
“ಅವರಿಗೆ ಒಮ್ಮೆ ಯಶಸ್ಸು ಸಿಕ್ಕರೆ ಸಾಕು. ನಾವು ಪ್ರತಿಬಾರಿ ಯಶಸ್ಸು ಪಡೆಯುತ್ತಲೇ ಇರಬೇಕು” ಇಸ್ಲಾಂ ಉಗ್ರವಾದದ ಬಗ್ಗೆ ಚಲನಚಿತ್ರವೊಂದರಲ್ಲಿ ಪಾತ್ರಧಾರಿಯೊಂದು ಹೇಳಿದ ಸಂಭಾಷಣೆ ನೆನಪಾಗುತ್ತಿದೆ. ಪಹಲ್ಗಾಮ್ ನಲ್ಲಿ ಇಸ್ಲಾಮಿಕ್ ಉಗ್ರರಿಂದ ಆಗಿರುವ ಹಿಂದು ಕಗ್ಗೊಲೆ ಹಾಗೂ ಅದಕ್ಕೆ ಸಹಜವಾಗಿಯೇ ನಾವೆಲ್ಲ ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿರುವ ರೀತಿ ಇದನ್ನು ನೆನಪಿಗೆ ತರುತ್ತಿದೆ.
ಭಾರತ ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ನಿಗ್ರಹದಲ್ಲಿ ವಿಫಲವಾಗಿದೆ ಎಂದೇನೂ ಅಲ್ಲ. ಪಹಲಗಾಮಿನಂಥದೇ ನೂರು ಷಡ್ಯಂತ್ರಗಳನ್ನು ತಪ್ಪಿಸಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಎರಡು ದಶಕದ ಹಿಂದೆ ಹೋದರೆ ಅಲ್ಲಿ ಕೊಲೆಗಳೆಂಬುದು ಯಾವಾಗ ಬೇಕಾದರೂ ಆಗಬಹುದಾದ ವಿದ್ಯಮಾನವಾಗಿತ್ತು. ವಿಶೇಷ ವಿಧಿ ಎಂದು ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಕೊಬ್ಬಿಸಿದ್ದ 370ನ್ನು ತೆರವುಗೊಳಿಸಿದ್ದು, ಪ್ರತಿ ಶುಕ್ರವಾರದ ಮುಖ್ಯಾಂಶ ಎಂಬಂತಿದ್ದ ಕಾಶ್ಮೀರಿ ಯುವಕರ ಉನ್ಮತ್ತ ಕಲ್ಲುತೂರಾಟಗಳ ದೃಶ್ಯಗಳನ್ನು ಇಲ್ಲದಂತೆ ಮಾಡಿರುವುದು, ‘ಅನಾಮಿಕ ಬಂದೂಕುಧಾರಿ’ಗಳು ಪಾಕಿಸ್ತಾನದಲ್ಲಿ ಹಲವರನ್ನು ಮುಗಿಸುವ ಮೂಲಕ ಸಮಸ್ಯೆಯ ಮೂಲವನ್ನು ಹಲವು ಹಂತಗಳಲ್ಲಿ ಸ್ವಚ್ಛಗೊಳಸಿದ್ದು…ಹೀಗೆಲ್ಲ ಅಸಂಖ್ಯ ಕೆಲಸಗಳು ಭಾರತದ ಕಡೆಯಿಂದ ಆಗಿವೆ. ಆದರೆ…ಇಸ್ಲಾಂ ಉಗ್ರವಾದಕ್ಕೆ ಒಂದು ಯಶಸ್ಸು ಸಾಕು, ಇವೆಲ್ಲವನ್ನೂ ಮುಸುಕಾಗಿಸುವುದಕ್ಕೆ.
