ದುಬೈ: ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಬಿಟ್ಟು ಉಳಿದ ಆಟಗಾರರೊಂದಿಗೆ ನನಗೆ ಆತ್ಮೀಯ ಸ್ನೇಹವಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿದ್ದು, ಜೂನ್ 4ರಂದು ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೆಂದು ಐಸಿಸಿ ವೆಬ್ ಸೈಟ್ ಗೆ ಬರೆದ ಲೇಖನದಲ್ಲಿ ಆಫ್ರಿದಿ ಮೇಲಿನಂತೆ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ಆಟಗಾರರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಜತೆಗೆ ನನಗೆ ಆತ್ಮೀಯ ಒಡನಾಟವಿದೆ. ಆದರೆ ಗೌತಮ್ ಗಂಭೀರ್ ಮಾತ್ರ ನನ್ನೊಂದಿಗೆ ಸಿಟ್ಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
ಪಂದ್ಯವೊಂದರಲ್ಲಿ ಗೌತಮ್ ಗಂಭೀರ್ ಮತ್ತು ನನ್ನ ನಡುವೆ ಬಿರುಸಿನ ಮಾತುಕತೆಯಾಗಿತ್ತು. ಅದು ವಿಶ್ವಾದ್ಯಂತ ಸುದ್ದಿಯಾಗಿತ್ತು. ಆದರೆ ನಾನು ಇದೆಲ್ಲ ಆಟದಲ್ಲಿ ಮಾಮೂಲು ಎಂಬ ಕಾರಣಕ್ಕೆ ಅದನ್ನು ಮರೆತು ಬಿಟ್ಟಿದ್ದೇನೆ. ಗಂಭೀರ್ ಮಾತ್ರ ಅದರಿಂದ ಇನ್ನೂ ಹೊರಬಂದಿಲ್ಲ. ಅವರಿಗೆ ಒಳಿತಾಗಲಿ ಎಂದು ಆಫ್ರಿದಿ ಹೇಳಿದ್ದಾರೆ.