
ಈ ಅಂಕಣ ಓದುತ್ತಿರುವ ಹೊತ್ತಿಗೆ ಭಾರತವು ಪಾಕಿಸ್ತಾನದ ಹಲವು ಭಾಗಗಳಲ್ಲಿ ನಡೆಸಿರುವ ಸೇನಾ ಕಾರ್ಯಾಚರಣೆಯ ಹಲವು ವಿವರಗಳನ್ನು ನೀವು ಓದಿ-ಕೇಳಿ ಆಗಿರುತ್ತದೆ. ಯಾವುದೇ ಭಾರತೀಯನಿಗೆ ಹೆಮ್ಮೆ ತರುವ ಸೇನಾ ಕಾರ್ಯಾಚರಣೆ ಇದು.
ನಾಗರಿಕರಾಗಿ ನಮ್ಮ ಕರ್ತವ್ಯ ಇರುವುದು ಇನ್ನು ಮುಂದೆ. ಇವತ್ತಿನ ಆಧುನಿಕ ಯುದ್ಧವು ಕೇವಲ ಗಡಿಯಲ್ಲಿನ ಮಿಂಚು-ಸಿಡಿಲಬ್ಬರಗಳಲ್ಲ. ಇನ್ಫಾರ್ಮೇಶನ್, ಮಾಹಿತಿ ಎನ್ನುವುದು ಇದರ ಮತ್ತೊಂದು ಆಯಾಮ. 1999ರ ಕಾರ್ಗಿಲ್ ಯುದ್ಧವಾದಾಗ ಅದು ಅವತ್ತಿಗೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಉಪಗ್ರಹಾಧರಿತ ಚಾನೆಲ್ಲುಗಳ ಮೂಲಕ ಮನೆ ಮನೆಗೆ ಬಂತು. ಅಲ್ಲಿಯೂ ಭಾರತದ ‘ದಿಗ್ಗಜ’ ಪತ್ರಕರ್ತರು ಎಂದು ಹೆಸರಿಸಿಕೊಳ್ಳುವವರಿಂದ ಆಕ್ಷೇಪಾರ್ಹ ವರದಿಗಳು ಆದವು. ಅದಿರಲಿ… ಆದರೆ ಆಗಲೂ ಈ ಮಾಹಿತಿಯ ಈಟಿಗಳು ಎಲ್ಲೆಡೆಗಳಿಂದ ಬರುವ ಸಂಭವ ಇದ್ದಿರಲಿಲ್ಲ.
ಆದರೀಗ, ಟ್ವಿಟ್ಟರ್-ಯೂಟ್ಯೂಬ್-ಇನ್ಸ್ತಾ ಇತ್ಯಾದಿಗಳ ಜಮಾನಾ. ಅದಷ್ಟು ಸಾಕಾಗದೆಂಬಂತೆ ಎಂಥೆಂತಹುದೋ ದೃಶ್ಯಗಳನ್ನು ಹೌದೇ ಹೌದೆಂಬಂತೆ ತೋರಿಸಬಲ್ಲ ಕೃತಕ ಬುದ್ಧಿಮತ್ತೆಯ ಪಾತ್ರವೂ ಇರುವ ಕಾಲವಿದು. ಹೀಗಿರುವಾಗ ಅದಾಗಲೇ ನಮ್ಮ ಮನೋಭೂಮಿಕೆಗಳನ್ನು ಮಾಹಿತಿ ಯುದ್ಧವೊಂದು ಅದಾಗಲೇ ಆವರಿಸಿಕೊಂಡುಬಿಟ್ಟಿದೆ. ಭಾರತದ ಯೋಧರು ದೊಡ್ಡ ಸಂಖ್ಯೆಯಲ್ಲಿ ಸತ್ತೇಬಿಟ್ಟಿದ್ದಾರೆ, ಅಲ್ಲೆಲ್ಲೋ ಕಾಶ್ಮೀರದಲ್ಲಿ ಬೆಂಕಿ ಬಿದ್ದುಬಿಟ್ಟಿದೆ ಎಂಬಂತಹ ಮಾಹಿತಿಗಳು ಭಾರತೀಯ ಜನಮಾನಸವನ್ನು ಅಧೀರಗೊಳಿಸಲೆಂದೇ ಭಿತ್ತರಗೊಳ್ಳುತ್ತವೆ.