ಆಕ್ರೋಶ ಸರಿ, ಹತಾಶೆಗೆ ಅವಕಾಶವಿಲ್ಲ
ಈಗ ಅಮಿತ್ ಶಾರಿಂದ ಹಿಡಿದು ಮೋದಿವರೆಗೆ ಎಲ್ಲರನ್ನೂ ಕಟಕಟೆಯಲ್ಲಿರಿಸಿ, ಕಾಶ್ಮೀರದಲ್ಲಿ ಏಕಿನ್ನೂ ಶಾಂತಿ ಸಾಧ್ಯವಾಗಿಲ್ಲ ಎಂದು ಆಕ್ರೋಶಿತವಾಗಿ ಪ್ರಶ್ನಿಸುತ್ತೇವೆ. ಹಿಂದು ಜನಮಾನಸದ ಈ ಹತಾಶೆ ಅರ್ಥವಾಗುವಂಥದ್ದೇ. ಏಕೆಂದರೆ ಹಿಂದು ಸಮಾಜ ಇವರನ್ನು ಆ ನಿರೀಕ್ಷೆಯಿರಿಸಿಕೊಂಡೇ ಆಯ್ಕೆ ಹಾಗೂ ಪ್ರಶಂಸೆಗಳ ಸ್ಥಾನದಲ್ಲಿರಿಸಿದೆ. ಆದರೆ, ಹತಾಶೆ-ದಣಿವು-ಭೀತಿಗಳಿಗೆ ಅಷ್ಟು ಸುಲಭಕ್ಕೆ ಈಡಾಗುವ ಆಯ್ಕೆಯೇ ಹಿಂದು ಸಮಾಜಕ್ಕಿಲ್ಲ ಎಂಬುದು ಇಸ್ಲಾಮಿಕ್ ಆಕ್ರಮಣ ಚರಿತ್ರೆ ಮತ್ತದಕ್ಕೆ ನಮ್ಮ ಪೂರ್ವಿಕರು ರೂಢಿಸಿಕೊಂಡುಬಂದ ಪ್ರತಿರೋಧವನ್ನು ಗಮನಿಸಿದರೆ ತಿಳಿಯುತ್ತದೆ.
ಇಸ್ಲಾಮಿಕ್ ಆಕ್ರಮಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಹಿಮ್ಮೆಟ್ಟಿಸುವಲ್ಲಿ ಹಿಂದಿನ ರಾಜ ವ್ಯವಸ್ಥೆಗಳೇ ಮುಗ್ಗರಿಸಿವೆ. ವರ್ತಮಾನದ ರಾಜಕೀಯ ವ್ಯವಸ್ಥೆಯ ಗೋಜಲುಗಳಂತೂ ಇನ್ನೂ ಜಟಿಲ. 370ನೇ ವಿಧಿ ತೆಗೆದ ಬೆನ್ನಲ್ಲೇ ಹಲವು ನಿಯಂತ್ರಣ ಕ್ರಮಗಳನ್ನು ಕೇಂದ್ರ ಮಾಡುತ್ತ ಬಂತು. ಎಲ್ಲದರಲ್ಲೂ ಯಶ ಸಿಕ್ಕಿತು ಎಂದೇನಲ್ಲ. ಆ ನಡುವೆ ಆಗಿದ್ದ ದಾಳಿಗಳಲ್ಲಿ ಪ್ರಾಣತೆತ್ತವರು ರಕ್ಷಣಾ ಸಿಬ್ಬಂದಿಯಾಗಿದ್ದರು. ಅಂದರೆ, ಇಸ್ಲಾಮಿಕ್ ಉಗ್ರವಾದವು ಜಮ್ಮು-ಕಾಶ್ಮೀರದಲ್ಲಿ ತನ್ನ ನಿರಂತರತೆ ಕಾಪಾಡಿಕೊಳ್ಳುವುದಕ್ಕೆ ಎಷ್ಟೆಲ್ಲ ಪ್ರಯತ್ನಿಸಿದರೂ ಅದು ನಾಗರಿಕರವರೆಗೆ ನುಗ್ಗಿ ಬರುವುದಕ್ಕೆ ಆಗದೇ ಇರುವಷ್ಟರಮಟ್ಟಿಗೆ ಇತ್ತಲಿನ ವ್ಯವಸ್ಥೆ ಯಶಸ್ಸು ಸಾಧಿಸಿತ್ತು. ಡೆಮಾಕ್ರಸಿಯ ಡಿ ಗೊತ್ತಿಲ್ಲದ ಹಾಗೂ ರೇಪ್ ಮತ್ತು ಮರ್ಡರ್ ಗಳ ಎಲ್ಲ ಸ್ಪೆಲ್ಲಿಂಗ್ ಅರಿವಿರುವ ವಿಧ್ವಂಸಕ ವೈರಿಯೊಂದಿಗೆ ವ್ಯವಸ್ಥೆ ಹೋರಾಡುತ್ತಿದ್ದರೆ, ನಮ್ಮ ನ್ಯಾಯ ವ್ಯವಸ್ಥೆಗೆ ಅಲ್ಲಿ ಮೂಗು ತೂರಿಸದೇ ಸಮಾಧಾನವಾಗುವುದಾದರೂ ಹೇಗೆ?
ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಯಾವಾಗ ಕೊಡುತ್ತೀರಿ? ಅಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ಇಂತಿಷ್ಟು ತಿಂಗಳುಗಳ ಒಳಗೆ ನೀವು ವ್ಯವಸ್ಥೆ ಮಾಡಲೇಬೇಕು. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಬೇಕಲ್ಲವೇ? ಹೀಗಿತ್ತು ನಮ್ಮ ಕೋರ್ಟುಗಳ ಅತಿ ಅವಸರದ ಕಾಳಜಿ! ಅದೇ ಹಿಂದುಗಳ ಗುಂಪು, 90ರ ದಶಕದಲ್ಲಿ ನಮ್ಮ ವಿರುದ್ಧ ನಡೆಸಲಾದ ನರಮೇಧದ ವಿಚಾರಣೆಗೆ ಆದೇಶಿಸಿ ಅಂತ ಇದೇ ನ್ಯಾಯ ವ್ಯವಸ್ಥೆಯ ಬಾಗಿಲು ತಟ್ಟಿದಾಗ, “ಯಾವತ್ತೋ ಆಗಿಹೋದ ಘಟನೆಯನ್ನು ಈಗ ಪರಿಶೀಲಿಸುವುದಕ್ಕೆ ಸಮಯವಿಲ್ಲ. ಬಹಳ ಕಾಲ ಸರಿದುಹೋಗಿದೆ” ಎಂಬ ಉತ್ತರ ಬಂತು!
ಅದಿರಲಿ…ಇವೆಲ್ಲದರ ಅರ್ಥ ಯಾರೋ ಒಬ್ಬರನ್ನು ಹಿಡಿದು ದೋಷ ಕೂರಿಸುವುದು ಅಂತಲ್ಲ. ಆದರೆ, ಈ ಲೇಖನ ಓದುತ್ತಿರಬಹುದಾದ ಹಿಂದು ಮನಸ್ಸಿಗೆ, ನಮ್ಮೆದುರು ತೆರೆದುಕೊಳ್ಳುತ್ತಿರುವ ಯುದ್ಧದಲ್ಲಿ ಉಳಿದುಕೊಳ್ಳಬೇಕಾದರೆ ಶೀಘ್ರ ಹತಾಶೆಗಳಿಗೆ ಅವಕಾಶವೇ ಇಲ್ಲ ಎಂಬ ಸತ್ಯವನ್ನು ತಿಳಿಸುವುದು. ಈ ಸತ್ಯ ಹೇಳುತ್ತಿರುವುದು ನಮ್ಮ ಇತಿಹಾಸ. ಅದರ ಮುಖ್ಯಾಂಶಗಳನ್ನೊಮ್ಮೆ ನೋಡಿ ಬರೋಣ.
ಇಸ್ಲಾಂ ಆಕ್ರಮಣಗಳು - ಇತಿಹಾಸ ಸಾರುತ್ತಿರುವುದೇನು?
