ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕಿರೋನ್ ಪೊಲಾರ್ಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ, ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿತು.
ಟಿ-20 ಸರಣಿಯಲ್ಲಿ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಜೋಡಿಯೇ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಪ್ರಾರಂಭಿಸಿದರು. ಈಗಾಗಲೇ ಟಿ-20 ಸರಣಿ ಮಡಿಲಿಗೆ ಹಾಕಿಕೊಂಡಿರುವ ಕೊಹ್ಲಿ ಪಡೆ, ಏಕದಿನ ಸರಣಿ ಮೇಲೂ ಚಿತ್ತ ಹರಿಸಿದೆ. ಶಿವಂ ದುಬೆ ಅವರು ಚೊಚ್ಚಲ ಏಕದಿನ ಪಂದ್ಯಕ್ಕೂ ಇಂದು ಪದಾಪರ್ಣೆ ಮಾಡಿದರು.
ಟಾಸ್ ಸೋತ ಬಳಿಕ ಮಾತನಾಡಿದ ಕೊಹ್ಲಿ, "ಮೊದಲು ಬ್ಯಾಟಿಂಗ್ ಮಾಡಲು ಖುಷಿಯಾಗುತ್ತಿದೆ. ಅಂಗಳ ಸಂಪೂರ್ಣ ಒಣಗಿದೆ. ಗೌರವ ಮೊತ್ತವನ್ನು ಸುಲಭವಾಗಿ ಗಳಿಸುತ್ತೇವೆ. ಆದರೆ, ವೆಸ್ಟ್ ಇಂಡೀಸ್ ತಂಡದ ಎದುರು ಉತ್ತಮ ಮೊತ್ತ ಕಲೆ ಹಾಕುವುದು ಅಷ್ಟೊಂದು ಸುಲಭವಲ್ಲ. ಅವರನ್ನು ನಾವು ಹಗುರವಾಗಿ ಪರಿಗಣಿಸಲ್ಲ. ಏಕೆಂದರೆ, ಅವರದು ಅಪಾಯಕಾರಿ ತಂಡವಾಗಿದೆ ಎಂದರು.
Advertisement