ಇವತ್ತಿಗೆ ಮಿಲಿಟರಿ ಹಂತದಲ್ಲಿ ಪಾಕಿಸ್ತಾನದ ಬೆನ್ನಿಗೆ ಬಹಿರಂಗವಾಗಿ ನಿಲ್ಲುವ ಧೈರ್ಯ ಬಹಳಷ್ಟು ದೇಶಗಳಿಗೆ ಇಲ್ಲದಿರಬಹುದು. ಆದರೆ, ಮಾಹಿತಿ ಯುದ್ಧದಲ್ಲಿ ಭಾರತಕ್ಕೆ ಹಾನಿ ಮಾಡುವಂಥ ಅಸ್ತ್ರಗಳನ್ನು ಅವು ಬೇರೆ ಬೇರೆ ವೇದಿಕೆಗಳಿಂದ ತೂರಿಬಿಡಬಹುದು. ಇಂಥ ವಿದೇಶಿ ಶಕ್ತಿಗಳು ಪಾಕಿಸ್ತಾನದ ಪರವೇ ಎಂದೇನಲ್ಲ, ಆದರೆ ಭಾರತದ ಔನ್ನತ್ಯವನ್ನು ತಡೆಯುವ ಬಗ್ಗೆ ಹಲವು ಜಾಗತಿಕ ಹಿತಾಸಕ್ತಿಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಹೀಗಾಗಿ ಭಾರತದ ಜನಮಾನಸವನ್ನು ಅಧೀರಗೊಳಿಸುವ, ಇಲ್ಲವೇ ಮತ್ಯಾವುದೋ ಪ್ರಚೋದನೆಗಳಿಗೆ ಜನರನ್ನು ತೊಡಗಿಸುವ ನಿಟ್ಟಿನಲ್ಲಿ ಭಾರಿ ಮಾಹಿತಿ ಪ್ರವಾಹ ಹರಿದುಬರಲಿಕ್ಕಿದೆ. ಫೇಸ್ಬುಕ್, ಯೂಟ್ಯೂಬ್ ಗಳಲ್ಲಿ ಬರುವುದೆಲ್ಲವೂ ನಿಜ ಎಂದು ನಂಬುವ ಜನವರ್ಗವೂ ಇರುವುದು ಒಂದೆಡೆಯಾದರೆ, ಇವಕ್ಕೆಲ್ಲ ತುಂಬ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ ಆ ಮೂಲಕ ಪರೋಕ್ಷವಾಗಿ ಅಂತಹ ಕೋಲಾಹಲ ಎಬ್ಬಿಸುವ ಪೋಸ್ಟುಗಳು ಹೆಚ್ಚು ಮಂದಿಯನ್ನು ರೀಚ್ ಆಗುವಂತೆ ನಾವೇ ಮಾಡಿಬಿಡುತ್ತೇವೆ. ಇಂಥ ಎಲ್ಲವುಗಳಿಂದಲೂ ದೂರ ಇರಬೇಕಾದ ಎಚ್ಚರವು ನಾಗರಿಕರಿಗೆ ಬರಬೇಕಾಗಿದೆ.