632ರಲ್ಲಿ ಪ್ರವಾದಿ ನಿಧನ ಹೊಂದುವ ವೇಳೆಗೆಲ್ಲ ಖಡ್ಗದ ನೆರಳಲ್ಲಿ ಪೂರ್ತಿ ಅರೇಬಿಯ ಇಸ್ಲಾಂ ಅಡಿಗೆ ಬಂದಿತ್ತು. 651ನೇ ಇಸ್ವಿ ಎನ್ನುವಷ್ಟರ ಹೊತ್ತಿಗೆ ಜೊರಾಷ್ಟ್ರಿಯನ್ನರ ನೆಲವಾಗಿದ್ದ ಪರ್ಶಿಯಾ, ಅರ್ಥಾತ್ ಇವತ್ತಿನ ಇರಾನ್ ಸಂಪೂರ್ಣ ಕೈವಶವಾಗಿತ್ತು. ಅಲ್ಲಿದ್ದ ನಾಗರಿಕ ಸಂಸ್ಕೃತಿ ಏನಾಗಿಹೋಯಿತೆಂಬುದಕ್ಕೆ ಇವತ್ತಿನ ಇರಾನನ್ನು ನೋಡಿದರೆ ಸಾಕು. 718ರ ವೇಳೆಗೆ ಸ್ಪೇನ್ ಮತ್ತು ಪೋರ್ಚುಗಲ್ ನ ಬಹುತೇಕ ಪ್ರಾಂತ್ಯಗಳು ಇಸ್ಲಾಂ ಆಡಳಿತಕ್ಕೆ ಬಂದಿದ್ದವು.
711ರ ಹೊತ್ತಿಗೆ ಮೊಹಮ್ಮದ್ ಇಬ್ನ ಅಲ್ ಕಾಸಿಂ ಸಿಂಧ್ ಪ್ರಾಂತ್ಯದ ರಾಜಾ ದಾಹಿರ್ ನನ್ನು ಸೋಲಿಸುವುದರೊಂದಿಗೆ ಭಾರತಕ್ಕೆ ಇಸ್ಲಾಂ ಪ್ರಭುತ್ವದ ಆಗಮನವಾಯಿತು. ಹೀಗೆ ಕಾಸೀಮನಿಗೆ ಯಶ ಸಿಗುವುದರಲ್ಲಿ ದಾಹಿರ್ ಸಾಮ್ರಾಜ್ಯದ ಒಳಗಿನವರ ಪಾಲಿತ್ತು ಎಂಬ ವ್ಯಾಖ್ಯಾನಗಳು ಹಲವಿವೆ. ವೈದಿಕ ಸಂಸ್ಕೃತಿಗೆ ದಾಹಿರ್ ಪೋಷಣೆ ಇತ್ತಾದ್ದರಿಂದ ಬೌದ್ಧರು ಈ ಬಗ್ಗೆ ಅಸೂಯೆಯಿಂದಿದ್ದರು ಹಾಗೂ ವೈರಿಗಳನ್ನು ಸ್ವಾಗತಿಸಿದರು ಎಂಬುದು ಕೆಲವು ಇತಿಹಾಸಕಾರರ ವಿಶ್ಲೇಷಣೆ. ಇದೊಂದು ಮನಸ್ಥಿತಿ ಮೌರ್ಯರ ಕಾಲದಿಂದಲೂ ಇದ್ದಿತ್ತು. ಮೌರ್ಯರ ವೈಭವ ಕ್ಷೀಣಿಸುವ ಹೊತ್ತಿನಲ್ಲಿ ಗ್ರೀಕ್ ಮೂಲದ ಹಲವು ಆಕ್ರಮಕರು ಭಾರತ ಪ್ರವೇಶಿಸಿದ್ದು, ಕಾನಿಷ್ಕನಂಥ ವಿದೇಶಿ ಆಕ್ರಮಣಕಾರನಿಗೆ ಆತ ತಮ್ಮ ಪರ ಎಂಬುದಕ್ಕೆ ಸ್ವಾಗತ ಕೋರಿದ್ದವರ ಚರಿತ್ರೆ ಓದಿಕೊಂಡಾಗ ಇವೆಲ್ಲದರ ತಥ್ಯ ಮನವರಿಕೆಯಾಗುತ್ತದೆ. ಮುಂದೆ ಭಾರತದಲ್ಲಿ ಇಸ್ಲಾಂ ಆಕ್ರಮಣ ಮುಂದುವರಿದಾಗ ಬೌದ್ಧ ಭಿಕ್ಷುಗಳೇ ರುಂಡ ಚೆಂಡಾಡಿಸಿಕೊಂಡರು ಎಂಬುದೆಲ್ಲ ನಂತರದ ವಾಸ್ತವ. ಅದು ಬೇರೆಯದೇ ಕತೆ.
