ನರ ದೌರ್ಬಲ್ಯದ ಸಮಸ್ಯೆ (ಕುಶಲವೇ ಕ್ಷೇಮವೇ)

ನರ ದೌರ್ಬಲ್ಯವು ಸ್ಥಿತಿಯು ಆಯಾಸ, ಸಮನ್ವಯದ ಕೊರತೆ, ನಡುಕ, ಮಾನಸಿಕ ಗೊಂದಲ, ಮನಸ್ಥಿತಿಯ ಬದಲಾವಣೆಗಳು ಅಥವಾ ಪ್ರೇರಣೆಯ ಕೊರತೆಯ ರೂಪದಲ್ಲಿ ಪ್ರಕಟವಾಗಬಹುದು.
File pic
ಸಂಗ್ರಹ ಚಿತ್ರonline desk
Updated on

ನರ ದೌರ್ಬಲ್ಯವನ್ನು ಸಾಮಾನ್ಯವಾಗಿ "ನ್ಯೂರಾಸ್ತೇನಿಯಾ" ಎಂದು ಕರೆಯಲಾಗುತ್ತದೆ. ಇದು ನರಮಂಡಲದ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದ್ದು ದೈಹಿಕ ಮತ್ತು ಮಾನಸಿಕ ಆಯಾಸ, ನರಗಳ ಶಕ್ತಿ ಕಡಿಮೆಯಾಗುವುದು ಮತ್ತು ದೇಹ ಮತ್ತು ಮನಸ್ಸಿನ ಸಾಮಾನ್ಯ ದೌರ್ಬಲ್ಯದ ಭಾವನೆಯಾಗಿ ಪ್ರಕಟವಾಗುತ್ತದೆ.

ನರ ದೌರ್ಬಲ್ಯವು ಸ್ಥಿತಿಯು ಆಯಾಸ, ಸಮನ್ವಯದ ಕೊರತೆ, ನಡುಕ, ಮಾನಸಿಕ ಗೊಂದಲ, ಮನಸ್ಥಿತಿಯ ಬದಲಾವಣೆಗಳು ಅಥವಾ ಪ್ರೇರಣೆಯ ಕೊರತೆಯ ರೂಪದಲ್ಲಿ ಪ್ರಕಟವಾಗಬಹುದು. ನರ ದೌರ್ಬಲ್ಯವಿರುವ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಯಬಹುದು ಮತ್ತು ಆಗಾಗ್ಗೆ ದೈನಂದಿನ ಚಟುವಟಿಕೆಗಳಲ್ಲಿ ಸರಿಯಾಗಿ ತೊಡಗಿಕೊಳ್ಳಲು ಹೆಣಗಾಡಬಹುದು. ಮರಗಟ್ಟುವಿಕೆ, ಜುಮ್ಮೆನಿಸುವಿಕೆಯ ಸಂವೇದನೆ ಅಥವಾ ಅಸ್ಥಿರ ಚಲನೆಗಳಂತಹ ಲಕ್ಷಣಗಳ ಮೂಲಕ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ನರ ದೌರ್ಬಲ್ಯಕ್ಕೆ ಕಾರಣಗಳು

ನರ ದೌರ್ಬಲ್ಯ ಉಂಟಾಗಲು ಹಲವಾರು ಕಾರಣಗಳಿವೆ. ಈ ಸಮಸ್ಯೆಯು ದೈಹಿಕ, ಭಾವನಾತ್ಮಕ ಅಥವಾ ಪೌಷ್ಟಿಕಾಂಶದ ಸಮಸ್ಯೆಗಳ ಪರಿಣಾಮವಾಗಿರಬಹುದು. ನರ ದೌರ್ಬಲ್ಯದ ಸಾಮಾನ್ಯ ಕಾರಣಗಳು ಹೀಗಿವೆ:

  • ಪೌಷ್ಟಿಕಾಂಶದ ಕೊರತೆ: ವಿಟಮಿನ್ ಬಿ 12, ವಿಟಮಿನ್ ಡಿ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅತ್ಯಗತ್ಯ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯು ನರಗಳ ಕಾರ್ಯವನ್ನು ದುರ್ಬಲಗೊಳಿಸಿ ದೌರ್ಬಲ್ಯಕ್ಕೆ ಕಾರಣವಾಗಬಹುದು.

  • ದೀರ್ಘಕಾಲದ ಒತ್ತಡ ಮತ್ತು ಆತಂಕ: ದೀರ್ಘಕಾಲೀನ ಮಾನಸಿಕ ಒತ್ತಡವು ನರಮಂಡಲದ ಮೇಲೆ ಅತಿಯಾದ ಒತ್ತಡವನ್ನುಂಟುಮಾಡುತ್ತದೆ. ಇದು ಆಯಾಸ ಮತ್ತು ನರಗಳ ಕಾರ್ಯವನ್ನು ಕಡಿಮೆ ಮಾಡುತ್ತದೆ.

