ಬೆಂಗಳೂರು: ಅವಶ್ಯಕ ಸಂದರ್ಭದಲ್ಲಿ ನಾನು ಮತ್ತು ಎಬಿ ಡಿವಿಲಿಯರ್ಸ್ ವಿಕೆಟ್ ಕಳೆದುಕೊಂಡಿದ್ದೇ ಪಂದ್ಯದ ಸೋಲಿಗೆ ಕಾರಣವಾಯಿತು ಎಂದು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನನ್ನ ಮತ್ತು ಎಬಿ ಡಿವಿಲಿಯರ್ಸ್ ವಿಕೆಟ್ ಬೇಗ ನೀಡಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು. ನಮ್ಮ ನಿರ್ಗಮದ ಲಾಭ ಪಡೆಯುವಲ್ಲಿ ಹೈದರಾಬಾದ್ ಸನ್ರೈಸರ್ಸ್ ತಂಡ ಯಶಸ್ವಿಯಾಯಿತು. ಬಳಿಕ ಒತ್ತಡದಲ್ಲಿ ಆಡುವಲ್ಲಿ ಕೆಳಕ್ರಮಾಂಕದ ಬ್ಯಾಟ್ಸಮನ್ ವಿಫಲರಾದ ಹಿನ್ನಲೆಯಲ್ಲಿ ತಂಡ ಸೋಲುವಂತಾಯಿತು ಎಂದು ಹೇಳಿದರು.
"ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ನಾವು ಅತ್ಯುತ್ತಮ ಆಟ ಪ್ರದರ್ಶಿಸಿದ್ದು, ಆ ಬಗ್ಗೆ ನನಗೆ ಹೆಮ್ಮೆ ಇದೆ. ತವರಿಣ ಅಂಗಣ ಬೆಂಗಳೂರಿನಲ್ಲಿ ಈ ಬಾರಿ ನಾವು ಉತ್ತಮ ಆಟ ಪ್ರದರ್ಶಿಸಲಾಗದೇ ಇರುವುದು ಬೇಸರ ತಂದಿದೆ. ನಮ್ಮ ತಂಡದ ಆರಂಭ ಉತ್ತಮವಾಗಿಯೇ ಇತ್ತು. ಆದರೆ ನಾನು ಮತ್ತು ಎಬಿ ಡಿ ವಿಲಿಯರ್ಸ್ ಬೇಗ ನಿರ್ಗಮಿಸಿದೆವು. ಇದು ತಂಡದ ಪ್ರದರ್ಶನದ ಮೇಲೆ ಸಾಕಷ್ಟು ಒತ್ತಡವನ್ನುಂಟು ಮಾಡಿತು. ಬಳಿಕ ಬಂದದ ಆಟಗಾರರು ಒತ್ತಡ ನಿಭಾಯಿಸುವಲ್ಲಿ ವಿಫಲರಾದರು. ಸೋಲಿಗೆ ಇದೇ ಪ್ರಮುಖ ಕಾರಣವಾಗಿದೆ. ವಿಲಿಯರ್ಸ್ ಜತೆ ಇನ್ನು ಕೆಲ ಸಮಯ ಜತೆಯಾಗಿ ನಿಂತಿದ್ದರೆ ಫಲಿತಾಂಶದ ದಿಕ್ಕು ಬದಲಾಯಿಸಬಹುದಿತ್ತು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಆರೆಂಜ್ ಕ್ಯಾಪ್ ನನಗೆ ಸಿಕ್ಕ ಹೆಚ್ಚುವರಿ ಗೌರವ
ಇದೇ ವೇಳೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ ತಮ್ಮ ಸಿಕ್ಕ ಆರೆಂಜ್ ಕ್ಯಾಪ್ ಗೌರವ ಬಗ್ಗೆ ಮಾತನಾಡಿ, ಇದು ನನಗೆ ಸಿಕ್ಕ ಹೆಚ್ಚುವರಿ ಗೌರವ ಎಂದು ಹೇಳಿದರು. ಇದೇ ವೇಳೆ "ತಾವು ಉಳಿದ ಕಡೆ ತೋರಿದ ಪ್ರದರ್ಶನಕ್ಕೆ ಹೋಲಿಕೆ ಮಾಡಿಕೊಂಡರೆ ಬೆಂಗಳೂರಿನಲ್ಲಿ ಉತ್ತಮ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಪ್ರಮುಖ ಅಂಶವೇನೆಂದರೆ ಸನ್ ರೈಸರ್ಸ್ ಹೈದರಾಬಾದ್ ಗೆಲುವಿಗೆ ಅವರ ಬೌಲಿಂಗ್ ದಾಳಿ ಕೂಡ ಕಾರಣವಾಗಿತ್ತು. ನಾನು ದೊಡ್ಡ ಮೊತ್ತ ಗಳಿಸಿದರೆ ತಂಡದ ಗೆಲುವು ಸಾಧ್ಯವಾಗಬಹುದು ಎಂದು ತಿಳಿದಿದ್ದೆ.
ಆದರೆ ಅದು ಸಾಧ್ಯವಾಗಲಿಲ್ಲ. ಒಟ್ಟಾರೆ ನಾವು ಪಂದ್ಯ ಕಳೆದುಕೊಂಡಿದ್ದೇವೆ. ಈ ಟೂರ್ನಿಯಲ್ಲಿ ನಾಲ್ಕು ಶತಕ ಗಳಿಕೆ, ಅತಿ ಹೆಚ್ಚು ಸಿಕ್ಸರ್ ಗಳಿಕೆ ನನ್ನಿಂದ ಸಾಧ್ಯವಾಗಿದೆ ಎನ್ನುವುದು ನನಗೇ ಅಚ್ಚರಿಯನ್ನುಂಟು ಮಾಡುತ್ತಿದೆ. ಇದು ನನಗೆ ಸಿಕ್ಕ ಗೌರವ ಎಂದಷ್ಟೇ ಹೇಳುತ್ತೇನೆ. ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ ಎಂದು ಕೊಹ್ಲಿ ಹೇಳಿದರು.
Advertisement