ಮ್ಯಾಂಚೆಸ್ಟರ್: ಐಸಿಸಿ ಏಕದಿನ ವಿಶ್ವಕಪ್ ನಿಂದ ಟೀಂ ಇಂಡಿಯಾ ಹೊರಬಿದ್ದ ಬೆನ್ನಲ್ಲೇ
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಗೆ ಗುಡ್ ಬೈ ಹೇಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಧೋನಿ ನಿವೃತ್ತಿ ಬಗ್ಗೆ ತಮಗೆ ಏನನ್ನೂ ಹೇಳಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.
ಇಂದು ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ 50 ರನ್ ಗಳಿಸುವ ಮೂಲಕ ವಿರೋಚಿತ ಹೋರಾಟ ನೀಡಿದರು. ಆದರೆ ನಿರ್ಣಾಯಕ ಹಂತದಲ್ಲಿ ರನೌಟ್ಗೆ ಬಲಿಯಾಗುವುದರೊಂದಿಗೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು.
ಧೋನಿ ಅವರು ನಾಯಕ ಅಥವಾ ತಂಡದ ಸಹ ಆಟಗಾರರಿಗೆ ತಮ್ಮ ನಿವೃತ್ತಿ ಬಗ್ಗೆ ಮಾಹಿತಿ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ಅವರು ನಿವೃತ್ತಿ ಬಗ್ಗೆ ತಮಗೆ ಏನನ್ನೂ ಹೇಳಿಲ್ಲ ಎಂದರು.
ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ಸ್ ಪಂದ್ಯದಲ್ಲಿ ಸೋಲು ಅನುಭವಿಸಲು, 45 ನಿಮಿಷದಲ್ಲಿ ತಂಡ ನೀಡಿದ ಕಳಪೆ ಪ್ರದರ್ಶನವೇ ಕಾರಣ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
'ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿ, ಮಹತ್ವದ ಪಂದ್ಯದಲ್ಲಿ ಎಡವಿದ್ದು ಬೇಸರ ತಂದಿದೆ. 45 ನಿಮಿಷದ ಕಳಪೆ ಆಟದಿಂದಲೇ ನಾವು ಟೂರ್ನಿಯಿಂದ ಹೊರ ನಡೆದೆವು. ನ್ಯೂಜಿಲೆಂಡ್ ತಂಡ ಉತ್ತಮ ಪ್ರದರ್ಶನ ನೀಡಿತು' ಎಂದು ಹೇಳಿದ್ದಾರೆ.