  • ನಿದ್ರಾಹೀನತೆ: ಸರಿಯಾಗಿ ನಿದ್ರೆ ಮಾಡದಿರುವುದು ಅಥವಾ ನಿದ್ರೆ ಮಾಡಲು ಪದೇ ಪದೇ ತೊಂದರೆ ಉಂಟಾಗುತ್ತಿದ್ದರೆ ಅದು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕಾಲಕ್ರಮೇಣ ನರಮಂಡಲವನ್ನು ದುರ್ಬಲಗೊಳಿಸುತ್ತದೆ.

  • ಆರೋಗ್ಯ ಸಮಸ್ಯೆಗಳು: ಮಧುಮೇಹ, ಹೈಪೋಥೈರಾಯ್ಡಿಸಮ್, ಸರ್ಪಸುತ್ತು ಮುಂತಾದ ಸೋಂಕುಗಳು ಮತ್ತು multiple sclerosis ನಂತಹ ಸ್ವಯಂನಿರೋಧಕ ಕಾಯಿಲೆಗಳು ನೇರವಾಗಿ ನರಗಳಿಗೆ ಹಾನಿ ಮಾಡುತ್ತವೆ.

  • ಜೀವನಶೈಲಿಯ ಅಂಶಗಳು: ಅತಿಯಾದ ಮದ್ಯಪಾನ, ಧೂಮಪಾನ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಕಳಪೆ ಆಹಾರ ಪದ್ಧತಿಗಳು ನರಗಳ ಆಯಾಸಕ್ಕೆ ಕಾರಣವಾಗುತ್ತವೆ.

  • ವೃದ್ಧಾಪ್ಯದ ತೊಂದರೆ: ವಯಸ್ಸಾದವರಲ್ಲಿ ಸ್ವಾಭಾವಿಕವಾಗಿ ನರಗಳ ದಕ್ಷತೆಯ ಕಡಿಮೆಯಾಗಿ ನರ ದೌರ್ಬಲ್ಯ ಕಾಣಿಸಿಕೊಳ್ಳಬಹುದು.

  • ಎಲೆಕ್ಟ್ರಾನಿಕ್ ಗ್ಯಾಜೆಟುಗಳ ಅತಿಯಾದ ಬಳಕೆ: ಮೊಬೈಲ್ ಫೋನಿನಂತಹ ಎಲೆಕ್ಟಾçನಿಕ ಸಾಧನಗಳಲ್ಲಿ ಸದಾ ಕಾಲ ವಿಡಿಯೋ, ರೀಲ್ಸ್ ನೋಡುತ್ತಾ, ಗೇಮ್ಸ್ ಆಡುತ್ತಾ, ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಕಾಲ ತಲ್ಲೀನರಾಗಿರುವುದು, ಸಾಮಾಜಿಕ ಸಂವಹನದ ಕೊರತೆ ಮತ್ತು ಡಿಜಿಟಲ್ ಆಯಾಸವು ವಿಶೇಷವಾಗಿ ಯುವಜನರಲ್ಲಿ ನರಮಂಡಲದ ಮೇಲೆ ಒತ್ತಡವನ್ನುಂಟುಮಾಡಬಹುದು.

File pic
ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ (LSD) ಕಾಯಿಲೆಗಳು (ಕುಶಲವೇ ಕ್ಷೇಮವೇ)

ನರಗಳ ದೌರ್ಬಲ್ಯವು ವಿದ್ಯಾರ್ಥಿಗಳು ಮತ್ತು ವೃತ್ತಿಪರರು (ಮಾನಸಿಕ ಒತ್ತಡ, ಪರೀಕ್ಷೆಗಳು, ಗಡುವುಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಆತಿಯಾದ ಬಳಕೆಯ ಕಾರಣದಿಂದಾಗಿ), ವಯಸ್ಸಾದ ಜನರು, ಪೌಷ್ಟಿಕಾಂಶದ ಕೊರತೆ ಇರುವವರು, ದೀರ್ಘಕಾಲ ಕಾಯಿಲೆಗಳಿಂದ ಬಳಲುತ್ತಿರುವ ಜನರು: (ಮಧುಮೇಹ ಅಥವಾ ನರವೈಜ್ಞಾನಿಕ ತೊಂದರೆಗಳಿರುವವರು) ಮತ್ತು ಅಧಿಕ ಒತ್ತಡದ ಜೀವನಶೈಲಿ ಇರುವ ಜನರನ್ನು (ನಿರಂತರ ಮಾನಸಿಕ ಒತ್ತಡ ನರಗಳ ಮೇಲೆ ಪ್ರಭಾವ ಬೀರುವುದರಿಂದ) ಸಾಕಷ್ಟು ಬಾಧಿಸುತ್ತದೆ.