ಭಾರತವು ಪಾಕಿಸ್ತಾನಕ್ಕೆ ನೀಡಿರುವ ಪ್ರತಿಘಾತವು ತುಂಬ ಕಾರ್ಯತಂತ್ರಬದ್ಧ ಹಾಗೂ ತಾರ್ಕಿಕವಾದದ್ದು. ಸಾಮಾನ್ಯರ ರೀತಿ ಕೇವಲ ಭಾವನಾತ್ಮಕ ತಳಹದಿಯಲ್ಲಿ ಯೋಚಿಸಿ ಮಾಡಿರುವುದಲ್ಲ. ಹಾಗೆಂದೇ, ಈ ಬಾರಿ ಬರೋಬ್ಬರಿ ಒಂಬತ್ತು ಸ್ಥಳಗಳ ಮೇಲೆ ದಾಳಿ ಮಾಡಿದ್ದರೂ ಯಾವುದೇ ಮಿಲಿಟರಿ ಇಲ್ಲವೇ ನಾಗರಿಕ ಕೇಂದ್ರಗಳನ್ನು ಗುರಿಯಾಗಿಸಿಕೊಳ್ಳದೇ, ಉಗ್ರವಾದಿಗಳೆಂದು ಘೋಷಣೆಯಾಗಿರುವ ಸಂಘಟನೆಗಳ ಕಟ್ಟಡಗಳನ್ನೇ ಮುಖ್ಯವಾಗಿ ಗುರಿಯಾಗಿರಿಸಿಕೊಳ್ಳಲಾಗಿದೆ. ಬುಧವಾರ ಬೆಳಗ್ಗೆ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಭಾರತವು ಈ ಅಂಶವನ್ನು ಆಧಾರಗಳ ಮೂಲಕ ಸ್ಪಷ್ಟವಾಗಿ ತೆರೆದಿರಿಸಿದೆಯಲ್ಲದೇ, ತನ್ನ ಕ್ರಮವು ಯುದ್ಧೋತ್ಕರ್ಷವನ್ನು ಬಯಸಿ ಮಾಡಿರುವಂಥದ್ದಲ್ಲ, ಆದರೆ ಪಾಕಿಸ್ತಾನವು ಇದಕ್ಕೆ ಪ್ರತಿಯಾಗಿ ಮುಂದಡಿ ಇಟ್ಟಿದ್ದೇ ಆದರೆ ಅದಕ್ಕೆ ತೀವ್ರಮಟ್ಟದಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಹೇಳಿದೆ.
ಆದರೆ, ಈಗ ಪಾಕಿಸ್ತಾನವು ಸುಮ್ಮನೇ ಕುಳಿತುಬಿಡುವಂತೆಯೂ ಇಲ್ಲ. ಈ ಹಿಂದೆ ಬಾಲಾಕೋಟ್ ದಾಳಿ ಆದಾಗ ಪ್ರತಿಕ್ರಿಯಿಸಿದಂತೆ ಏನಾದರೂ ಪ್ರತಿಕ್ರಿಯೆ ಕೊಡಲೇಬೇಕಾದ ಸಂದಿಗ್ಧದಲ್ಲಿದೆ. ಆದರೆ, ಭಾರತದಲ್ಲಿ ಭಯೋತ್ಪಾದಕ ಶಿಬಿರಗಳನ್ನು ಕೇಂದ್ರೀಕರಿಸಿಕೊಂಡು ದಾಳಿ ಮಾಡಿದೆವು ಎಂದು ಹೇಳಬಹುದಾದ ಆಯ್ಕೆ ಅದಕ್ಕಿಲ್ಲ. ಹೀಗಾಗಿ, ಪಾಕಿಸ್ತಾನ ನೀಡುವ ಯಾವುದೇ ಪ್ರತಿಕ್ರಿಯೆ ಸಂಘರ್ಷವನ್ನು ಮುಂದುವರಿಸುತ್ತದೆ.
ಇದೇ ಹಂತದಲ್ಲೇ ನಾವು ನಾಗರಿಕರ ಪಾತ್ರವಿರುವುದು. ಬಾಲಾಕೋಟ್ ವಾಯುದಾಳಿಯ ನಂತರ ಆದ ವಿದ್ಯಮಾನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಪಾಕಿಸ್ತಾನವು ಪ್ರತಿಕ್ರಿಯೆ ನೀಡುತ್ತಿದ್ದ ಹಂತದಲ್ಲಿ ಅದಕ್ಕೆ ಸೂಕ್ತವಾಗಿಯೇ ಉತ್ತರಿಸುತ್ತಿದ್ದ ಭಾರತದ ಕಡೆಯಿಂದ ದುರದೃಷ್ಟವಶಾತ್ ಯುದ್ಧವಿಮಾನ ಪತನವಾಗಿ ಅಭಿನಂದನ್ ಸೆರೆಯಾಗುವ ಪರಿಸ್ಥಿತಿ ಬಂತು. ಅವರನ್ನು ಭಾರತ ಯಶಸ್ವಿಯಾಗಿ ಬಿಡಿಸಿಕೊಂಡಿತಾದರೂ ಆ ಹಂತದಲ್ಲಿ ಭಾರತೀಯರನ್ನು ಅಧೀರಗೊಳಿಸುವ, ಹಂಗಿಸುವ, ಅಸಹನೆಗೊಳಿಸುವ ಎಷ್ಟೆಲ್ಲ ಮಾಹಿತಿಪ್ರವಾಹಗಳು ಹರಿದುಬಂದವು ಎಂಬುದನ್ನು ನೆನಪಿಸಿಕೊಳ್ಳಿ. ನಮ್ಮಲ್ಲಿ ಅನೇಕರು ಸಹ ಅದಕ್ಕೆ ಭಾವನಾತ್ಮಕವಾಗಿ ಹೇಗೆಲ್ಲ ಪ್ರತಿಕ್ರಿಯಿಸಿ ಆತಂಕಿತರಾದೆವು ಎಂಬುದನ್ನೂ ನೆನಪಿಸಿಕೊಳ್ಳಿ.
ಈಗಲೂ ಸಹ, ಏನಾದರೂ ಪ್ರತಿಕ್ರಿಯೆ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕುವ ಪಾಕಿಸ್ತಾನದ ಕಡೆಯಿಂದ ಯುದ್ಧೋತ್ಕರ್ಷ ಮುಂದುವರಿಯಬಹುದು. ಇವತ್ತಿಗೆ ಭಾರತವು ಅಂಥ ಎಲ್ಲ ದುಸ್ಸಾಹಸಗಳನ್ನು ಮಟ್ಟಹಾಕಬಲ್ಲ ಮಿಲಿಟರಿ ಬಲ ಮತ್ತು ರಾಜಕೀಯ ಇಚ್ಛಾಶಕ್ತಿ ಎರಡನ್ನೂ ಹೊಂದಿದೆ. ಪಾಕಿಸ್ತಾನವು ನಮ್ಮ ಮಿಲಿಟರಿ ಇಲ್ಲವೇ ನಾಗರಿಕ ಆವಾಸವನ್ನು ಗುರಿಯಾಗಿಸಿಕೊಂಡು ಮಾಡುವ ಯಾವುದೇ ದಾಳಿಗೆ ಹತ್ತುಪಟ್ಟು ತೀವ್ರತೆಯ ಉತ್ತರವನ್ನು ಭಾರತ ಕೊಟ್ಟೇ ಕೊಡುತ್ತದೆ. ಆದರೆ, ಆ ಹಂತವೇನಾದರೂ ಬಂದರೆ ಮಧ್ಯದಲ್ಲಿ ಸಹಜವಾಗಿಯೇ ಭಾರತಕ್ಕೂ ಕೆಲವು ಹಾನಿಗಳು ಆಗಿಯೇ ಆಗುತ್ತವೆ. ಅದೇಕೋ ಎರಡು ಹೆಜ್ಜೆ ಹಿನ್ನಡೆಯಾಗಿಬಿಟ್ಟಿತು ಎಂಬಂತಹ ಸ್ಥಿತಿ ಒಂದಷ್ಟುಗಳಿಗೆ ಕಾಡಿದರೂ ಕಾಡೀತು. ಅಂಥ ಕ್ಷಣಗಳಲ್ಲೇ ಭಾರತದ ಹೊರಗಿನವರು ಮತ್ತು ಕೆಲವು ಭಾರತದಲ್ಲೇ ಇರುವ ವಿಧ್ವಂಸಕ ಮನಸ್ಥಿತಿಗಳಿಂದ ಜನಮಾನಸವನ್ನು ಅಧೀರಗೊಳಿಸುವ ಮಾಹಿತಿ ಕ್ಷಿಪಣಿಗಳು ಟ್ವಿಟ್ಟರ್ -ಫೇಸ್ಬುಕ್ ಇತ್ಯಾದಿಗಳ ಮೂಲಕ ಅಪ್ಪಳಿಸಿಯೇ ಅಪ್ಪಳಿಸುತ್ತವೆ. ಇವಕ್ಕೆಲ್ಲ ಪ್ರತಿಕ್ರಿಯಿಸಬೇಕೋ ಬೇಡವೋ ಎಂಬುದಕ್ಕಿಂತ, ಇಂಥ ವಿಷಯಗಳಲ್ಲಿ ನಮ್ಮ ಅಂತಃಸತ್ತ್ವವನ್ನು ಹಾಗೂ ಮನೋಸ್ಥಿತಿಯನ್ನು ಹೇಗೆ ಕದಡದೇ ಇಟ್ಟುಕೊಂಡಿರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಏಕೆಂದರೆ, ಇವರೆಲ್ಲರ ಉದ್ದೇಶ ನಮ್ಮದೇ ಸರ್ಕಾರದ ಮೇಲೆ, ಮಿಲಿಟರಿ ಪಡೆ ಮೇಲೆ ನಮ್ಮೆಲ್ಲರ ವಿಶ್ವಾಸವನ್ನು ಕುಗ್ಗಿಸುವುದಾಗಿರುತ್ತದೆ.
ಇವತ್ತಿನ ತಡರಾತ್ರಿ ಆದ ಕಾರ್ಯಾಚರಣೆಯ ವರದಿಗಾರಿಕೆಯನ್ನೇ ತೆಗೆದುಕೊಳ್ಳಿ. ರಾಷ್ಟ್ರೀಯ ಸ್ತರದ ಪತ್ರಿಕೆಯೊಂದು ತನ್ನ ವೆಬ್ ತಾಣದ ಮುಖಾಂತರ “ಯುದ್ಧವಿಮಾನವೊಂದು ಪತನವಾಗಿರುವ ಸುದ್ದಿಯನ್ನು ನಮಗೆ ಸರ್ಕಾರದ ಮೂಲಗಳೇ ಖಚಿತಪಡಿಸಿವೆ” ಎಂದು ಬರೆದುಕೊಂಡಿತ್ತು. ಅಂಥ ಯಾವ ಪ್ರಕರಣಗಳೂ ನಡೆದಿಲ್ಲ. ಒಂದೊಮ್ಮೆ ನಡೆದಿರುವ ಬಗ್ಗೆ ಅನುಮಾನವಿದ್ದರೂ, ಇಂಥ ಸಂದರ್ಭಗಳಲ್ಲಾದರೂ ಸರ್ಕಾರದ ಇಲ್ಲವೇ ಮಿಲಿಟರಿಯ ಅಧಿಕೃತ ಪತ್ರಿಕಾ ಹೇಳಿಕೆಗೆ ಕಾಯಬೇಕಲ್ಲವೇ? ಹೀಗೆಲ್ಲ ಸುದ್ದಿ ಮಾಡುವುದು ಕೇವಲ ಅವಸರದಲ್ಲಾದ ಅಚಾತುರ್ಯ ಎಂದುಕೊಳ್ಳಬೇಕಿಲ್ಲ. ಅತ್ತ ಪಾಕಿಸ್ತಾನಿಯರು ತಾವು ಭಾರತದ ಯುದ್ಧವಿಮಾನ ಉರುಳಿಸಿದ್ದೇವೆ ಎಂದು ಸುಳ್ಳೇ ಬೀಗುತ್ತಿರುವಾಗ ಭಾರತದ ಮಾಧ್ಯಮವೊಂದು ಅದಕ್ಕೆ ಪೂರಕ ಸುಳ್ಸುದ್ದಿ ಪ್ರಕಟಿಸುತ್ತದೆ ಎಂದಾದಾಗ, ಇದರಲ್ಲಿ ಜನರ ಮನಸ್ಸಲ್ಲಿ ಹತಾಶೆ-ಅರಾಜಕತೆ ಹರಡುವ ಉದ್ದೇಶವಿತ್ತು ಎಂಬುದು ಸ್ಪಷ್ಟವಾಗುತ್ತದಲ್ಲವೇ?
ಸ್ವಾತಂತ್ರ್ಯೋತ್ತರ ಇತಿಹಾಸ ಗಮನಿಸಿದರೆ ಭಾರತವು ಪಾಕಿಸ್ತಾನದ ವಿರುದ್ಧ ಎಲ್ಲ ಸಮರಗಳನ್ನೂ ಗೆದ್ದಿದೆ. ಬಹಳ ಮುಖ್ಯವಾಗಿ, ಈ ಹಿಂದಿನ ಸಮರಗಳಲ್ಲಿ ಜಾಗತಿಕ ಶಕ್ತಿಗಳು ಬಹಿರಂಗವಾಗಿಯೇ ನಮ್ಮ ವಿರುದ್ಧವಿದ್ದಾಗಲೂ ಆ ಯುದ್ಧಗಳನ್ನು ಭಾರತ ದಕ್ಕಿಸಿಕೊಂಡಿದೆ. ಹೀಗಿರುವಾಗ, ಇವತ್ತಿಗೆ ತೆರೆದುಕೊಳ್ಳುವ ಯಾವುದೇ ಸಮರದಲ್ಲಿ ಜಗತ್ತಿನ ಬಹುತೇಕ ದೇಶಗಳು ಬಹಿರಂಗವಾಗಿಯಂತೂ ಭಾರತದ ಮೇಲೆ ಯಾವುದೇ ಒತ್ತಡವನ್ನು ಹಾಕುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಯಾವುದೇ ಯುದ್ಧೋತ್ಕರ್ಷದಲ್ಲಿ ಅಂತಿಮವಾಗಿ ಭಾರತದ್ದೇ ವಿಜಯವೆಂಬುದೇನೋ ಶತಃಸಿದ್ಧ. ಆದರೆ, ಇಲ್ಲಿ ಇನ್ನೊಂದು ವಾಸ್ತವವಿದೆ. ಈ ಹಿಂದಿನ ಸಂಘರ್ಷಗಳಲ್ಲೂ ಸಾವಿರಗಳ ಸಂಖ್ಯೆಯಲ್ಲಿ ನಮ್ಮಲ್ಲೂ ಹುತಾತ್ಮರಾದವರಿದ್ದರು. ಸಮರಾಂಗಣದಲ್ಲಿ ಅದು ನಿರೀಕ್ಷಿತವೇ. ಆದರೆ ನಮ್ಮಲ್ಲಿ ಹೆಚ್ಚಿನವರು ಯುದ್ಧವನ್ನು ಹತ್ತಿರದಿಂದ ಅನುಭವಿಸಿಲ್ಲ, ಅದು ತಂದೊಡ್ಡುವ ಕಂಪನಗಳಿಗೆ ನಮ್ಮನ್ನು ಈಡು ಮಾಡಿಕೊಂಡಿಲ್ಲ.
ಹೀಗಿರುವಾಗ, ತಕ್ಷಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೀರೋತ್ಕರ್ಷ ತೋರಿಸಿದರೂ ಸಮರವೇನಾದರೂ ತೆರೆದುಕೊಂಡರೆ ಬಹಳಷ್ಟು ಮಂದಿ ವೋಕ್ ಮನಸ್ಥಿತಿಗೆ ಹೊರಳಿಕೊಳ್ಳುವ ಅಪಾಯವೂ ಇದೆ. ಏಕೆಂದರೆ ಬಾಡಿ ಬ್ಯಾಗುಗಳನ್ನು, ರಕ್ತವನ್ನು ಸಹಿಸಿಕೊಳ್ಳುವ ಸ್ಥಿತಿ ಹೆಚ್ಚಿನ ಒಂಬತ್ತು-ಐದರ ಕಚೇರಿ ಮನಸ್ಥಿತಿಗಳಿಗಿರುವುದಿಲ್ಲ.
ಯುದ್ಧೋತ್ಕರ್ಷವೇನಾದರೂ ಆದರೆ, ಕೆಲವು ಸಾಂದರ್ಭಿಕ ಆಘಾತಗಳನ್ನೇ ವೈಭವೀಕರಿಸಿ “ನೋಡಿ, ಮೋದಿ ಸರ್ಕಾರ ಅವಸರದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೇ ತಪ್ಪು ಮಾಡಿತು” ಎಂದು ಬಿಂಬಿಸುವ ಕೆಲಸ ಮಾಧ್ಯಮದ ಕೆಲವು ವರ್ಗದಲ್ಲಿ ಆಗಲಿದೆ. ಇಕಾನಮಿ ಬರ್ಬಾದ್ ಆಗಲಿದೆ ಎಂಬ ಗುಲ್ಲು ಸಹ ದೊಡ್ಡಮಟ್ಟದಲ್ಲಿ ಏಳಬಹುದು. ಇನ್ನೂ ಬೇರೆ ಬೇರೆ ಬಗೆಯಲ್ಲಿ ಜನಮಾನಸವನ್ನು ಅಧೀರಗೊಳಿಸುವ, ವಿಶ್ವಾಸ ಕುಗ್ಗಿಸುವ ಕೆಲಸಗಳಾಗಬಹುದು.
