ಹೊಸ ಸವಾಲುಗಳನ್ನು ಎದುರಿಸಲು ನಾನು ಸದಾ ಸಿದ್ಧ: ನೂತನ ಕೋಚ್ ರವಿ ಶಾಸ್ತ್ರಿ
ನವದೆಹಲಿ: ಹೊಸ ಬಗೆಯ ಸವಾಲುಗಳನ್ನು ಎದುರಿಸಲು ನಾನು ಸದಾ ಸಿದ್ಧನಿರುತ್ತೇನೆ ಎಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿಗೆ ಲಂಡನ್ ನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರವಿಶಾಸ್ತ್ರಿ, ಸಾಮಾನ್ಯವಾಗಿ ನಾನು ಸದಾಕಾಲ ಹೊಸ ಸವಾಲುಗಳನ್ನು ಇಷ್ಟಪಡುತ್ತೇನೆ. ಈ ಹಿಂದೆ ತಂಡದ ನಿರ್ದೇಶಕನಾಗಿದ್ದಾಗಲೂ ಸವಾಲು ಎದುರಿಸಿದ್ದೆ. ಇದೀಗ ಕೋಚ್ ಜಬಾವ್ದಾರಿ ನೀಡಲಾಗಿದ್ದು, ಇದೂ ಕೂಡ ಒಂದು ಬಗೆಯ ಹೊಸ ಸವಾಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಂಡದ ಕುರಿತು ಮಾತನಾಡಿದ ರವಿಶಾಸ್ತ್ರಿ, ಹಾಲಿ ಭಾರತ ತಂಡ ಉತ್ತಮವಾಗಿದೆ. ನನ್ನ ಅಭಿಪ್ರಾಯದಂತೆ ಈ ಹಿಂದಿನ ಎಲ್ಲ ಭಾರತ ತಂಡಕ್ಕಿಂತ ಇದು ಅತ್ಯುತ್ತಮ ಟೆಸ್ಟ್ ತಂಡವಾಗಬಲ್ಲದು. ಹಾಲಿ ತಂಡದಲ್ಲಿನ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಇನ್ನೂ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಅಂತೆಯೇ ವಿಶ್ವದ ಯಾವುದೇ ದೇಶಕ್ಕೆ ತೆರಳಿ ಉತ್ತಮ ಟೆಸ್ಟ್ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಉತ್ತಮ ಪೇಸರ್ ಗಳ ದಂಡೇ ಇದ್ದು, ಸಾಕಷ್ಟು ಆಯ್ಕೆಗಳಿವೆ ಎಂದು ಶಾಸ್ತ್ರಿ ಹೇಳಿದ್ದಾರೆ.
ಅಂತೆಯೇ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರೊಂದಿಗೆ ಸಂಘರ್ಷದ ಕುರಿತು ಮಾತನಾಡಿದ ರವಿಶಾಸ್ತ್ರಿ, ನಾವಿಬ್ಬರೂ ತಂಡ ಮಾಜಿ ನಾಯಕು. ತಂಡದ ಹಿತದೃಷ್ಟಿಯಿಂದ ನಮ್ಮಿಬ್ಬರ ನಡುವೆ ಚರ್ಚೆ, ವಾಕ್ಸಮರ ಸಾಮಾನ್ಯ, ಆದರೆ ಇಬ್ಬರಿಗೂ ಪರಸ್ಪರರ ಕುರಿತು ಗೌರವವಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿಯೂ ಕೋಚ್ ಹುದ್ದೆ ಅರ್ಜಿ ಸಲ್ಲಿಸಿದ್ದ ರವಿಶಾಸ್ತ್ರಿ ಇದೇ ಸೌರವ್ ಗಂಗೂಲಿ ಅವರ ಕಾರಣದಿಂದಾಗಿ ಕೋಚ್ ಹುದ್ದೆಗೆ ಆಯ್ಕೆಯಾಗಿರಲಿಲ್ಲ ಎಂಬ ಮಾತಿದೆ. ಇದಾದ ಬಳಿಕ ಗಂಗೂಲಿ ಕುರಿತಂತೆ ರವಿಶಾಸ್ತ್ರಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದರು, ಗಂಗೂಲಿ ಕೂಡ ಅವರದೇ ಧಾಟಿಯಲ್ಲಿ ತಿರುಗೇಟು ನೀಡಿದ್ದರು. ಇದೀಗ ನಿನ್ನೆ ನಡೆದ ಕೋಚ್ ಆಯ್ಕೆ ಸಂದರ್ಭದಲ್ಲೂ ಗಂಗೂಲಿ ರವಿಶಾಸ್ತ್ರಿ ಆಯ್ಕೆಯನ್ನು ವಿರೋಧಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