ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಸಂವಿಧಾನದ ಅಡಿಯಲ್ಲಿ ಅಕ್ಟೋಬರ್ 3 ರಂದು ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಜ್ಜಾಗಿದ್ದು, ಭಾರತ ತಂಡದ ಮಾಜಿ ಆಲ್ ರೌಂಡರ್ ರೋಜರ್ ಬಿನ್ನಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
1983ರ ಕ್ರಿಕೆಟ್ ವಿಶ್ವಕಪ್ ಹೀರೊ ರೋಜರ್ ಬಿನ್ನಿ ಈ ಹಿಂದೆ ಬ್ರಿಜೇಶ್ ಪಟೇಲ್ ಮತ್ತು ಅನಿಲ್ ಕುಂಬ್ಳೆ ಅವರ ಅಧಿಕಾರ ಅವಧಿಯಲ್ಲಿ ಕೆಎಸ್ ಸಿಎ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇದೀಗ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆ ಪಡೆಯುವುದು ಬಹುತೇಕ ಖಚಿತವಾಗಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಕೆಎಸ್ ಸಿಎ ಅಧಿಕಾರಿಯೊಬ್ಬರು ರೋಜರ್ ಬಿನ್ನಿ ಅವಿರೋಧ ಆಯ್ಕೆಯನ್ನು ಖಾತ್ರಿ ಪಡಿಸಿದ್ದಾರೆ.
ಅಕ್ಟೋಬರ್ 3 ರಂದು ಕೆಎಸ್ ಸಿಎ ವಾರ್ಷಿಕ ಮಹಾಸಭೆ ನಡೆಯಲಿದ್ದು, ಇದೇ ವೇಳೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿದಂತೆ ವಿವಿಧ ಅಧಿಕಾರಿ ಹುದ್ದೆಗಲಿಗೆ ಮತ್ತು 11 ಮಂದಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.
Advertisement