ನರ ದೌರ್ಬಲ್ಯದ ಲಕ್ಷಣಗಳು

ನರ ದೌರ್ಬಲ್ಯದ ಲಕ್ಷಣಗಳು ಹೀಗಿವೆ:

  • ನಿರಂತರ ಆಯಾಸ

  • ತಲೆತಿರುಗುವಿಕೆ

  • ಕೈ ಮತ್ತು ಕಾಲುಗಳ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ

  • ಸ್ನಾಯು ದೌರ್ಬಲ್ಯ ಅಥವಾ ನಡುಕ

  • ಮನಸ್ಥಿತಿಯ ಬದಲಾವಣೆಗಳು, ಆತಂಕ ಅಥವಾ ಖಿನ್ನತೆ

  • ನೆನಪಿನ ತೊಂದರೆಗಳು ಮತ್ತು ಏಕಾಗ್ರತೆಯ ಕೊರತೆ

  • ನಿದ್ರಾ ಭಂಗ ಮತ್ತು

  • ಹಸಿವಾಗದೇ ಇರುವುದು

ನರ ದೌರ್ಬಲ್ಯ ಸಮಸ್ಯೆಗೆ ಚಿಕಿತ್ಸೆ

ನರ ದೌರ್ಬಲ್ಯದ ಚಿಕಿತ್ಸೆಯು ಸಮಸ್ಯೆಯ ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಸರಿಯಾದ ವೈದ್ಯಕೀಯ ರೋಗನಿರ್ಣಯ ಚಿಕಿತ್ಸೆ ಅತ್ಯಗತ್ಯ. ಈ ಸಮಸ್ಯೆಯ ಸಾಮಾನ್ಯ ಚಿಕಿತ್ಸಾ ವಿಧಾನಗಳಲ್ಲಿ ಕೆಲವು ಹೀಗಿವೆ:

  1. ಆಹಾರ ಮತ್ತು ಪೋಷಣೆ: ಬಿ-ಕಾಂಪ್ಲೆಕ್ಸ್ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ನರಗಳು ಪುನರುಜ್ಜೀವನಗೊಳ್ಳಲು ಸಹಾಯ ಮಾಡುತ್ತದೆ.

  2. ಔಷಧಿಗಳು: ನರ ದೌರ್ಬಲ್ಯವು ವೈದ್ಯಕೀಯ ಸಮಸ್ಯೆಗಳು ಉಂಟಾಗಿದ್ದರೆ ಸೂಕ್ತವಾದ ಚಿಕಿತ್ಸೆ ಮತ್ತು ಪೂರಕ ಔಷಧಿಗಳನ್ನು ವೈದ್ಯರು ಸೂಚಿಸುತ್ತಾರೆ.

  3. ಮಾನಸಿಕ ಚಿಕಿತ್ಸೆ: ಮಾನಸಿಕ ಸಮಾಲೋಚನೆ ಅಥವಾ ಒತ್ತಡ ನಿರ್ವಹಣಾ ಚಿಕಿತ್ಸೆಯು ನರಗಳ ಆಯಾಸಕ್ಕೆ ಕಾರಣವಾಗುವ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

  4. ದೈಹಿಕ ಚಟುವಟಿಕೆಗಳು: ನಿಯಮಿತ ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮಗಳು ನರಗಳ ಆರೋಗ್ಯವನ್ನು ಹೆಚ್ಚಿಸುತ್ತವೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತವೆ.

  5. ಸಮರ್ಪಕ ನಿದ್ರೆ: ನರಗಳ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಆಳವಾದ ಮತ್ತು ಅಡೆತಡೆಯಿಲ್ಲದ ನಿರಂತರ ನಿದ್ರೆ ಅತ್ಯಗತ್ಯ.

  6. ಅತಿಯಾಗಿ ಕಾಫೀ/ಟೀ ಸೇವನೆ, ಮದ್ಯಪಾನ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದರಿಂದ ನರಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

File pic
ಚರ್ಮದ ಮೇಲಿನ ಕುರುಗಳು (ಕುಶಲವೇ ಕ್ಷೇಮವೇ)

ನರ ದೌರ್ಬಲ್ಯ ತಡೆಗಟ್ಟುವ ಬಗೆ

ನರ ದೌರ್ಬಲ್ಯವನ್ನು ತಡೆಗಟ್ಟಲು ಎಲ್ಲರೂ ಪ್ರತಿದಿನ ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸಬೇಕು. ತಾಜಾ ಹಸಿರುಸೊಪ್ಪು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು. ಪ್ರತಿದಿನ 7–8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡಬೇಕು. ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿರ್ವಹಿಸಲು ಯೋಗ, ಧ್ಯಾನ ಅಥವಾ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ. ಮೊಬೈಲ್ ಫೋನಿನಂತಹ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಅತಿಯಾಗಿ ಮಾಡಬಾರದು. ಉತ್ತಮ ಹವ್ಯಾಸಗಳು, ಹೊರಾಂಗಣ ಚಟುವಟಿಕೆಗಳು ಮತ್ತು ಸಾಮಾಜಿಕ ಸಂವಹನಗಳಲ್ಲಿ ತೊಡಗಿಸಿಕೊಳ್ಳಬೇಕು. ಅಶ್ವಗಂಧ ಬ್ರಾಹ್ಮಿ ಮತ್ತು ಜ್ಯೋತಿಷ್ಮತಿಯಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದಿಕ್ ಔಷಧಿಗಳ ಸೇವನೆ ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com