಸ್ ಯೂನಿವರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಅಲ್ಲಿನ 36 ಪ್ರತಿಶತ ಯುವ ಜನತೆ ಫೈನಾನ್ಸಿಯಲ್ ರಿಸ್ಕ್ ನಲ್ಲಿದ್ದಾರೆ. ಅಂದರೆ ನೂರಕ್ಕೆ 36 ಜನರಿಗೆ ಹಣವನ್ನ ಹೇಗೆ ಗಳಿಸಬೇಕು ಅದನ್ನ ದುಡಿಸಿಕೊಳ್ಳಬೇಕು ಎನ್ನುವ ಮತ್ತು ಹಣದುಬ್ಬರ, ಬಡ್ಡಿ, ಬಡ್ಡಿ ದರ, ಬ್ಯಾಂಕಿಂಗ್ ವ್ಯವಹಾರ ಹೇಗೆ ನಡೆಯುತ್ತದೆ ಎನ್ನುವ ಮೂಲಭೂತ ವಿಷಯ ಕೂಡ ಗೊತ್ತಿಲ್ಲ ಎನ್ನುತ್ತದೆ ಅಧ್ಯಯನ. ಇವರ ಹತ್ತಿರ ಸೇವಿಂಗ್ ಅಕೌಂಟ್, ಸೇವಿಂಗ್ ಅನ್ನುವ ಮಾತು ಕೂಡ ಇಲ್ಲ. ಗಮನಿಸಿ ಈ 36 ಪ್ರತಿಶತ ಯುವ ಜನತೆ 18 ದಾಟಿದವರು. ಸ್ವಂತಂತ್ರವಾಗಿ ಬದುಕಲು ಶುರು ಮಾಡಿದವರು. ಅವರಿಗೆ ಅಚಾನಕ್ಕಾಗಿ ಹೆಚ್ಚಿನ ಹಣ ಬೇಕಾದರೆ ಅದನ್ನ ಹೊಂದಿಸಲು ಸಾಧ್ಯವಾಗದವರು ಎಂದರೆ ಅವರಲ್ಲಿನ ಫೈನಾನ್ಸಿಯಲ್ ಅನಕ್ಷರತೆ, ಹಣಕಾಸು ಅಜ್ಞಾನ ಎಷ್ಟಿರಬಹದು ಎನ್ನುವುದರ ಅಂದಾಜು ನಿಮ್ಮದಾಗುತ್ತದೆ.
ಸರಿ 36 ಪ್ರತಿಶತ ಇಂತವರಿದ್ದಾರೆ ಉಳಿದವರು ಪರವಾಗಿಲ್ಲ ಎಂದು ನೆಮ್ಮದಿಯಾಗಿರುವಂತಿಲ್ಲ. ಏಕೆಂದರೆ ಉಳಿದವರ ಪಾಡು ಕೂಡ ಅಷ್ಟಕ್ಕಷ್ಟೇ. ಒಟ್ಟು ಯುವಜನತೆಯ 22 ಪ್ರತಿಶತ ಮಾತ್ರ ಪರವಾಗಿಲ್ಲ ಎನ್ನುವ ಜ್ಞಾನ ಹೊಂದಿದ್ದಾರೆ. ಉಳಿದ 78 ಪ್ರತಿಶತ ಅಜ್ಞಾದದಲ್ಲಿ ಬಾಳುತ್ತಿದ್ದಾರೆ. ಅದರಲ್ಲೂ 36 ಪ್ರತಿಶತ ಅಪಾಯದ ಅಂಚಿನಲ್ಲಿದ್ದಾರೆ.
ಇದು ಇಲಿನಾಯ್ಸ್ ಅಥವಾ ಅಮೆರಿಕಾದ ಕಥೆ ಎಂದು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ. ಇದು ಜಗತ್ತಿನ ಕಥೆ. ಮನೆ ಮನೆಯ ಕಥೆ. ಪೋಷಕರಾದವರು ಮಕ್ಕಳಿಗೆ ಹಣಕಾಸು ಜ್ಞಾನ ನೀಡಬೇಕು. ಅದಕ್ಕೆ ಮೊದಲು ಅವರು ತಮ್ಮ ಹಣಕಾಸು ಅಜ್ಞಾನವನ್ನ ತಿದ್ದಿಕೊಳ್ಳಬೇಕು. ಇಂದೇನಾಗಿದೆ ಜಗತ್ತಿನ 90 ಪ್ರತಿಶತ ಜನ ದುಡಿಯಬೇಕು ಅದಕ್ಕೆ ಒಂದಷ್ಟು ಹಣ ಕೊಡುತ್ತಾರೆ. ಆ ಹಣವನ್ನ ಮರು ಬಳಸಿ ಬೇಕಾದ್ದನ್ನು ಕೊಳ್ಳುವುದು, ಉಪಯೋಗಿಸುವುದು ಬದುಕುವುದು ಇದನ್ನ ಜೀವನ ಎಂದುಕೊಂಡಿದ್ದಾರೆ. ಹಣಕಾಸು ನಿಯಮಗಳು ಬದುಕಿಗೆ ಅತ್ಯಂತ ಅವಶ್ಯಕ. ನಿಯಮ ತಿಳಿಯದೆ ಆಟವನ್ನ ಗೆಲ್ಲುವುದು ಸಾಧ್ಯವಿಲ್ಲ ಅಲ್ಲವೇ?. ಇರಲಿ...
ಪೋಷಕರು ತಮ್ಮ ಮಕ್ಕಳ ಹಣಕಾಸು ಜ್ಞಾನ ಬೆಳೆಸಲು ಕೆಳಗಿನ ಕೆಲವೊಂದು ಅಂಶಗಳನ್ನ ಅಳವಡಿಸಿಕೊಂಡರೆ ಮುಂದೆ ಅವರ ಬದುಕು ಹಸನಾಗುತ್ತದೆ.
ಕೊನೆ ಮಾತು: ಹಣಕಾಸು ಅನಕ್ಷರತೆ ಎನ್ನವುದು ವಿಶ್ವವ್ಯಾಪಿ. ಇದೊಂದು ದೊಡ್ಡ ಪಿಡುಗು. ಹಣಕಾಸು ಅಕ್ಷರತೆ ಬಂದುಬಿಟ್ಟರೆ ಜನತೆ ತಾವು ಕೆಲಸ ಮಾಡುವ ಸಂಸ್ಥೆ, ತಮ್ಮ ಸ್ಥಳೀಯ ಸರಕಾರ, ಕೇಂದ್ರ ಸರಕಾರ ಹೀಗೆ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ಹಂತಕ್ಕೆ ಬೆಳೆಯುತ್ತಾರೆ. ಯಾವುದೇ ಒಂದು ವಸ್ತು ಅಥವಾ ವಿಷಯದ ಬಗ್ಗೆ ಇರುವ ಅಜ್ಞಾನ, ಭಯವನ್ನ ಸೃಷ್ಟಿಮಾಡುತ್ತದೆ. ಸಂಶಯ ಮತ್ತು ಭಯ ಇವರೆಡೂ ಮನುಕುಲದ ಪರಮ ಶತ್ರುಗಳು. ಇದಕ್ಕೆ ಆರ್ಥಿಕ ಸಾಕ್ಷರತೆಯೊಂದೇ ಮದ್ದು.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement