ಮುಂಬೈನಲ್ಲಿ ಬ್ಯಾಟ್ಸಮನ್ ಗಳದ್ದೇ ಅಬ್ಬರ; ಸುಳಿವು ನೀಡಿದ ಸಿಬ್ಬಂದಿ
ಮುಂಬೈ: ತೀವ್ರ ನಿರೀಕ್ಷೆ ಹುಟ್ಟಿಸಿರುವ ಐಸಿಸಿ ಟಿ20 ವಿಶ್ವಕಪ್ ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ರನ್ ಗಳ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗಳು ಮಾಹಿತಿ ನೀಡಿರುವಂತೆ ಟಿ20 ಮಾದರಿಯ ಕ್ರಿಕೆಟ್ ಗೆ ಪಿಚ್ ಹೇಳಿ ಮಾಡಿಸಿದಂತಿದ್ದು, ರನ್ ಗಳ ಹೊಳೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ವಾಂಖೆಡೆ ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ಪಿಚ್ ಅನ್ನು ಪಂದ್ಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಬ್ಯಾಟ್ಸಮನ್ ಸ್ನೇಹಿ ಪಿಚ್ ಎಂದು ಹೇಳಲಾಗುತ್ತಿದೆ. ಬ್ಯಾಟ್ಸಮನ್ ಸಂವೇದನಾ ಶೀಲನಾಗಿದ್ದರೆ ಖಂಡಿತಾ ಉತ್ತಮ ಮೊತ್ತ ಕಲೆಹಾಕಬಲ್ಲ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ಮೈದಾನದ ಮಧ್ಯಭಾಗದಲ್ಲಿರುವ ಪಿಚ್ ಅನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪಿಚ್ ಮೈಲ್ಮೈ ಮೇಲೆ ಕೊಂಚ ಹುಲ್ಲು ಇದ್ದು, ಇದು ಖಂಡಿತ ಸ್ಪಿನ್ನರ್ ಗಳಿಗೆ ನೆರವಾಗಬಲ್ಲದು ಎಂದು ಹೇಳಲಾಗುತ್ತಿದೆ.
48 ಎಸೆತಗಳಲ್ಲೇ ಶತಕ ಸಿಡಿಸಿದ್ದ ಗೇಯ್ಲ್
ಇನ್ನು ದೈತ್ಯ ವಿಂಡೀಸ್ ತಂಡದ ದೈತ್ಯ ಕ್ರಿಸ್ ಗೇಯ್ಲ್ ಇದೇ ಮೈದಾನದಲ್ಲಿ ವೇಗದ ಶತಕ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಯ್ಲ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿ ವಿಂಡೀಸ್ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ದಕ್ಷಿಣ ಆಫ್ರಿಕಾ ಕೂಡ ಇದೇ ವಾಂಖೆಡೆ ಮೈದಾನದಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಬರೊಬ್ಬರಿ 438 ರನ್ ಪೇರಿಸಿತ್ತು. ಆ ಪಂದ್ಯದಲ್ಲಿ ಭಾರತ 214 ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ ವಾಂಖೆಡೆಯಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಾಗಿರುವ ಸಾಧ್ಯತೆಗಳಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