ನಾವೆಲ್ಲ ಯೋಧರಂತೆ ಇರಬೇಕಾದದ್ದು ಇವುಗಳನ್ನು ಎದುರಿಸುವ ವಿಚಾರದಲ್ಲಿ. ಯುದ್ಧ ಪರಿಸ್ಥಿತಿಯಲ್ಲಿ ಕೇವಲ ನಮ್ಮ ಸರ್ಕಾರ ಪ್ರಕಟಿಸುವ, ಹಂಚಿಕೊಳ್ಳುವ ಮಾಹಿತಿಗಳನ್ನು ಮಾತ್ರವೇ ನಂಬಬೇಕು. ಉಳಿದ ಸಮಯದಲ್ಲಿ ಸರ್ಕಾರ ಮತ್ತು ಅಧಿಕಾರಿಗಳನ್ನು ಅನುಮಾನದಿಂದ ಕಾಣುವುದಕ್ಕೆ, ಪ್ರಶ್ನಿಸುವುದಕ್ಕೆ ಅವಕಾಶಗಳಿವೆ. ಆದರೆ ಯುದ್ಧೋತ್ಕರ್ಷದ ಸಂದರ್ಭಗಳಲ್ಲಿ ಅಲ್ಲ.
ಹಾಗೆಂದು ನಾವೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಯಾವತ್ತಿಗೂ ಭಾವೋದ್ವೇಗ, ವೀರೋತ್ಕರ್ಷದ ಭಾವಗಳಿಂದ ಮಾತ್ರವೇ ಪ್ರತಿಕ್ರಿಯಿಸಿಕೊಂಡಿರಬೇಕು ಎಂದೇನೂ ಅಲ್ಲ. ವೀರಘೋಷದ ಜತೆಗೆ ದೃಢಚಿತ್ತ ಹಾಗೂ ಧರ್ಮಪ್ರಜ್ಞೆ ಸಹ ಯೋಧನಿಗಿರಬೇಕಾದ ಗುಣಗಳು. ಇಂಥದೊಂದು ಧರ್ಮಪ್ರಜ್ಞೆಯನ್ನು ಭಾರತವು ಹೆಜ್ಜೆ ಹೆಜ್ಜೆಗೂ ಹೇಗೆ ಪ್ರದರ್ಶಿಸಿದೆ ಗಮನಿಸಿ. ಪೆಹಲ್ಗಾಂವಿನಲ್ಲಿ ವಿಧವೆಯಾದವರಿಗೆ ಸಿಗಬೇಕಿದ್ದ ನ್ಯಾಯವಿದು ಎಂಬರ್ಥದಲ್ಲಿ ಆಪರೇಷನ್ ಸಿಂಧೂರ ಎಂದೇ ಕಾರ್ಯಾಚರಣೆಗೆ ಹೆಸರಿಡಲಾಯಿತು. ಈ ಕಾರ್ಯಾಚರಣೆಯ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ಮೂವರು ಅಧಿಕಾರಿಗಳ ಪೈಕಿ ಇಬ್ಬರು ಭಾರತೀಯ ಮಹಿಳಾ ಸೇನಾನಿಗಳು. ಕಾರ್ಯಾಚರಣೆ ಹಂತದಲ್ಲಿ ಸಹ ಕೇವಲ ಆಕ್ರೋಶ ಹೊರಹಾಕುವುದಷ್ಟೇ ಆಗಿಲ್ಲ. ಹಾಗಾಗಿದ್ದರೆ ಪಾಕಿಸ್ತಾನದಲ್ಲಿ ಕೈಗೆ ಸಿಕ್ಕಿದ್ದರ ಮೇಲೆಲ್ಲ ದಾಳಿ ನಡೆಸಬಹುದಿತ್ತು. ಅಲ್ಲೂ ಕರಾರುವಾಕ್ ಆಗಿ ಉಗ್ರ ಗುರಿಗಳನ್ನು ನಿರ್ದೇಶಿಸಲಾಗಿದೆ.
ನಮ್ಮ ವ್ಯವಸ್ಥೆ ಮತ್ತು ಯೋಧರಿಗಿರುವ ಈ ಎಲ್ಲ ತರ್ಕಬದ್ಧ ದೃಢತೆ ಮತ್ತು ನಡತೆಗಳು, ಯುದ್ಧೋತ್ಕರ್ಷ ಹೊತ್ತಿಕೊಂಡ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರಾದ ನಮ್ಮೆಲ್ಲರದ್ದೂ ಆಗಬೇಕಿವೆ.
- ಚೈತನ್ಯ ಹೆಗಡೆ
cchegde@gmail.com
Advertisement