ಅದಿರಲಿ. ಹೀಗೆ ಸಿಂಧ್ ಅನ್ನು ವಶಪಡಿಸಿಕೊಂಡ ನಂತರ ಭಾರತದ ಹೃದಯ ಭಾಗದವರೆಗೆ ತಲುಪುವುದಕ್ಕೆ ಇಸ್ಲಾಂ ಆಕ್ರಮಣಕಾರರಿಗೆ ಶತಮಾನಗಳೇ ಹಿಡಿದವು. ಇದಕ್ಕೆ ಕಾರಣವಾಗಿದ್ದು ಭಾರತೀಯ ರಾಜರ ಶೌರ್ಯ. 1192ರಲ್ಲಿ ಪೃಥ್ವಿರಾಜ ಚೌಹಾಣ ಸೋಲು ಮುಸ್ಲಿಮರಿಗೆ ದೆಹಲಿ ಗದ್ದುಗೆಯನ್ನು ಒದಗಿಸುವುದಕ್ಕೆ ಕಾರಣವಾಯಿತು. ಕೇವಲ ವರ್ಷದ ಹಿಂದೆ ಅದೇ ಮುಹಮ್ಮದ್ ಘೋರಿಯನ್ನು ಪೃಥ್ವಿರಾಜ ಸೋಲಿಸಿ ಹಿಂದಟ್ಟಿದ್ದು ಗಮನಾರ್ಹ. ಅಂದರೆ, 711 ಮತ್ತು 1,192 ರ ನಡುವಿನ ನಾಲ್ಕು ಶತಮಾನಗಳಲ್ಲಿ ಭಾರತದ ಮೇಲೆ ‘ರೈಡ್’ಗಳನ್ನಷ್ಟೇ ಮಾಡಲು ಶಕ್ತವಾಗಿತ್ತು ಇಸ್ಲಾಂ ಆಕ್ರಮಣ.
738ರಲ್ಲಿ ರಾಜಸ್ಥಾನಕ್ಕೆ ನುಗ್ಗಲು ಬಂದಿದ್ದ ಅರಬ್ಬರ ಪಡೆಯನ್ನು ಹಿಂದು ರಾಜರ ಒಗ್ಗಟ್ಟು ಬಹಳ ಸಶಕ್ತವಾಗಿ ಹೊಡೆದು ಹಿಮ್ಮೆಟಿಸಿತ್ತು. ಗುರ್ಜರ-ಪ್ರತಿಹಾರ ವಂಶದ ಒಂದನೇ ನಾಗಭಟ ಹಾಗೂ ಮೇವಾರದ ಬಪ್ಪಾ ರಾವಲರ ಸಮ್ಮಿಶ್ರ ಪಡೆಯ ಅಪ್ರತಿಮ ಶೌರ್ಯದ ಅಧ್ಯಾಯವದು. ಅದರ ಹೊಡೆತ ಎಷ್ಟಿತ್ತೆಂದರೆ ಮುಸ್ಲಿಮರು ಶತಮಾನಗಳ ಕಾಲ ಮತ್ತೆ ಅತ್ತ ತಲೆಹಾಕಲಿಲ್ಲ.
8-10ನೇ ಶತಮಾನದ ಅವಧಿಯಲ್ಲಿ ದಕ್ಷಿಣವನ್ನು ಆಳುತ್ತಿದ್ದ ರಾಷ್ಟ್ರಕೂಟರು, ಕನೌಜ್ ಕೇಂದ್ರೀಕರಿಸಿಕೊಂಡು ಆಳುತ್ತಿದ್ದ ಗುರ್ಜರ-ಪ್ರತಿಹಾರರು, ಬಂಗಾಳವನ್ನು ಆಳುತ್ತಿದ್ದ ಬೌದ್ಧಮತೀಯ ಪಾಲರು ಇವರೆಲ್ಲರಿಗೂ ಪರಸ್ಪರ ಅಧಿಕಾರದ ಸಂಘರ್ಷಗಳಿದ್ದವು. ಆದರೆ ವಿದೇಶಿ ಆಕ್ರಮಣವು ಭಾರತಕ್ಕೆ ಒಳ್ಳೆಯದಲ್ಲ ಎಂಬುದರ ಬಗ್ಗೆ ಎಲ್ಲರಿಗೂ ಸಮ್ಮತಿಯಿತ್ತು. ಹೀಗಾಗಿ ಇವರೆಲ್ಲ ಪ್ರತ್ಯೇಕವಾಗಿಯೇ ಇಸ್ಲಾಂ ಆಕ್ರಮಣವು ಭಾರತದ ಇತರೆಡೆಗೆ ಬರದಂತೆ ಎಚ್ಚರ ವಹಿಸಿದರು. ತನ್ನ ಪ್ರತಿಸ್ಪರ್ಧಿ ಇಸ್ಲಾಂ ಆಕ್ರಮಣ ಎದುರಿಸುವಲ್ಲಿ ವ್ಯಸ್ತವಾಗಿದ್ದಾಗ ತಾನು ಅದರ ಮೇಲೆ ಎರಗೋಣ ಎಂಬಂಥ ದುಷ್ಟ ಯೋಚನೆಗಳಿಂದ ಅವರು ದೂರವಿದ್ದರು. ಮೊಹಮ್ಮದ್ ಘಜ್ನಿ ಪಡೆಯಿಂದ ಗುಜರಾತಿನ ಸೋಮನಾಥದ ಮೇಲೆ ಪದೇ ಪದೆ ಆಕ್ರಮಣ ನಡೆದರೂ ಪ್ರಾರಂಭದಲ್ಲಿ ಪಶ್ಚಿಮದ ಚಾಳುಕ್ಯರು ನಂತರದಲ್ಲಿ ಸೋಲಂಕಿಗಳು ವ್ಯವಸ್ಥೆಯ ಮರುಸ್ಥಾಪನೆ ಮಾಡಿಕೊಂಡೇ ಇದ್ದರು.
ಇದು ದೀರ್ಘ ಸಂಘರ್ಷವೆಂಬ ಅರಿವಿರಲಿ
ಈಗ ಕಾಶ್ಮೀರದ ಮೇಲಾಗುತ್ತಿರುವುದೂ ‘ರೈಡ್’ಗಳು. ಆಕ್ರಮಣಕಾರಿಗಳಿಗೆ ಸಹಕರಿಸುವ ಸ್ಥಳೀಯ ವ್ಯವಸ್ಥೆ ಬಹುಶಃ ಅವತ್ತಿನಿಗಿಂತ ಇವತ್ತಿಗೆ ತೀವ್ರವಾಗಿದೆ. ಹಾಗಂತ ಅವರಿಗೆ ಕಾಶ್ಮೀರಕ್ಕೆ ಭಾರತೀಯರ ಹಣ ಹರಿದು ಬರುವುದೂ ಬೇಕಿದೆ. ಏಕೆಂದರೆ ಆರ್ಟಿಕಲ್ 370 ಇದ್ದಾಗ ಕೇಂದ್ರದಿಂದ ಸುಮ್ಮನೇ ಹಣ ಬಂದು ಬೀಳುತ್ತಿತ್ತು. ವಿಶೇಷ ಸ್ಥಾನಮಾನ ಕಳಚಿರುವ ಈ ಸಂದರ್ಭದಲ್ಲಿ ಸ್ವಲ್ಪವಾದರೂ ದುಡಿಯಬೇಕಿದೆ. ಹೀಗಾಗಿ ಸರಾಸರಿ ಕಾಶ್ಮೀರಿ ಮುಸ್ಲಿಮರಿಗೆ ಹಿಂದುಗಳ ಪ್ರಾಣದ ಬಗ್ಗೆ ಎಷ್ಟು ಕಾಳಜಿ ಇದೆಯೋ ಬಿಟ್ಟಿದೆಯೋ ಆದರೆ ಪ್ರವಾಸಿಗರಾಗಿಯಂತೂ ಬೇಕು. ಆದರೆ ಇಸ್ಲಾಂ ಸಾಮ್ರಾಜ್ಯಕ್ಕಿರುವ ಗುರಿ ಎಂದರೆ ಯಾವ ಹಿಂದುಗಳೂ ಜಮ್ಮು-ಕಾಶ್ಮೀರಕ್ಕೆ ಹೋಗಿ ತಾನು ವಾಸ ಮಾಡುವ ಇಲ್ಲವೇ ತನ್ನದೇ ಉದ್ಯಮ ಹೊಂದುವ ಕನಸು ಕಾಣಬಾರದು. ಉಗ್ರರು ಈ ಸಂದೇಶವನ್ನು ಬಹಳ ಸ್ಪಷ್ಟವಾಗಿಯೇ ಪಹಲ್ಗಾಮಿನ ದಾಳಿಯಲ್ಲಿ ಬಿತ್ತರಿಸಿದ್ದಾರೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಿಂದೆಲ್ಲ ಹೋಗಿರುವ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡೇ ಈ ನರಮೇಧ ನಡೆಸಿ, ಆ ಮೂಲಕ ಭಯದ ಕಂಪನಗಳು ದೇಶದ ಎಲ್ಲೆಡೆ ಮುಟ್ಟುವಂತೆ ಉಗ್ರರು ಯೋಜಿಸಿದ್ದಾರೆ.
ಉಗ್ರರಿಗೆ ಪ್ರತ್ಯುತ್ತರ ಕೊಡುವುದರಲ್ಲಿ ತಾನು ಹಿಂಜರಿಯುವುದಿಲ್ಲ ಎಂಬುದನ್ನು ಈ ಸರ್ಕಾರ ಕಳೆದೊಂದು ದಶಕದಲ್ಲಿ ಹಲವು ಉದಾಹರಣೆಗಳ ಮೂಲಕ ನಿರೂಪಿಸಿದೆ. ಈಗಲೂ ಆ ಭರವಸೆ ಇಟ್ಟುಕೊಳ್ಳಬಹುದು. ಆದರೆ, ಹಿಂದುಗಳು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕಾದ ಸಂಗತಿ ಏನೆಂದರೆ ಕೊನೆಗೂ ಇದು ಶತಮಾನಗಳವರೆಗೆ ವಿಸ್ತರಿಸಿಕೊಳ್ಳಲಿರುವ ಸಂಗ್ರಾಮ. ಒಂದು ಆಯಾಮದಲ್ಲಿ ಇದು ಜಗತ್ತಿನಲ್ಲಿ ಜಾರಿಯಲ್ಲಿರುವ ದೈವಾಸುರ ಸಂಗ್ರಾಮವೂ ಹೌದು. ಅವರೆಷ್ಟೇ ಪ್ರಖರರಾಗಿದ್ದರೂ ಯಾವುದೋ ಒಬ್ಬ ವ್ಯಕ್ತಿ ಇಲ್ಲವೇ ಒಂದು ಸರ್ಕಾರ ಈ ಇಸ್ಲಾಮಿಕ್ ಉಗ್ರವಾದಕ್ಕೆ ಪರಿಹಾರ ಕಂಡುಕೊಂಡುಬಿಡುತ್ತದೆ ಎಂಬ ರಮ್ಯಕಲ್ಪನೆ ಮಾತ್ರ ಬೇಡ. ಇಸ್ಲಾಮಿಕ್ ಆಕ್ರಮಣ ಮತ್ತದರ ಚರಿತ್ರೆಯ ಸ್ಮೃತಿಯನ್ನು ಸಾಮಾನ್ಯರಮಟ್ಟದಲ್ಲಿ ಯಾವುದೇ ಮುಲಾಜಿಲ್ಲದೇ ಸಂವಾದದ ಮಟ್ಟದಲ್ಲಿ ಜಾರಿಯಲ್ಲಿಟ್ಟುಕೊಂಡಿರುವುದು ಹಾಗೂ ಎಲ್ಲ ಹೊಸ ಪೀಳಿಗೆಗಳಿಗೂ ಈ ಬಗ್ಗೆ ಅರಿವಿರಬೇಕಿರುವುದು ಅವಶ್ಯ. ಅದುವೇ ಶತಮಾನಗಳಿಗೆ ಚಾಚಿಕೊಳ್ಳುವ ಇಂಥ ಸಮರಗಳನ್ನು ಎದುರಿಸಲಿಕ್ಕಿರುವ ಏಕೈಕ ಮಾರ್ಗ.
- ಚೈತನ್ಯ ಹೆಗಡೆ
cchegde@gmail.com
Advertisement